ಧರ್ಮ, ಸಂಸ್ಕೃತಿ ಶಿಕ್ಷಣಕ್ಕೆ ಆದ್ಯತೆ ನೀಡಿ: ಪೇಜಾವರ ಶ್ರೀ
ಉಡುಪಿ, ಮಾ.30: ಧರ್ಮ, ಸಂಸ್ಕೃತಿ ಶಿಕ್ಷಣ, ಸೇವೆಗೆ ಆದ್ಯತೆ ನೀಡುವಂತೆ ಪರ್ಯಾಯ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥರು ಕರೆ ನೀಡಿದ್ದಾರೆ. ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಬುಧವಾರ ವಿಶ್ವ ಹಿಂದು ಪರಿಷತ್ತಿನ ಅಖಿಲ ಭಾರತೀಯ ಸತ್ಸಂಗ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ, ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥ, ಬನ್ನಂಜೆ ರಾಘವೇಂದ್ರ ತೀರ್ಥ, ವಿಹಿಂಪ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅ.ಭಾ. ಸಂಯುಕ್ತ ಕಾರ್ಯದರ್ಶಿ ರಾಘವಲು, ಉಪಾಧ್ಯಕ್ಷ ಜಗನ್ನಾಥ ಶಾಹಿ, ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು. ಅ.ಭಾ.ಸಂಯುಕ್ತ ಜೊತೆ ಕಾರ್ಯದರ್ಶಿ ಸಪನ್ ಮುಖರ್ಜಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ವಂದಿಸಿದರು. ಅ.ಭಾ. ಸತ್ಸಂಗ ಪ್ರಮುಖ್ ಡಾ. ವಸಂತ ರಥ್ ಪ್ರಾಸ್ತಾವಿಸಿದರು.
ಉಡುಪಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಸತ್ಸಂಗ ವರ್ಗ ಐದು ದಿನ ನಡೆಯಲಿದ್ದು, ಈಶಾನ್ಯ ಭಾರತದ ರಾಜ್ಯಗಳು, ಜಮ್ಮು ಕಾಶ್ಮೀರವೂ ಸೇರಿದಂತೆ ವಿಹಿಂಪದ 44 ಪ್ರಾಂತಗಳಿಂದ 152 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.