ಕೆಎಂಸಿ ಆಸ್ಪತ್ರೆ ವಿರುದ್ಧ ಲೋಕಾಯುಕ್ತಕ್ಕೆ ದೂರು
ಮಂಗಳೂರು, ಮಾ. 31: ನಗರದ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯ, ಆರ್ಟಿಐ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ಎಂಬವರು ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಎಂಸಿ (ಕಸ್ತೂರ್ಬಾ ಮೆಡಿಕಲ್ ಕಾಲೇಜು)ಯ ಅವ್ಯವಹಾರಗಳ ಕುರಿತು ಲೋಕಾಯುಕ್ತದಲ್ಲಿ ಮೂರು ಪ್ರಕರಣಗಳನ್ನು ಇಂದು ದಾಖಲಿಸಿದ್ದಾರೆ.
ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರು, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ರಾಜೇಶ್ವರಿದೇವಿ, ಲೇಡಿಗೋಶನ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ವನಿತಾ ವಿರುದ್ಧ ದೂರುಗಳು ದಾಖಲಾಗಿವೆ.
1954ರಲ್ಲಿ ಆಗಿನ ಮದ್ರಾಸ್ ಸರಕಾರವು ಒಂದು ವರ್ಷದ ಅವಧಿಗೆ ಮಾತ್ರ ವೆನ್ಲಾಕ್ ಮತ್ತು ಕೆಎಂಸಿ ನಡುವಿನ ಒಪ್ಪಂದದ ಆದೇಶ ಹೊರಡಿಸಿತ್ತು. ಆದರೆ ಈವರೆಗೂ ಸರಕಾರದ ಯಾವುದೇ ಅಧಿಕೃತ ಆದೇಶವಿಲ್ಲದೆ ಕೆಎಂಸಿಯು ವೆನ್ಲಾಕ್ ಆಸ್ಪತ್ರೆಯ ಕ್ಲಿನಿಕಲ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದೆ. ವೆನ್ಲಾಕ್ನ ಸರ್ಕಾರಿ ವೈದ್ಯಾಧಿಕಾರಿಗಳನ್ನು ಕೆಎಂಸಿಯು ನಿಯಮ ಬಾಹಿರವಾಗಿ ಪ್ರೊಫೆಸರ್ಗಳನ್ನಾಗಿ, ಅಸಿಸ್ಟೆಂಟ್ ಪ್ರೊಫೆಸರ್ಗಳನ್ನಾಗಿ ನೇಮಕ ಮಾಡಿದೆ. ಲೇಡಿಗೋಶನ್ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಿಸಿರುವುದಾಗಿ ಸುಳ್ಳು ಹೇಳಿ ವೆನ್ಲಾಕ್ ಆಸ್ಪತ್ರೆಯಲ್ಲಿ ತನ್ನ ವಿದ್ಯಾರ್ಥಿಗಳ ಕ್ಲಿನಿಕಲ್ ಶುಲ್ಕದಲ್ಲಿ ಶೇ.50ಕ್ಕೂ ಹೆಚ್ಚು ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರೆ ಯಾವುದೇ ಕಟ್ಟಡವನ್ನು ಕಟ್ಟಿಕೊಟ್ಟಿಲ್ಲ ಎಂದು ಪಾಜಪಳ್ಳ ದೂರಿನಲ್ಲಿ ಆರೋಪಿಸಿದ್ದಾರೆ.