ವರದಕ್ಷಿಣೆ ಕಿರುಕುಳ: ಪತ್ನಿಯಿಂದ ದೂರು
ಉಪ್ಪಿನಂಗಡಿ, ಮಾ.31: ಪ್ರೀತಿಸಿ ಮದುವೆಯಾದ ಪತಿ ವರದಕ್ಷಿಣೆಗಾಗಿ ತನ್ನನ್ನು ನಡುರಾತ್ರಿ ಮನೆಯಿಂದ ಹೊರಗಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಸಾಲ್ಮರ ನಿವಾಸಿ ಸದಾಶಿವ ಎಂಬವರ ಪತ್ನಿ ಶೋಭಾ ಮನಸಾರೆ ಪ್ರೀತಿಸಿ, ಮದುವೆಯಾದ ಪ್ರಿಯತಮನ ವಿರುದ್ಧ ದೂರು ನೀಡಿದ್ದಾರೆ.
ಪ್ರೀತಿಯ ನಾಟಕವಾಡಿ ಬಳಿಕ ಮದುವೆಯಾಗಲು ನಿರಾಕರಿಸಿದ್ದ ಸದಾಶಿವ ಎಂಬವರ ವಿರುದ್ಧ ದೂರು ನೀಡಿ, ಬಳಿಕ ಪೊಲೀಸರ ನಿರ್ದೇಶನದನ್ವಯ ಸದಾ ಶಿವರನ್ನು ಜ.8ರಂದು ವಿವಾಹವಾಗಿದ್ದರು. ಇದೀಗ ವರದಕ್ಷಿಣೆಯ ನೆಪದಲ್ಲಿ ಆತ ಹಿಂಸೆ ನೀಡುತ್ತಿದ್ದಾರೆಂದೂ , ವರದಕ್ಷಿಣೆ ತಾರದಿದ್ದರೆ ತನ್ನ ಮನೆಯಲ್ಲೂ ಇರಬಾರದೆಂದೂ ತಾಕೀತು ಮಾಡುತ್ತಿದ್ದಾನೆ.
ಅಲ್ಲದೆ ಬುಧವಾರ ರಾತ್ರಿ ಊಟವನ್ನೂ ನೀಡದೇ ಮನೆಯಿಂದ ಹೊರಗಟ್ಟಿದ್ದು, ಪತಿಯ ಕೃತ್ಯಕ್ಕೆ ಆತನ ಹೆತ್ತವರೂ ಕೈ ಜೋಡಿಸುತ್ತಿದ್ದಾರೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.