ಭಟ್ಕಳ: ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಬಾಲಕೃಷ್ಣ ಭಟ್ ಗೆ ಸನ್ಮಾನ
ಭಟ್ಕಳ: ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಹಾಸ ಬಾಲಕೃಷ್ಣ ಭಟ್ಟ ಇವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಶ್ರೀ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರೂ ಆದ ಜೆ.ಎನ್.ನಾಯ್ಕ (ಬಾಬು ಮಾಸ್ತರ್) ಅವರು ಶಾಲು ಹೊದೆಸಿ, ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು ಉತ್ತಮ ಸೇವೆಗೆ ಪರ್ಯಾಯ ಹೆಸರು ಚಂದ್ರಹಾಸ ಭಟ್ಟರದು. ತಮ್ಮ 36 ವರ್ಷಗಳ ಸುಧೀರ್ಘ ಸೇವೆಯಲ್ಲಿ ಆಡಳಿತ ಮಂಡಳಿಯವರನ್ನು, ಇಲಾಖೆಯ ಅಧಿಕಾರಿಗಳನ್ನು, ಹಾಗೂ ಬ್ಯಾಂಕಿನ ಗ್ರಾಹಕರನ್ನು ಅತ್ಯಂತ ಸಂಯಮದಿಂದ ನೋಡಿಕೊಂಡು ಉತ್ತಮ ವ್ಯವಹಾರ ಮಾಡಲು ಕಾರಣೀಕರ್ತರಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ನ್ಯೂನತೆಗಳನ್ನಾಗದಂತೆ ನೋಡಿಕೊಂಡ ಹೆಮ್ಮೆ ಆಡಳಿತ ಮಂಡಳಿಗಿದೆ ಎಂದರು. ಹಿಂದೆ ತಾನು ಅಧ್ಯಕ್ಷನಾಗಿದ್ದಾಗಲೇ ಮಾರಾಟ ಪ್ರತಿನಿಧಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಅವರನ್ನು ನನ್ನ ಅಧಿಕಾರದ ಅವಧಿಯಲ್ಲಿಯೇ ಸನ್ಮಾನಿಸಿ ಬೀಳ್ಕೊಡಲು ತುಂಬಾ ಹೆಮ್ಮೆಯೆನಿಸುತ್ತದೆ ಎಂದೂ ಹೇಳಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಹಾಸ ಭಟ್ಟ ತಮ್ಮ ಸುಧೀರ್ಘ ಸೇವಾ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಕುಮಟಾದ ಸಹಕಾರಿ ಸಂಘಗಳ ಸಹಾಯ ನಿಬಂಧಕ ಪಿ.ಎನ್. ನಾಯ್ಕ ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ಚಂದ್ರಹಾಸ ಭಟ್ಟರು ಉತ್ತಮವಾಗಿ ಬೆಳೆಸಿದ್ದಾರೆ. ಒಂದು ಸಂಘ, ಸಂಸ್ಥೆ ಬೆಳೆಯಬೇಕಾದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಪರಿಶ್ರಮ ಮುಖ್ಯವಾಗಿರುತ್ತದೆ. ಸಂಘವು ಬೆಳೆದು ಬಂದ ದಾರಿಯೇ ಭಟ್ಟರ ಕರ್ತವ್ಯ ಪ್ರಜ್ಷೆಗೆ ಸಾಕ್ಷಿ ಹೇಳುತ್ತದೆ ಎಂದರು. ಉಪಸ್ಥಿತರಿದ್ದ ಕೆಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಝಡ್. ಐ. ಪಠಾಣ, ಜಾಲಿ ವ್ಯವಸಾಯ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಶಾಂತರಾಮ ನಾಯಕ, ಬಾಲಚಂದ್ರ ಭಟ್ಟ ಮಾತನಾಡಿದರು. ವೇದಿಕೆಯಲ್ಲಿ ಎಂಜಿಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಗರ್ಡಿಕರ್, ಸಂಘದ ಉಪಾಧ್ಯಕ್ಷ ದೇವೇಂದ್ರ ನಾಯ್ಕ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಿರ್ದೇಶಕ ಶ್ರೀಧರ ನಾಯ್ಕ ಸ್ವಾಗತಿಸಿದರು. ಗಂಗಾಧರ ನಾಯ್ಕ ನಿರೂಪಿಸಿದರು. ನೂತನ ಮುಖ್ಯ ಕಾರ್ಯನಿರ್ವಾಹಕ ರಮೇಶ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಹಕಾರಿ ಸಂಘಗಳು ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.