ಎಸ್ಟೇಟ್ ಮಾಫಿಯಾಕ್ಕೆ ಜೀವ ಸಂಕುಲಗಳು ತತ್ತರ: ಸಹ್ಯಾದ್ರಿ ಸಂಚಯ ಆತಂಕ
ಕಾಡ್ಗಿಚ್ಚಿನಿಂದ ಪಶ್ಚಿಮ ಘಟ್ಟ ಅಪಾಯದಲ್ಲಿ!
ಮಂಗಳೂರು, ಎ.1: ಪ್ರಪಂಚದ 18 ಜೀವ ವೈವಿಧ್ಯ ಕೇಂದ್ರಗಳಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟವು ಜವರಿಯಿಂದಲೇ ಕಾಡ್ಗಿಚ್ಚಿಗೆ ತುತ್ತಾಗಿರುವುದು ಮಾತ್ರವಲ್ಲದೆ ಎಸ್ಟೇಟ್ ಮಾಫಿಯಾದಿಂದ ಅಲ್ಲಿರುವ ಜೀವ ಸಂಕುಲಗಳು ತತ್ತರಿಸುತ್ತಿವೆ ಎಂದು ನಗರದ ಚಾರಣಿಗರ ತಂಡವಾದ ಸಹ್ಯಾದ್ರಿ ಸಂಚಯ ಆತಂಕ ವ್ಯಕ್ತಪಡಿಸಿದೆ.
ಸಹ್ಯಾದ್ರಿ ಸಂಚಯದ ಚಾರಣಿಗರು ಇತ್ತೀಚೆಗೆ ಚಾರ್ಮಾಡಿ ಘಾಟಿಗೆ ಚಾರಣ ಹೋಗಿದ್ದ ವೇಳೆ ಹಲವಾರು ಕಡೆಗಳಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಸುಮಾರು 1200 ಎಕರೆ ಪ್ರದೇಶದ ಅಲ್ಲಿನ ಹುಲ್ಲುಗಾವಲು, ಶೋಲಾರಣ್ಯದ ಜತೆ ಕೆಲ ವನ್ಯ ಜೀವಿಗಳು ಬೆಂಕಿಗಾಹುತಿಯಾಗಿರುವುದನ್ನು ಕಣ್ಣಾರೆ ಕಂಡಿದ್ದೇವೆ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ ಹಾಗೂ ಕಳೆದ 23 ವರ್ಷಗಳಿಂದ ಚಾರಣದಲ್ಲಿ ತೊಡಕೊಂಡಿರುವ ಹಾಗೂ ಕಲಾವಿದರೂ ಆಗಿರುವ ದಿನೇಶ್ ಹೊಳ್ಳ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪಶ್ಚಿಮ ಘಟಕ್ಕೆ ಎದುರಾಗಿರುವ ಅಪಾಯದ ಕುರಿತಂತೆ ವಿವರ ನೀಡಿದ ಅವರು, ಬಾಳೆಗುಡ್ಡ, ಜೇನುಕಲ್, ದೊಡ್ಡೇರಿಬೆಟ್ಟ, ಹೊಸ್ಮನೆಗುಡ್ಡ, ರಾಮನಬೆಟ್ಟ, ಮಿಂಚುಕಲ್ಲು, ಸೋಮನಕಾಡು, ಅಣಿಯೂರು ಕಣಿವೆ, ಅಂಬಟಿಮಲೆ, ಬಾರಿಮಲೆ ಮೊದಲಾದ ತಾಣಗಳು ಬೆಂಕಿಯಿಂದ ತೀವ್ರ ಹಾನಿಗೊಳಗಾಗಿವೆ. ಕೆಲವು ಕಡೆ ಸಹಜ ಕಾಡ್ಗಿಚ್ಚು ಸಂಭವಿಸಿದ್ದರೆ, ಮತ್ತೆ ಕೆಲವು ಕಡೆ ಮಾನವ ನಿರ್ಮಿತ ಕಾಡ್ಗಿಚ್ಚಿನಿಂದ ಜೀವ ಸಂಕುಲಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವಂತವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ದೂರಿದರು.
ಅರಣ್ಯ ಅತಿಕ್ರಮಣ: ಇಲಾಖೆ ವೌನ
ಕಾಡ್ಗಿಚ್ಚಿನ ಜತೆಯಲ್ಲೇ ಎಸ್ಟೇಟ್ ಮಾಫಿಯಾದಿಂದ ಮೀಸಲು ಅರಣ್ಯವು ಅತಿಕ್ರಮಣಕ್ಕೆ ತುತ್ತಾಗುತ್ತಿದೆ. ಮೀಸಲು ಅರಣ್ಯವನ್ನು ಕಡಿದು ಅಲ್ಲಿ, ಕಾಫಿ, ರಬ್ಬರ್, ರಂಬಾಟೋನ್ ತೋಟವನ್ನು ನಿರ್ಮಿಸಿ ಪಶ್ಚಿಮ ಘಟ್ಟದ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರೂ ಈ ಬಗ್ಗೆ ಇಲಾಖೆ ವೌನ ವಹಿಸಿದೆ. ಸೋಮನಕಾಡಿನ ಬಾರಿಮಲೆಯಲ್ಲಿ 40 ಎಕರೆ ತೋಟವೀಗ 400 ಎಕರೆ ತೋಟವಾಗಿ ವಿಸ್ತಾರವಾಗಿದೆ. ಎಸ್ಟೇಟ್ ಸುತ್ತಮುತ್ತ ವಿದ್ಯುತ್ ಬೇಲಿ ನಿರ್ಮಾಣದಿಂದ ವನ್ಯಜೀವಿಗಳು ಬಲಿಯಾಗುತ್ತಿವೆ ಎಂದು ಅವರು ಹೇಳಿದರು.
ಎಸ್ಟೇಟ್ ಮಾಫಿಯಾದಿಂದಾಗಿ ಇದೀಗ ಕಾಡುಗಳಲ್ಲಿ ಕಾಡುಪ್ರಾಣಿಗಳಿಗೆ ಆಹಾರದ ಸಮಸ್ಯೆ ಕಾಡುತ್ತಿದೆ.
ಘಾಟಿಯಲ್ಲಿ ಚಾರಣದ ನೆಪದಲ್ಲಿ ಮೋಜು ಮಸ್ತಿ!
ಬಹುತೇಕವಾಗಿ ಘಾಟಿ ಪ್ರದೇಶಗಳಿಗೆ ಬೆಟ್ಟ ಗುಡ್ಡಗಳಿಗೆ ಚಾರಣಕ್ಕಾಗಿ ಆಸಕ್ತರು ಹೋಗುತ್ತಿರುತ್ತಾರೆ. ಆದರೆ ಇದೀಗ ಈ ಚಾರಣವು ಕೆಲವರಿಗೆ ಮೋಜು ಮಸ್ತಿಯಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಪಶ್ಚಿಮ ಘಟ್ಟದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿ, ಅಲ್ಕೋಹಾಲ್ ಬಾಟಲಿ, ತ್ಯಾಜ್ಯವಸ್ತುಗಳು ಶೇಖರಣೆಯಾಗುತ್ತಿದೆ. ಸಹ್ಯಾದ್ರಿ ಸಂಚಯವು ಕಳೆದ ಒಂದು ವರ್ಷದಿಂದ ಪಶ್ಚಿಮ ಘಟ್ಟ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ಈಗಾಗಲೇ ಚಾರ್ಮಾಡಿ, ಬಿಸಿಲೆ, ದಿಡುಪೆ, ಆಗುಂಬೆ, ಗಡಾಯಿಕಲ್ಲು ಮೊದಲಾದ ಅರಣ್ಯ ಪ್ರದೇಶಗಳಲ್ಲಿ ಪರಿಸರ ನಾಶದ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು.
ವನ್ಯ ದರ್ಶನ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಿ
ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ರಾಜ್ಯ ಸರಕಾರವು ಪ್ರಸ್ತುತ ಹಮ್ಮಿಕೊಳ್ಳುತ್ತಿರುವ ಚಿಣ್ಣರ ವನ್ಯದರ್ಶನ ಕಾರ್ಯಕ್ರಮವನ್ನು ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಬೇಕು. ಈ ಮೂಲಕ ಅರಣ್ಯ ಹಾಗೂ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸಬಹುದಾಗಿದೆ ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯು ಅರಣ್ಯವಾಸಿಗಳ ಜತೆ ಉತ್ತಮ ಸಂಪರ್ಕ ಇರಿಸುವ ಜತೆ ಕಾಡು ಪ್ರಾಣಿ ಸೇರಿದಂತೆ ವನ್ಯ ಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮಾಧವ, ದಿನೇಶ್ಕೊಡಿಯಾಲ್ ಬೈಲ್, ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು.
ಬೆಂಕಿ ಆರಿಸಲು ಅರಣ್ಯ ಇಲಾಖೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ!
ಮೀಸಲು ಅರಣ್ಯಗಳಲ್ಲಿ ಕಾಡ್ಗಿಚ್ಚು ಸಂಭವಿಸಿದಾಗ ಅಲ್ಲಿನ ಜೀವ ಸಂಕುಲಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅತ್ಯಾಧುನಿಕ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಹೊಂದಿರಬೇಕು. ಹೆಲಿಕಾಪ್ಟರ್ಗಳ ಮೂಲಕ ಬೆಂಕಿ ನಂದಿಸುವ ಕಾರ್ಯವಾಗಬೇಕು. ಆದರೆ ಇಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲವಾಗಿದೆ. ಸಚಿವರಿಗೆ ತಿರುಗಾಡಲು ಹೆಲಿಕಾಪ್ಟರ್ ಇದೆಯಾದರೂ, ಕಾಡಿನ ವನ್ಯಜೀವಿಗಳು, ಅರಣ್ಯ ಸಂಪತ್ತನ್ನು ರಕ್ಷಿಸಲು ಹೆಲಿಕಾಪ್ಟರ್ ವ್ಯವಸ್ಥೆ ಇಲ್ಲದಿರುವುದು ದುರಂತ ಎಂದು ಸಹ್ಯಾದ್ರಿ ಸಂಚಯದ ಶಶಿಧರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ನೇತ್ರಾವತಿ ನದಿ ಸಂರಕ್ಷಣಾ ವಲಯವಾಗಿ ಘೋಷಣೆಗೆ ಆಗ್ರಹ
ಶಿರಾಡಿಯಲ್ಲಿ ನಿರ್ಮಿಸಲುದ್ದೇಶಿಸಿರುವ ಸುರಂಗ ಮಾರ್ಗವನ್ನು ವಿರೋಧಿಸಿದ ದಿನೇಶ್ ಹೊಳ್ಳ, ಈಗಾಗಲೇ ರೈಲ್ವೇ ಹಳಿ, ಹೈವೇಯಿಂದ ವನ್ಯ ಜೀವಿಗಳು ತೊಂದರೆಗೊಳಗಾಗಿವೆ. ಇದೀಗ ಸುರಂಗ ಮಾರ್ಗ ಮತ್ತಷ್ಟು ಅರಣ್ಯದಲ್ಲಿ ಅಪಾಯಕ್ಕೆ ಕಾರಣವಾಗಲಿದೆ. ನೇತ್ರಾವತಿ ನದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೇತ್ರಾವತಿಯ ಉಪನದಿಗಳು ಉಗಮ ತಾಣವಾದ ಎಳನೀರು ಘಾಟಿ (ಬಂಗ್ರಬಲಿಕೆ)ಯಿಂದ ಪುಷ್ಪಗಿರಿವರೆಗೆ ಸರಕಾರ ನೇತ್ರಾವತಿ ನದಿ ಸಂರಕ್ಷಣಾ ವಲಯ ವಾಗಿ ಘೋಷಿಸಬೇಕು ಎಂದು ದಿನೇಶ್ ಹೊಳ್ಳ ಈ ಸಂದರ್ಭ ಆಗ್ರಹಿಸಿದರು.