ಎನ್ಪಿಎಸ್ ವಿರುದ್ಧ ಸರಕಾರಿ ನೌಕರರಿಂದ ಅಂಚೆ ಕಾರ್ಡ್ ಚಳವಳಿ
ಪುತ್ತೂರು, ಎ.1: ನಿಶ್ಚಿತ ಪಿಂಚಣಿ ಯೋಜನೆ(ಎನ್ಪಿಎಸ್)ಯನ್ನು ರದ್ದುಗೊಳಿಸಿ, ಎ.1ರಿಂದ ಕರ್ನಾಟಕ ರಾಜ್ಯಾದ್ಯಂತ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಿರುವುದನ್ನು ವಿರೋಧಿಸಿ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘದ ಕರೆಯಂತೆ ಇಂದು ಪುತ್ತೂರು ತಾಲೂಕಿನಾದ್ಯಂತ ಅಂಚೆ ಕಾರ್ಡ್ ಚಳವಳಿ ನಡೆಯಿತು.
ಸರಕಾರಿ ಎನ್ಪಿಎಸ್ ನೌಕರರ ಸಂಘದ ಪುತ್ತೂರು ಘಟಕದ ಆಶ್ರಯದಲ್ಲಿ ತಾಲೂಕಿನಾದ್ಯಂತ ಸರಕಾರಿ ನೌಕರರು ಕಪ್ಪುಬ್ಯಾಡ್ಜ್ ಧರಿಸಿ ಕರ್ತವ್ಯನಿರತರಾಗುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿದರು. ಈ ಯೋಜನೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ, ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರಿಗೆ ಅಂಚೆ ಕಾರ್ಡ್ ಮೂಲಕ ಬೇಡಿಕೆ ಮಂಡಿಸಿದರು.
ಪುತ್ತೂರು ಮುಖ್ಯ ಅಂಚೆ ಕಚೇರಿಯ ಬಳಿ ನಡೆದ ಚಳವಳಿಯಲ್ಲಿ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ದಿನೇಶ್ ಮಾಚಾರ್ ಮಾತನಾಡಿ, ಈ ನೌಕರ ವಿರೋಧಿ ವ್ಯವಸ್ಥೆ ರದ್ದುಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆದರ್ಶ, ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ವೀಣಾ ಕೆ., ಮುಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಉಪ್ಪಿನಂಗಡಿಯಲ್ಲಿ ನಡೆದ ಅಂಚೆ ಕಾರ್ಡ್ ಚಳವಳಿಯಲ್ಲಿ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳಾದ ರಮೇಶ್, ಮುಹಮ್ಮದ್ ಶರೀಫ್, ಹರಿಣಾಕ್ಷಿ, ಚಂದ್ರಕಾಂತ್, ಕೃಷ್ಣವೇಣಿ, ಅಬ್ದುಲ್ಲಾ ಅಸಫ್, ಪೂರ್ಣಿಮಾ, ಮೋಹನ್ಚಂದ್ರ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಸಂಸ್ಥೆ, ಪಂಚಾಯತ್ನ ಹಲವಾರು ನೌಕರರು ಪಾಲ್ಗೊಂಡಿದ್ದರು.
ಸರಕಾರಿ ನೌಕರರು ಕಡಬ, ಈಶ್ವರಮಂಗಲ, ಸವಣೂರು, ನೆಲ್ಯಾಡಿಗಳಲ್ಲಿ ಸಾಮೂಹಿಕವಾಗಿ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕುವ ಮೂಲಕ ಅಂಚೆ ಕಾರ್ಚ್
ಚಳವಳಿಯನ್ನು ನಡೆಸಿದರು. ವಿಮಲ್ಕುಮಾರ್ ನೆಲ್ಯಾಡಿ, ವೆಂಕಟೇಶ್ ಅನಂತಾಡಿ, ಇಬ್ರಾಹೀಂ ಎಂ., ಶಿವಕುಮಾರ್, ರಮೇಶ್ ಎಂ.ಆಯಾ ಸ್ಥಳಗಳ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.