ಪುತ್ತೂರು: ನಗರಸಭಾ ಸದಸ್ಯರಿಂದ ಸರ್ಕಾರಿ ಭೂಮಿಯ ಅತಿಕ್ರಮಣ
ತೆರವಿಗೆ ಆಗ್ರಹಿಸಿ ಎ.4ರಂದು ಪ್ರತಿಭಟನೆ : ಶೇಷಪ್ಪ ಬೆದ್ರಕಾಡು
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬರುವ ಪಡ್ನೂರು ಗ್ರಾಮದ ಪಡ್ಡಾಯೂರು ಮತ್ತು ಕಸಬಾ ಗ್ರಾಮದ ನಂದಿಲದಲ್ಲಿ ನಗರಸಭಾ ಸದಸ್ಯರುಗಳೇ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಆರ್.ಸಿ.ಸಿ ಮನೆ ನಿರ್ಮಿಸಿದ್ದು, ಈ ಮನೆಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಎ.4ರಂದು ಪುತ್ತೂರಿನ ಮಿನಿವಿಧಾನ ಸೌಧದ ಎದುರು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ತಿಳಿಸಿದರು. ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಸಭಾ ವ್ಯಾಪ್ತಿಯಲ್ಲಿ ಅದೆಷ್ಟೋ ಬಡ ಜನರು, ಅಂಗವಿಕಲರು, ನಿರಾಶ್ರಿತರು ಮನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೆ ಮನೆ ನಿವೇಶ ನೀಡಲು ಸ್ಥಳದ ಕೊರತೆ ಎಂದು ಇಲಾಖೆಯವರು ಹೇಳುತ್ತಿದ್ದಾರೆ, ಆದರೆ ಪಡ್ಡಾಯೂರು ಸಮೀಪದ ಪಳ್ಳ ಎಂಬಲ್ಲಿ ಸರ್ವೆ ನಂ.64/2ಎ 1 ರಲ್ಲಿರುವ 13.44 ಎಕ್ರೆ ಸರ್ಕಾರಿ ಭೂಮಿಯನ್ನು ನಗರಸಭಾ ಸದಸ್ಯ ಹರೀಶ್ ನಾಕ್ ಮಾಲ್ತೊಟ್ಟು, ಗೋಪಿಭಟ್ ಮತ್ತು ಇತರರು ಅತಿಕ್ರಮಣ ಮಾಡಿಕೊಂಡು 1 ವರ್ಷದ ಹಿಂದೆಯೇ ಅದಕ್ಕೆ ತಂತಿ ಬೇಲಿ ಅಳವಡಿಸಿ ಸ್ವಾಧೀನದಲ್ಲಿರಿಸಿಕೊಂಡಿದ್ದಾರೆ. ಅಲ್ಲದೆ ಅದರಲ್ಲಿ ಎರಡು ಮನೆಯನ್ನೂ ನಿರ್ಮಿಸಿಕೊಂಡಿದ್ದಾರೆ. ನಂದಿಲ ಎಂಬಲ್ಲಿ ಸರ್ವೆ ನಂ. 7/4ಎ1 ರಲ್ಲಿರುವ ಸರ್ಕಾರಿ ಜಮೀನಿನನ್ನು ನಗರಸಭೆಯ ಸದಸ್ಯ ವಿಶ್ವನಾಥ ಗೌಡ, ಅವರ ಸಹೋದರರಾದ ಶೇಖರ, ಮತ್ತು ರಾಮಣ್ಣ ಗೌಡ ಅತಿಕ್ರಮಣ ಮಾಡಿಕೊಂಡಿದ್ದು, ಅಲ್ಲಿ ಒಂದು ವರ್ಷದ ಹಿಂದೆಯೇ ಎರಡು ಆರ್.ಸಿ.ಸಿ ಮನೆ ನಿರ್ಮಿಸಿದ್ದಾರೆ.ಇಲಾಖೆಯ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಈ ತನಕ ಯಾವುದೇ ಪ್ರಯೋಜವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಗರಸಭೆಯ ವ್ಯಾಪ್ತಿಗೆ ಸೇರಿರುವ ಕೆಲವು ಗ್ರಾಮಗಳಲ್ಲಿರುವ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ಬೇಲಿ ನಿರ್ಮಿಸಿ ಆರ್.ಸಿ.ಸಿ. ಮನೆಗಳನ್ನು ನಿರ್ಮಿಸಿ ಕೆಲವರು ಮಾರಾಟ ಮಾಡುವುದು ಮತ್ತು ಬಾಡಿಗೆಗೆ ನೀಡುವುದು ಕಂಡು ಬಂದಿದೆ. ಇದರಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕಪ್ಪಕ್ಕಾಗಿ ದ್ವಂದ್ವ ನೀತಿ
ನೆಲೆ ಇಲ್ಲದ ಬಡವರು ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ಬದುಕುಕಟ್ಟಿಕೊಳ್ಳಲು ಮುಂದಾದರೆ ನಗರಸಭೆಯ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಮನೆಯನ್ನು ತೆರವುಗೊಳಿಸುವ ಮೂಲಕ ಅವರನ್ನು ಬೀದಿಗೆ ತಳ್ಳುತ್ತಾರೆ. ಆದರೆ ನಗರಸಭೆಯ ಸದಸ್ಯರು ಸರ್ಕಾರಿ ಸ್ಥಳವನ್ನು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡರೆ ಯಾರೂ ಅದನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಈ ವಿಚಾರದಲ್ಲಿ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು, ನಗರಸಭೆ ಅಧಿಕಾರಿಗಳು ಮತ್ತು ಗ್ರಾಮಕರಣಿಕರು ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ನೋಡಿದರೆ ಅವರು ಕಪ್ಪ ಸ್ವೀಕಾರ ಮಾಡಿಯೇ ಇಂತಹ ನಿಲುವು ಅನುಸರಿಸುತ್ತಿದ್ದಾರೆ ಎಂಬ ಸಂಶಯ ಬರುತ್ತಿದೆ ಎಂದು ದಲಿತ್ ಸೇವಾ ಸಮಿತಿ ತಾಲ್ಲೂಕು ಸಮಿತಿಯ ಅಧ್ಯಕ್ಷ ಗಿರಿಧರ್ ನಾಕ್ ಅವರು ದೂರಿದರು. ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಪಡ್ಡಾಯೂರು ಘಟಕದ ಅಧ್ಯಕ್ಷ ಸುರೇಂದ್ರ ನಾಯ್ಕ, ಸಂಘಟನೆಯ ಮುಖಂಡರಾದ ಸುರೇಶ್ ಕುಂಬ್ರ, ಧನಂಜಯ ಬಲ್ನಾಡು ಉಪಸ್ಥಿತರಿದ್ದರು.