ಪಿಯು ಉಪನ್ಯಾಸಕರು ಮೌಲ್ಯಮಾಪನ ಕೇಂದ್ರಕ್ಕೆ ಹಾಜರು; ಅಧಿಕಾರಿಗಳು ನಾಪತ್ತೆ ..!

ಬೆಂಗಳೂರು, ಎ.3: ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರು ಮೌಲ್ಯ ಮಾಪನ ಕೇಂದ್ರಕ್ಕೆ ಇಂದು ಹಾಜರಾಗಿದ್ದರೂ, ಅವರೆಲ್ಲರೂ ಕೆಲಸವಿಲ್ಲದೆ ಮೌನವಾಗಿ ಕುಳಿತುಕೊಳ್ಳುವಂತಾಗಿದೆ.
ಬೆಳಗ್ಗೆ ೯ ಗಂಟೆಗೆ ಉಪನ್ಯಾಸಕರು ಕೇಂದ್ರಕ್ಕೆ ಹಾಜರಾಗಿದ್ದಾರೆ. ಆದರೆ ಅಲ್ಲಿ ತಾವು ಯಾರಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ವರದಿ ಮಾಡಬೇಕು ಎಂಬ ಬಗ್ಗೆ ಉಪನ್ಯಾಸಕರಿಗೆ ಗೊಂದಲ ಉಂಟಾಗಿದೆ. ಪಿಯು ಪರೀಕ್ಷಾ ವಿಭಾಗದ ಅಧಿಕಾರಿಗಳು ಕೇಂದ್ರದಲ್ಲಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ.
ಮೌಲ್ಯ ಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆ, ಸ್ಟೇಷನರಿ ಬಂದಿಲ್ಲ. ಈ ಕಾರಣದಿಂದಾಗಿ ಉಪನ್ಯಾಸಕರಿಗೆ ಕೆಲಸವಿಲ್ಲ. ಇದೀಗ ಪರೀಕ್ಷಾ ಗೊಂದಲ ಮುಂದುವರಿದಿರುವಂತೆ ಮೌಲ್ಯ ಮಾಪನದಲ್ಲೂ ಗೊಂದಲ ಕಾಣಿಸಿಕೊಂಡಿದೆ
ನಿಗದಿತ ವೇಳಾಪಟ್ಟಿಯಂತೆ ಮೌಲ್ಯಮಾಪನ: ರಾಮೇಗೌಡ
ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನ ಮುಂದೂಡಲಾಗಿಲ್ಲ. ವೇಳಾಪಟ್ಟಿಯಂತೆ ಮೌಲ್ಯ ಮಾಪನ ನಡೆಯಲಿದೆ ಎಂದು ಪಿಯು ಮಂಡಳಿಯ ಪ್ರಭಾರ ನಿರ್ದೇಶಕ ರಾಮೇಗೌಡ ತಿಳಿಸಿದ್ದಾರೆ.





