ಚುಟುಕು ಸುದ್ದಿಗಳು
ಇಂದಿನಿಂದ ಮಣಿಪಾಲದಲ್ಲಿ ಸಂಶೋಧನೆ ಕುರಿತು ಚರ್ಚಾಗೋಷ್ಠಿ
ಮಣಿಪಾಲ, ಎ.3: ಮಣಿಪಾಲ ವಿವಿಯ ಸಂಶೋಧನಾ ನಿರ್ದೇಶನಾಲಯದ ವತಿಯಿಂದ ಸಂಶೋಧನಾ ಚರ್ಚಾಗೋಷ್ಠಿ ಎ.4 ಮತ್ತು 5ರಂದು ಮಣಿಪಾಲದಲ್ಲಿ ನಡೆಯಲಿದೆ.
ಬೆಂಗಳೂರಿನ ನ್ಯಾಶನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸಾಯನ್ಸ್ನ ನಿರ್ದೇಶಕ ಡಾ.ಸತ್ಯಜಿತ್ ಮೇಯರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಸತೀಶ್ ಶೆಣೈ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಂದು ಪ್ರತಿಭಟನೆ
ಬಂಟ್ವಾಳ, ಎ.3: ವಿದ್ಯುತ್ ಬೆಲೆಯೇರಿಕೆ ಹಾಗೂ ಅನಿಯಮಿತ ವಿದ್ಯುತ್ ವ್ಯತ್ಯಯದ ವಿರುದ್ಧ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಎ.4ರಂದು ಪೂರ್ವಾಹ್ನ 11ಕ್ಕೆ ಬಿ.ಸಿ.ರೋಡ್ ಕೈಕಂಬದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿ ಉಳಿಸಿ ಚತುಷ್ಪಥ ಕಾಮಗಾರಿ ಮುಂದುವರಿಸಲು ಕೇಂದ್ರ ಸಚಿವರಿಗೆ ಮನವಿ
ವಿಟ್ಲ, ಎ.3: ರಾಷ್ಟ್ರೀಯ ಹೆದ್ದಾರಿ-73ರ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯ ಬಳಿ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿದ್ದು, ಬಹ್ಮಸನ್ನಿಧಿಯನ್ನು ಯಥಾಸ್ಥಿತಿ ಉಳಿಸಿಕೊಂಡು ಕಾಮಗಾರಿ ಪೂರ್ತಿಗೊಳಿಸುವಂತೆ ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್. ಸಾಲ್ಯಾನ್ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಸಚಿವ ಗಡ್ಕರಿ ಮಂಗಳೂರಿಗೆ ಬಂದಿದ್ದ ವೇಳೆ ನೀಡಿದ ಈ ಮನವಿಯಲ್ಲಿ ಬ್ರಹ್ಮರಕೂಟ್ಲು ಟೋಲ್ಫ್ಲಾರಝಾ ಬಳಿ ಜನರ ಅನುಕೂಲಕ್ಕಾಗಿ ರಸ್ತೆಯ ಎರಡು ಬದಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ಕಳ್ಳಿಗೆ ಗ್ರಾಮದಲ್ಲಿ ದರಿಬಾಗಿಲು, ನೆತ್ರಕೆರೆ, ಜಾರಂದಗುಡ್ಡೆ, ಕನಪಾಡಿ, ಬೆದ್ರಾಡಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ಯೋಗ್ಯವಲ್ಲದ ಸ್ಥಿತಿಗೆ ಮುಟ್ಟಿದ್ದು, ಇವುಗಳ ದುರಸ್ತಿಗೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಎ.6-7: ಯುಪಿಎಂಸಿ ರಜತ ಸಂಭ್ರಮ
ಉಡುಪಿ, ಎ.3: ಮಣಿಪಾಲದ ಡಾ.ಟಿ.ಎಂ.ಎ.ಪೈ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ಸಂಭ್ರಮ ಸಮಾರಂಭವು ಎ.6 ಮತ್ತು 7ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎ.6ರಂದು ಬೆಳಗ್ಗೆ 10ಗಂಟೆಗೆ ನಡೆಯುವ ಸಮಾರಂಭವನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಣಿಪಾಲ ವಿವಿಯ ಉಪಕುಲಪತಿ ಡಾ.ಎಚ್.ವಿನೋದ್ ಭಟ್ ವಹಿಸುವರು. ಎ.7ರಂದು ಸಂಜೆ 4ಗಂಟೆಗೆ ನಡೆಯುವ ಶಾಲಾ ವಾರ್ಷಿಕೋ ತ್ಸವವನ್ನು ಉಡುಪಿ ಯುಪಿಎಂಸಿ ಪ್ರಾಂಶುಪಾಲ ಡಾ.ಮಧುಸೂದನ್ ಭಟ್ ಉದ್ಘಾಟಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ, ಕಾರ್ಯದರ್ಶಿ ಶಶಿ ಕಿರಣ್, ಉಪನ್ಯಾಸಕರಾದ ಆಶಾ ಮಾಲಿನಿ, ಪ್ರಭಾ ಕಾಮತ್ ಉಪಸ್ಥಿತರಿದ್ದರು.
ಮರಳು ಸಮಸ್ಯೆ ಪರಿಹರಿಸಲು ಎಸ್ಡಿಪಿಐ ಆಗ್ರಹ
ಮಂಗಳೂರು, ಎ.3: ಕರಾವಳಿ ಜಿಲ್ಲಾದ್ಯಂತ ಕಳೆದ 2-3 ತಿಂಗಳುಗಳಿಂದ ಜಿಲ್ಲಾಧಿಕಾರಿ ಮರಳುಗಾರಿಕೆ ಮತ್ತು ಸಾಗಾಟವನ್ನು ನಿಷೇಧಿಸಿರುವ ಕಾರಣಗಳಿಂದಾಗಿ ಮರಳು ಪೂರೈಕೆಯು ಸಂಪೂರ್ಣವಾಗಿ ಸ್ಥಗಿತಗೊಅಂಡಿದೆ. ಈ ಕಾರಣದಿಂದಾಗಿ ಜಿಲ್ಲಾದ್ಯಂತ ಜನಸಾಮಾನ್ಯರಿಗೆ, ಕಟ್ಟಡ ಕಾರ್ಮಿಕರಿಗೆ, ಹಾಗೂ ಗುತ್ತಿಗೆದಾರರಿಗೆ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಎಸ್ಡಿಪಿಐ ದ.ಕ. ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ಆಗ್ರಹಿಸಿದೆ.
ನಾಳೆಯಿಂದ ಕಲ್ಲುಗುಂಡಿ ಸ್ವಲಾತ್ ವಾರ್ಷಿಕ
ಸುಳ್ಯ, ಎ.3: ಕಲ್ಲುಗುಂಡಿಯ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ನ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಎ.5ರಿಂದ 7ರವರೆಗೆ ನಡೆಯಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬಾಸ್ ಸೆಂಟ್ಯಾರ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎ.5ರಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಜಿ.ಕೆ.ಹಮೀದ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೆ.ಎಂ.ಹನೀಫ್ ಫಾಝಿಲ್ ಹನೀಫಿ ಮಾಡಲಿದ್ದಾರೆ. ನವಾಝ್ ಮನ್ನಾಣಿ ಮುಖ್ಯ ಭಾಷಣ ಮಾಡಲಿದ್ದಾರೆ. ಎ.6ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಚೌಕಿ ಖತೀಬರಾದ ಅಶ್ರಫ್ ರಹ್ಮಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ಎ.7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ತಾಜ್ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್.ಪಿ.ಯಂ. ಅಬಿದೀನ್ ತಂಙಳ್ ಸ್ವಲಾತ್ ನೇತೃತ್ವ ವಹಿಸುವರು. ಝುಬೈರ್ ದಾರಿಮಿ ಪೈಕ ಮಾತನಾಡಲಿದ್ದಾರೆ ಎಂದವರು ಹೇಳಿದರು.
ಮಸೀದಿ ಅಧ್ಯಕ್ಷ ತಾಜ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಅಬೂಬಕರ್, ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ನ ಅಧ್ಯಕ್ಷ ಜಿ.ಕೆ.ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ದುಬೈ, ಎ.3: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ. ಇದರ ಅಧೀನ ಘಟಕವಾದ ಡಿಕೆಎಸ್ಸಿ ಅಜ್ಮಾನ್ನ ಮಹಾಸಭೆಯು ಹಸನಬ್ಬ ಕೊಳ್ನಾಡ್ರ ನಿವಾಸದಲ್ಲಿ ನಡೆಯಿತು. ಅಬೂಬಕರ್ ಮದನಿ ಕೆಮ್ಮಾರ ದುಆ ಮಾಡಿದರು. ಯು.ಎ.ಇ. ರಾಷ್ಟೀಯ ಸಮಿತಿಯ ಮುಖಂಡರಾದ ಇಕ್ಬಾಲ್ ಹೆಜಮಾಡಿ, ಹುಸೈನ್ ಹಾಜಿ ಕಿನ್ಯ, ಇ.ಕೆ.ಇಬ್ರಾಹೀಂ ಕಿನ್ಯ, ಯೂಸುಫ್ ಆರ್ಲಪದವು, ಇಬ್ರಾಹೀಂ ಹಾಜಿ ಕಿನ್ಯ , ಅಬ್ದುರ್ರಝಾಕ್ ಮುಟ್ಟಿಕಲ್, ಹಾಜಿ ಅಬ್ದುರ್ರಹ್ಮಾನ್ ಸಂಟ್ಯಾರ್, ಅಬ್ಬಾಸ್ ಪಾಣಾಜೆ ಉಪಸ್ಥಿತರಿದ್ದರು.
ನೂತನ ಸಾಲಿನ ಗೌರವಾಧ್ಯಕ್ಷರಾಗಿ ಅಬೂಬಕರ್ ಮದನಿ ಕೆಮ್ಮಾರ, ಅಧ್ಯಕ್ಷರಾಗಿ ಹಸನಬ್ಬ ಕೊಳ್ನಾಡ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ, ಆದಂ ಈಶ್ವರಮಂಗಿಲ, ಅಬ್ದುಲ್ಲ ಹಾಜಿ ಬೀಜಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆನೆಕಲ್, ಜೊತೆ ಕಾರ್ಯದರ್ಶಿಯಾಗಿ ನಝೀರ್ ಕಣ್ಣಂಗಾರ್, ಮುಸ್ತಫಾ ಕೊಳ್ನಾಡ್, ಅಬ್ದುಲ್ ಖಾದರ್ ಕೆ., ಕೋಶಾಧಿಕಾರಿಯಾಗಿ ಹಿದಾಯತ್ ತುಂಬೆ, ಲೆಕ್ಕ ಪರಿಶೋಧಕರಾಗಿ ಸಮೀರ್ ಕೊಳ್ನಾಡ್, ಸಂಚಾಲಕರಾಗಿ ಇಬ್ರಾಹೀಂ ಕೇದಿಗೆ, ಸಿದ್ದೀಕ್ ಅಮಾನಿ, ಸಂಶುದ್ದೀನ್, ಶಬೀರ್ ಕೊಳ್ನಾಡ್ ಆಯ್ಕೆಯಾದರು. ಆದಂ ಈಶ್ವರಮಂಗಿಲ ಸ್ವಾಗತಿಸಿದರು. ಫಾರೂಕ್ ಆನೆಕಲ್ ವಂದಿಸಿದರು.
ಜಿಲ್ಲೆಯ ರೈತರ ನೆರವಿಗೆ ಮನವಿ
ಉಡುಪಿ, ಎ.3: ಜಾಗತೀಕರಣ ನೀತಿಗಳ ಜಾರಿಯ ನಂತರ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಕೃಷಿ ಕ್ಷೇತ್ರದಿಂದಾಗಿ ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ 1,200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಸಿಪಿಎಂ ಪ್ರಕಟನೆಯಲ್ಲಿ ತಿಳಿಸಿದೆ. ಇತ್ತೀಚಿನವರೆಗೆ ಉಡುಪಿ ಜಿಲ್ಲೆಯ ರೈತರು ಆತ್ಮಹತ್ಯೆಯಂತಹ ಕೃತ್ಯಗಳಿಂದ ದೂರವಿದ್ದರು. ಆದರೆ ಈಗ ತೆಂಗು, ಅಡಿಕೆ ಮತ್ತು ರಬ್ಬರ್ ಧಾರಣೆಯಲ್ಲಿ ತೀವ್ರ ಇಳಿಮುಖವಾದುದರಿಂದ ಇಲ್ಲಿನ ರೈತರು ಸಹ ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ ಎಂದು ಸಿಪಿಎಂ ಹೇಳಿದೆ. ಕುಂದಾಪುರ ತಾಲೂಕಿನಲ್ಲಿ ಕಳೆದ 10 ತಿಂಗಳಲ್ಲಿ 5 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ರಬ್ಬರ್ ಧಾರಣೆ ಕುಸಿತ ಪ್ರಮುಖ ಕಾರಣವಾಗಿದ್ದರೆ, ಅಡಿಕೆ, ತೆಂಗು ದರ ಕುಸಿತವೂ ಕಾರಣವಾಗಿದೆ. ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ನೀಡಿ ಖರೀದಿಗೆ ಮುಂದಾಗಬೇಕು ಎಂದು ಸಿಪಿಎಂ ಒತ್ತಾಯಿಸಿದೆ. ಬೆಳೆ ನಷ್ಟದಿಂದ ಸಾಲ ತೀರಿಸಲಾಗದ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಪಕ್ಷದ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಅಲ್ಲದೆ ಸಾವಿಗೀಡಾದ ರೈತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಅದು ಒತ್ತಾಯಿಸಿದೆ.
ಎ.14ರಿಂದ 17ರವರೆಗೆ ಕಲ್ಲಡ್ಕದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ
ವಿಟ್ಲ, ಎ.3: ಝಮಾನ್ ಬಾಯ್ಸ್ಸ ಕಲ್ಲಡ್ಕ ಇದರ ಆಶ್ರಯದಲ್ಲಿ ಕೆಪಿಎಲ್-2016 ಆಹ್ವಾನಿತ 8 ತಂಡಗಳ ನಿಗದಿತ ಓವರ್ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಎ.14ರಿಂದ 17ರವರೆಗೆ ಕಲ್ಲಡ್ಕ ಸರಕಾರಿ ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ನೆಟ್ಲ ಸೂಪರ್ ಕಿಂಗ್ಸ್, ಮುರಬೈಲು ಟೈಗರ್ಸ್, ಅಮ್ಟೂರು ವಾರಿಯರ್ಸ್, ಯುಎಇ ಬುಲ್ಸ್, ಮದಕ ಚಾಲೆಂಜರ್ಸ್, ಮೋನ್ರಝಾ ಇಲೆವನ್, ಕಲ್ಲಡ್ಕ ನೈಟ್ರೈಡರ್ಸ್, ಸನ್ರೈಸ್ ಕೆ.ಸಿ.ರೋಡ್ ತಂಡಗಳು ಭಾಗವಹಿಸಲಿವೆೆ. ವಿಜೇತ ತಂಡಗಳಿಗೆ ಪ್ರಥಮ 25,000, ದ್ವಿತೀಯ 10,000 ರೂ. ನಗದು, ಕೆಪಿಎಲ್ ಟ್ರೋಫಿ ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಎ.3: ವಾಜಪೇಯಿ ನಗರ ವಸತಿ ಯೋಜನೆಯಡಿ 2015- 16ನೆ ಸಾಲಿಗೆ ಉಡುಪಿ ನಗರಸಭೆಗೆ 200 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಪ್ರತೀ ಮನೆಯ ಘಟಕ ವೆಚ್ಚ 2 ಲಕ್ಷ ರೂ.ಗಳಾಗಿದೆ. ಈ ಮೊತ್ತದಲ್ಲಿ 1,20,000 ರೂ. ಸರಕಾರದ ಸಹಾಯಧನವಾಗಿದ್ದು, 30,000 ರೂ. ಫಲಾನುಭವಿಗಳ ವಂತಿಕೆಯಾಗಿರುತ್ತದೆ. ಉಳಿದ 50,000ರೂ. ಬ್ಯಾಂಕಿನಿಂದ ಸಾಲ ಅಥವಾ ಫಲಾನುಭವಿಗಳ ಹೆಚ್ಚುವರಿ ವಂತಿಕೆಯಾಗಿರುತ್ತದೆ. 2015-16ನೇ ಸಾಲಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 30,000ರೂ.ಗಳ ಫಲಾನುಭವಿ ವಂತಿಗೆಯನ್ನು ಸರಕಾರದ ವತಿಯಿಂದ ಭರಿಸಲಾಗುತ್ತದೆ. ಉಳಿದ 50,000ರೂ. ಬ್ಯಾಂಕ್ ಸಾಲ/ಫಲಾನುಭವಿ ವಂತಿಕೆ ರೂಪದಲ್ಲಿರುತ್ತದೆ.
ಆದುದರಿಂದ ಎಲ್ಲ ಜಾತಿ/ವರ್ಗದ ಸ್ವಂತ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ವಸತಿ ಸೌಲಭ್ಯವನ್ನು ಪಡೆಯಲು ಎ.15ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ಸೂಚನೆ
ಉಡುಪಿ, ಎ.3: ಸಫಾಯಿ ಕರ್ಮಚಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಪ್ರದೇಶದ ಸಫಾಯಿ ಕರ್ಮಚಾರಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ, ಈಗಾಗಲೇ ಸಫಾಯಿ ಕರ್ಮಚಾರಿಗಳೆಂದು ನೊಂದಾವಣೆ ಹೊಂದಿದವರನ್ನು ಹೊರತುಪಡಿಸಿ ಹಾಗೂ ರಾಜ್ಯದ ಗ್ರಾಮೀಣ ಭಾಗದ ಸಫಾಯಿ ಕರ್ಮಚಾರಿಗಳ ಸಮೀಕ್ಷೆ-2016ರ ಪರಿಷ್ಕೃತ ವೇಳಾಪಟ್ಟಿಯನ್ನು ಎ.13ರವರೆಗೆ ವಿಸ್ತರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ ಬಿ ಬ್ಲಾಕ್, 2ನೆ ಮಹಡಿ, ಮಣಿಪಾಲ ಉಡುಪಿ (ದೂ.: 0820-2574892) ಅಥವಾ ಮೊ.:9480843046, ಇ-ಮೇಲ್: ಡ್ಠಿಃಜಞಜ್ಝಿ.್ಚಟಞನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಎ.6ರಂದು ಸರಕಾರಿ ನೌಕರರಿಗೆ ವಿಶೇಷ ರಜೆ
ಮಂಗಳೂರು, ಎ.3: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮೈಸೂರು ವಿಭಾಗೀಯ ಮಟ್ಟದ ಸಮಾವೇಶವು ಎ.6ರಂದು ಕುಂದಾಪುರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗಕ್ಕೆ ಒಳಪಟ್ಟ ರಾಜ್ಯ ಸರಕಾರಿ ನೌಕರರಿಗೆ ಎ.6ರಂದು ವಿಶೇಷ ರಜೆ ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೊರಗರಿಂದ ಮಹಿಳಾ ದಿನಾಚರಣೆ
ಮಂಗಳೂರು, ಎ.3: ಕೊರಗ ಜಿಲ್ಲಾ ಸಮಿತಿ ಮತ್ತು ಕೊರಗ ಅಭಿವೃದ್ಧಿ ಸಂಘ ನಗರ ವಲಯ ಜಂಟಿ ಆಶ್ರಯದಲ್ಲಿ ಕೋಡಿಕಲ್ ಕೊರಗ ಸಮುದಾಯ ಭವನದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಹಕ್ಕುಗಳ ಜಾಗೃತಿ ಸಭೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಗೌರಿ ಕೆಂಜೂರು ಮಹಿಳಾ ಹಕ್ಕುಗಳ ಕುರಿತು ವಿವರಣೆ ನೀಡಿದರು. ಕೊರಗರ ಜಿಲ್ಲಾ ಸಮಿತಿಯ ಅಧ್ಯಕ್ಷೆ ಶಾರದಾ ಪುತ್ತೂರು ಮಾತನಾಡಿ, ಮೇಲ್ವರ್ಗದವರು ಕೊರಗರಿಗೆ ಹಳೆಯ ಬಟ್ಟೆಗಳನ್ನು ಕೊಡುವ ಪದ್ಧತಿ ನಿಲ್ಲಬೇಕು. ಇಂತಹ ಪದ್ಧತಿ ಕೂಡ ಅಜಲಿಗೆ ಒಳಪಡುತ್ತಿದ್ದು, ಇದು ಅಮಾನವೀಯವಾಗಿರುವುದರಿಂದ ಅಜಲು ನಿಷೇಧ ಕಾಯ್ದೆಗೆ ಒಳಪಡುತ್ತದೆ ಎಂದರು. ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಸಂಜೀವ ಮೂಡುಬಿದಿರೆ, ಕೊರಗ ಅಭಿವೃದ್ಧಿ ಸಂಘ ನಗರ ವಲಯದ ಅಧ್ಯಕ್ಷೆ ಗೀತಾ ಮದ್ಯಪದವು, ಉಪಾಧ್ಯಕ್ಷ ಕಿಶನ್ ಕೋಡಿಕಲ್, ಪುತ್ತೂರು ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ತನಿಯಾರು, ಕಂದಾವರ ವಲಯ ಸಂಘದ ಸದಸ್ಯ ಸಂಪ, ಅಡ್ಡೂರು ಕೊರಗ ಅಭಿವೃದ್ಧಿ ಸಂಘ ಬಜ್ಪೆ ವಲಯದ ಸದಸ್ಯೆ ಸುಂದರಿ ಮೊದಲಾದವರು ಉಪಸ್ಥಿತರಿದ್ದರು.
ನಾಳೆ ಬಾಬು ಜಗಜೀವನರಾಂ ಜನ್ಮದಿನಾಚರಣೆ
ಉಡುಪಿ, ಎ.3: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 109ನೆ ಜನ್ಮದಿನಾಚರಣೆ ಎ.5ರಂದು ಬೆಳಗ್ಗೆ 10ಕ್ಕೆೆ ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸುವರು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.