ಬೆಳ್ತಂಗಡಿ: ಸಿಐಟಿಯು ತಾಲೂಕು ಸಮ್ಮೇಳನ
ಬೆಳ್ತಂಗಡಿ, ಎ.3: ಕೇಂದ್ರ ಹಾಗೂ ರಾಜ್ಯ ಸರಕಾರ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರಗಳ ಈ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಸೆಪ್ಟಂಬರ್ 2ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದೆ ಎಂದು ಸಿಐಟಿಯುನ ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಇಂದಬೆಟ್ಟು ಚರ್ಚ್ಹಾಲ್ನಲ್ಲಿ ನಡೆಯುತ್ತಿರುವ ಸಿಐಟಿಯುನ ಬೆಳ್ತಂಗಡಿ ತಾಲೂಕು ಸಮ್ಮೇಳನ ಹಾಗೂ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೆಳ್ತಂಗಡಿ ಸಿ.ಎ. ಬ್ಯಾಂಕ್ನ ಅಧ್ಯಕ್ಷ ಮುನಿರಾಜ ಅಜ್ರಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಪ್ರೊ. ಟಿ.ಪಿ. ಆ್ಯಂಟನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಖ್ಯಾತ ನಾಟಿವೈದ್ಯ ಪಂಡಿತ್ ಕೆ.ಗೋಪಾಲ ಪಣಿಕ್ಕರ್ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಇಂದಬೆಟ್ಟು ಚರ್ಚ್ನ ಧರ್ಮಗುರು ರೆ.ಫಾ. ಸೈಮನ್ ಡಿಸೋಜ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ತಾಲೂಕು ಅಧ್ಯಕ್ಷ ಬಿ.ಎಂ.ಭಟ್, ಸ್ವಾಗತ ಸಮಿತಿಯ ಸಂಚಾಲಕ ನಾರಾಯಣ ಕೈಕಂಬ, ನೆಬಿಸ ಬೆಳ್ತಂಗಡಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ವಸಂತ ನಡ ಸ್ವಾಗತಿಸಿ, ಕೋಶಾಧಿಕಾರಿ ಲಾರೆನ್ಸ್ ವಂದಿಸಿದರು.





