ತಾಲೂಕುಮಟ್ಟದ ಸ್ವಚ್ಛತಾ ಸಪ್ತಾಹ ಉದ್ಘಾಟನೆ
ಉಡುಪಿ, ಎ.3: ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಶಾಸಕ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಶನಿವಾರ ತ್ರಾಸಿ ಗ್ರಾಪಂನ ಅಂಬೇಡ್ಕರ್ ಭವನದಲ್ಲಿ, ಉಡುಪಿ ಜಿಪಂ, ಕುಂದಾಪುರ ತಾಪಂ, ತ್ರಾಸಿ ಮತ್ತು ಹೊಸಾಡು ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಸ್ವಚ್ಛತಾ ಸಪ್ತಾಹ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಎಲ್ಲಾ ಗ್ರಾಪಂಗಳು ಶೌಚಾಲಯ ನಿರ್ಮಾಣದಲ್ಲಿ ಆಂದೋಲನದ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಸಂಪೂರ್ಣ ಗುರಿ ಸಾಧಿಸಿದ್ದು, ಇದರಿಂದ ರಾಜ್ಯದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿದೆ ಎಂದವರು ಹೇಳಿದರು. ಮರವಂತೆಯಲ್ಲಿ ಖಾಯಂ ಸಮುದ್ರ ತಡೆಗೋಡೆ ನಿರ್ಮಿಸಲು 94 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಹಾಗೂ 2 ಕೋ.ರೂ. ವೆಚ್ಚದಲ್ಲಿ ಟೂರಿಸಂ ಜೆಟ್ಟಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಮಾಲೋಚಕ ಸುಧೀರ್ ಮಾತನಾಡಿದರು. ಸಮಾಲೋಚಕ ರಘುನಾಥ್ ತ್ಯಾಜ್ಯ ಸಂಸ್ಕರಣೆಗಳ ಕುರಿತು ಹಾಗೂ ಪೈಪ್ ಕಾಂಪೋಸ್ಟ್ ಮತ್ತಿತರ ವಿಧಾನಗಳ ಕುರಿತು ಪಿಪಿಟಿ ಪ್ರದರ್ಶನ ನೀಡಿದರು.
ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ರಾಜೇಶ್ ಸ್ವಚ್ಛತೆಯ ಕುರಿತು ಉಪನ್ಯಾಸ ನೀಡಿದರು. ತ್ರಾಸಿ ಗ್ರಾಪಂ ಅಧ್ಯಕ್ಷ ವೆಂಕಟ ಪೂಜಾರಿ, ಹೊಸಾಡು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಜಿಪಂ ಸದಸ್ಯೆ ಶೋಭಾ ಪುತ್ರನ್, ತಾಪಂ ಸದಸ್ಯ ರಾಜು ದೇವಾಡಿಗ, ನಾರಾಯಣ ಕೆ. ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಮಾಹಿತಿ ಪಡೆದರು. ಪಿಡಿಒ ಶೋಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.