ಎ.13ರಿಂದ 17ರವರೆಗೆ ಗುಡ್ಡೆಅಂಗಡಿ ಉರೂಸ್
ವಿಟ್ಲ, ಎ.3: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಹಝ್ರತ್ ಶೈಖ್ ವೌಲವಿಯವರ ದರ್ಗಾ ಶರೀಫ್ನ 36ನೆ ಉರೂಸ್ ಎ.13ರಿಂದ 17ರವರೆಗೆ ನಡೆಯಲಿದೆ. ಎ.17ರಂದು ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿಯ ಮೇಲಂತಸ್ತನ್ನು ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿ ವಕ್ಫ್ ನೆರವೇರಿಸುವರು. ಇದೇ ವೇಳೆ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ರನ್ನು ಜಮಾಅತ್ ಖಾಝಿಯಾಗಿ ಸ್ವೀಕರಿಸಲಾಗುವುದು. ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ತಾನೂರಿನ ಸೈಯದ್ ಫಕ್ರುದ್ದೀನ್ ಹಸನಿ ಖಾದಿರಿ ದಾರಿಮಿ ತಂಙಳ್ ದುಆಶಿರ್ವಚನಗೈಯಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸುವರು. ಸ್ಥಳೀಯ ಖತೀಬ್ ಮುಸ್ತಫಾ ಫೈಝಿ ಪಾತೂರು ಅಧ್ಯಕ್ಷತೆ ವಹಿಸುವರು. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ ಮುಖ್ಯ ಭಾಷಣಗೈಯುವರು. ಸಂಜೆ ಎ.ಎ.ಇಬ್ರಾಹೀಂ ಮುಸ್ಲಿಯಾರ್ ಬೋಗೋಡಿ ನೇತೃತ್ವದಲ್ಲಿ ವೌಲಿದ್ ಪಾರಾಯಣ ನಡೆಯಲಿದೆ. ಪ್ರತೀ ದಿನ ಮಗ್ರಿಬ್ ಬಳಿಕ ಬಿ.ಕೆ.ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಉರೂಸ್ ಪ್ರಯುಕ್ತ ನಾಲ್ಕು ದಿನಗಳ ಕಾಲ ಝುಬೈರ್ ದಾರಿಮಿ ಪೈಕಂ, ಸಲೀಂ ಫೈಝಿ ಇರ್ಫಾನಿ, ಅನ್ವರ್ ಅಲಿ ಹುದವಿ ಮಲಪ್ಪುರಂ, ಮೊಯ್ದಿನ್ ಅಝ್ಹರಿ ನೆಲ್ಲಿಕಟ್ಟೆ ಧಾರ್ಮಿಕ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.