ಎ.7ಕ್ಕೆ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣ ಉದ್ಘಾಟನೆ
ನಿಟ್ಟೆ, ಎ.4: ಅವಿಭಜಿತ ದ.ಕ.ಜಿಲ್ಲೆಯ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ನಿಟ್ಟೆ ಶಿಕ್ಷಣ ಸಂಸ್ಥೆಯು ತನ್ನ ನಿಟ್ಟೆ ಕ್ಯಾಂಪಸ್ನಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳನ್ನೊಳಗೊಂಡ ‘ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣ’ದ ಉದ್ಘಾಟನೆಯು ಎ.7ರಂದು ನಡೆಯಲಿದೆ ಎಂದು ನಿಟ್ಟೆ ವಿವಿಯ ಚಾನ್ಸಲರ್ ಹಾಗೂ ನಿಟ್ಟೆ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಬೆಳ್ಳಿಯಪ್ಪ ಚಂದ್ರಹಾಸ ಆಳ್ವ (ಬಿ.ಸಿ.ಆಳ್ವ-1923-1982) ತಮಿಳುನಾಡು (1944ರಿಂದ 55ರವರೆಗೆ ) ಹಾಗೂ ಕರ್ನಾಟಕ (1957-59) ರಣಜಿ ತಂಡಗಳ ಪರ ಆಡಿದ್ದಲ್ಲದೆ ಎರಡು ಅನಧಿಕೃತ ಟೆಸ್ಟ್ ಪಂದ್ಯ ಗಳಲ್ಲೂ ಭಾರತವನ್ನು 1951-52) ಪ್ರತಿನಿಧಿಸಿದ್ದರು ಎಂದರು.
ಸುಮಾರು 10 ಎಕರೆ ಪ್ರದೇಶದಲ್ಲಿ ಅಂದಾಜು 12 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತಿ ನಿಂತಿರುವ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣ, ಮೂರು ಬ್ಯಾಡ್ಮಿಂಟನ್ ಕೋರ್ಟ್ಗಳಲ್ಲದೆ, ಒಂದು ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ಬಾಲ್ ಕೋರ್ಟ್, ಟೇಬಲ್ ಟೆನಿಸ್, ಹಾಗೂ ಇತರ ಒಳಾಂಗಣ ಕ್ರೀಡೆಗಳಾದ ಚೆಸ್ ಹಾಗೂ ಕೇರಂ ಆಡಲು ಅನುಕೂಲವಾದ ಸೌಲಭ್ಯಗಳನ್ನೊಳಗೊಂಡ 14,000 ಚ.ಅಡಿ ವಿಸ್ತೀರ್ಣದ ಒಳಾಂಗಣ ಕ್ರೀಡಾಂಗಣವನ್ನು ಹೊಂದಿದೆ ಎಂದ ವರು ತಿಳಿಸಿದರು.
ಅಲ್ಲದೆ, ಇದರಲ್ಲಿ ಅತ್ಯಾಧುನಿಕ ಬಹುಪಯೋಗಿ ಜಿಮ್ನೇಶಿಯಂ, ವೈಯಕ್ತಿಕ ವ್ಯಾಯಾಮಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು, ವೆಯ್ಟೆಲಿಫ್ಟಿಂಗ್, ಪವರ್ಲಿಫ್ಟಿಂಗ್ ತರಬೇತಿಗೆ ಬೇಕಾದ ಸೌಲಭ್ಯ ಹಾಗೂ ಫಿಟ್ನೆಸ್ ಕೇಂದ್ರಗಳನ್ನೂ ನಿರ್ಮಿಸಲಾಗಿದೆ ಎಂದು ವಿನಯ ಹೆಗ್ಡೆ ತಿಳಿಸಿದರು.
ಹೊರಾಂಗಣ ಕ್ರೀಡಾಂಗಣ ಸೌಲಭ್ಯಗಳಲ್ಲಿ 400ಮೀ.ನ ಎಂಟು ಲೇನ್ ಟರ್ಫ್ ಟ್ರಾಕ್, ಉಳಿದಂತೆ ಎಲ್ಲಾ ವಿಧದ ಜಂಪ್ ಹಾಗೂ ಥ್ರೋಗಳಿಗೆ ಅನುಕೂಲಕರವಾದ ಅವಕಾಶ, ಸುಂದರವಾದ ಪೆವಿಲಿಯನ್ ಕಟ್ಟಡ, ಅದರಲ್ಲಿ ಫಿಟ್ನೆಕ್ ಕೇಂದ್ರವನ್ನು ಈಗಾಗಲೇ ನಿರ್ಮಿಸಲಾಗಿದೆ. ಒಂದು ಕ್ರಿಕೆಟ್ ಮೈದಾನವಿದ್ದು, ಇಲ್ಲಿ ಅಭ್ಯಾಸಕ್ಕಾಗಿ ಮೂರು ಕ್ರಿಕೆಟ್ ಪಿಚ್ಗಳನ್ನು ನಿರ್ಮಿಸಲಾಗಿದೆ. ಹಾಕಿ, ಫುಟ್ಬಾಲ್ ಮೈದಾನಗಳೂ ನಿರ್ಮಾಣ ಹಂತದಲ್ಲಿವೆ.
ಮೂರು ವಾಲಿಬಾಲ್, ಥ್ರೋಬಾಲ್ ಕೋರ್ಟ್ಗಳು, ಒಂದು ಹ್ಯಾಂಡ್ಬಾಲ್ ಕೋರ್ಟ್, ಎರಡು ಬಾಸ್ಕೆಟ್ಬಾಲ್ ಕೋರ್ಟ್, ಕಬಡ್ಡಿ, ಖೋ-ಖೋ ಹಾಗೂ ನೆಟ್ಬಾಲ್ ಕೋರ್ಟ್ಗಳು ಸಹ ಇಲ್ಲಿವೆ. ಜಿಮ್ನೇಶಿಯ ಹಾಗೂ ಬಾಸ್ಕೆಟ್ಬಾಲ್ ಒಳಾಂಗಣ ಕೋರ್ಟ್ಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಮರದ ನೆಲಹಾಸನ್ನು ಹೊಸದಾಗಿ ಹಾಸಲಾಗಿದೆ ಎಂದು ಹೆಗ್ಡೆ ವಿವರಿಸಿದರು.
ಎ.7ರಂದು ಸಂಜೆ 4 ಗಂಟೆಗೆ ಭಾರತದ ಮಾಜಿ ಅಂತಾ ರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಉದ್ಘಾಟಿಸಲಿದ್ದಾರೆ. ರಾಜ್ಯ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕದ ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇವುಗಳೊಂದಿಗೆ 50 ಮೀ. ಉದ್ದದ ಎಂಟು ಲೇನ್ಗಳನ್ನೊಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದ ನಿರ್ಮಾಣಕ್ಕೆ ಅದೇ ದಿನ ಜಸ್ಟೀಸ್ ಸಂತೋಷ್ ಹೆಗ್ಡೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈಜು ಕೊಳ ಹಾಗೂ ಒಳಾಂಗಣ ವಾಲಿಬಾಲ್ ಕೋರ್ಟ್ಗಳು ಒಂದು ವರ್ಷದೊಳಗೆ ಸಿದ್ಧಗೊಳ್ಳಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪೋರ್ಟ್ಸ್ ಅಕಾಡಮಿ
ನಿಟ್ಟೆ ಶಿಕ್ಷಣ ಟ್ರಸ್ಟ್ ವತಿಯಿಂದ ಕ್ರೀಡಾ ಅಕಾಡಮಿ ಯೊಂದನ್ನು ನಿರ್ಮಿಸುವ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಮಂಗಳೂರಿನಲ್ಲಿ 50 ಎಕರೆ ಜಾಗ ಖರೀದಿಸಲಾಗುತ್ತಿದೆ. ಇಲ್ಲಿ ಅಥ್ಲೆಟಿಕ್ಸ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಸಿಂಥೆಟಿಕ್ ಟೆನಿಸ್ ಕೋರ್ಟನ್ನು ನಿರ್ಮಿಸಲಾಗುತ್ತಿದೆ.
ಅಲ್ಲದೆ, ತಮ್ಮ ಸಂಸ್ಥೆಯ ವತಿಯಿಂದ 18 ಮಂದಿ ಕ್ರೀಡಾಪಟುಗಳಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ತರಬೇತಿಯನ್ನು ನೀಡಲಾಗುತ್ತಿದೆ. ಸುಮಾರು 70 ಮಂದಿಗೆ ಅರೆಕಾಲಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ವಿನಯ ಹೆಗ್ಡೆ ತಿಳಿಸಿದರು.