ಎ.8ರಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ
ಬಂಟ್ವಾಳ, ಎ. 4: ರಂಗದಿಗ್ಗಜ ಬಿ.ವಿ.ಕಾರಂತರ ರಂಗ ಕಾಯಕವನ್ನು ಗೌರವಿಸುವ ಸಲುವಾಗಿ ಮಂಚಿ ಕುಕ್ಕಾಜೆಯ ರಂಗಭೂಮಿಕಾ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬಿ.ವಿ.ಕಾರಂತ ನೆನಪಿನ 'ಮಂಚಿ ನಾಟಕೋತ್ಸವ'ವು ಎ. 8ರಿಂದ ಮೂರು ದಿನಗಳ ಕಾಲ ಕೊಳ್ನಾಡು ಗ್ರಾಮದ ನೂಜಿಬೈಲು ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎ.8 ರಂದು ಸಂಜೆ 6 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ನಾಟಕೋತ್ಸವವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ರಘುನಾಥ ಸೋಮಯಾಜಿ ಎರೆಕಳ, ನೂಜಿಬೈಲು ನಾರಾಯಣ ಭಟ್, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ರಂಗಕಲಾವಿದೆ ಜಯಲಕ್ಷ್ಮೀ ಪಾಟೀಲ ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ ಪುತ್ತೂರಿನ ಶಿವರಾಮಕಾರಂತ ಬಾಲವನ ರಂಗತಂಡದಿಂದ ವಿದ್ದು ಉಚ್ಚಿಲ ನಿರ್ದೇಶನದಲ್ಲಿ ಮಹಾಮಾಯಿ ನಾಟಕ ನಡೆಯಲಿದೆ ಎಂದರು. ಎ.9ರಂದು ಸಂಜೆ 6ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ್ ಆಚಾರ್ ಮಂಚಿ, ಬಂಟ್ವಾಳ ಎಸ್ವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಳಿಕ ಉಡುಪಿ ಸುಮನಸ ಕೊಡವೂರು ತಂಡದಿಂದ ಚೇತನ್ ನಿರ್ದೇಶನದ ದಾರಶಿಕೋ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಎ.10ರಂದು ಅಪರಾಹ್ನ 2 ಗಂಟೆಯಿಂದ ಬಿ.ವಿ.ಕಾರಂತರ ಸಂಗೀತ ಹಾಗೂ ನಿರ್ದೇಶನವಿರುವ ಜೋಮನದುಡಿ ಚಲನಚಿತ್ರ ಪ್ರದರ್ಶನವಿದ್ದು, ಬಳಿಕ ಚಲನಚಿತ್ರ ನಿರ್ದೆಶಕ ಅಭಯಸಿಂಹ, ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೋಡಿಯಾಲ್ಬೈಲು, ರಂಗಕಲಾವಿದ ಚಂದ್ರಹಾಸ ಉಲ್ಲಾಳ್, ಮಕ್ಕಳ ನಾಟಕ ವಿನ್ಯಾಸಗಾರ ಮೂರ್ತಿ ದೇರಾಜೆ ,ಮೋಹನ್ ಸೋನಾ, ಪತ್ರಕರ್ತರಾದ ವೌನೇಶ್ ವಿಶ್ವಕರ್ಮ, ಗೋಪಾಲ ಅಂಚನ್, ಜೋಮನದುಡಿ ಚಿತ್ರನಟರಾದ ಎಂರ್ಬು ಶಂಕರಭಟ್ಟ, ಅಧ್ಯಾಪಕ ಅರವಿಂದ ಕುಡ್ಲ, ಲೇಖಕಿ ಅನಿತಾ ನರೇಶ್ ಮಂಚಿ, ಲೇಖಕರಾದ ವಸಂತ ಕಜೆ ಹಾಗೂ ಇತರರು ಭಾಗವಹಿಸಲಿರುವರು. ಸಂಜೆ ಅಂತಾರಾಷ್ಟ್ರೀಯ ಚಾದೂಗಾರ ಪ್ರೊ.ಶಂಕರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪತ್ರಕರ್ತ ಮನೋಹರ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಆ ದಿನ ಬಿ.ವಿ.ಕಾರಂತ ರಂಗಶಾಲೆ ಮಂಚಿ, ಸಮಸಾಂಪ್ರತಿ ವಿಟ್ಲ ಪ್ರಸ್ತುತಿಯಲ್ಲಿ ನೂಜಿಬೈಲು ಶಾಲಾ ಮಕ್ಕಳ ಅಭಿನಯದಲ್ಲಿ ಮೂರ್ತಿ ದೇರಾಜೆ ಹಾಗೂ ಶಂಕರಪ್ರಸಾದ ವಿನ್ಯಾಸಗೊಳಿಸಿದ 'ಕಪ್ಪು ಕಾಗೆಯ ಹಾಡು' ನಾಟಕ ಪ್ರದರ್ಶನಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಐತಾಳ್, ಜತೆ ಕಾರ್ಯದರ್ಶಿಗಳಾದ ಎಂ.ಉಮಾನಾಥ ರೈ, ಎನ್.ರಮಾನಂದ ಹಾಗೂ ಟ್ರಸ್ಟಿ ಮೋಹನ ಪ್ರಭು ಉಪಸ್ಥಿತರಿದ್ದರು.