ಎ. 15ವರೆಗೆ ಮತ್ತೆ ಬೇಡಿಕೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ
ಬಗೆಹರಿಯದ 17 ನರ್ಮ್ ಬಸ್ಸುಗಳ ರೂಟ್!
ಮಂಗಳೂರು, ಎ. 5: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದ ನರ್ಮ್ ಯೋಜನೆಯಡಿ ಮಂಗಳೂರಿಗೆ ಮಂಜೂರಾಗಿರುವ 35 ಸರಕಾರಿ ಸಿಟಿ ಬಸ್ಸು (ನರ್ಮ್ ಬಸ್)ಗಳಿಗೆ ಸಂಬಂಧಿಸಿ ಬಾಕಿ ಉಳಿದಿರುವ 17 ಬಸ್ಸುಗಳಿಗೆ ನರ್ಮ್ ವ್ಯಾಪ್ತಿಯಲ್ಲಿ ಅಗತ್ಯ ರೂಟ್ಗಳಿಗೆ ಸಾರ್ವಜನಿಕರಿಂದ ಎಪ್ರಿಲ್ 15ರವರೆಗೆ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸುವಂತೆ ಕೆಎಸ್ಆರ್ಟಿಸಿಗೆ ಆರ್ಟಿಎ ನಿರ್ದೇಶಿಸಿದೆ.
ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್ಟಿಎ)ದ ಅಧ್ಯಕ್ಷರಾದ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಟಿಎ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ಆರ್ಟಿಎ ಸಭೆಯಲ್ಲಿ ರೂಟ್ ಬಗ್ಗೆ ಅಂತಿಮಗೊಳಿಸಲು ನಿರ್ಧರಿಸಲಾಯಿತು.
ಪರಿಷ್ಕೃತ ಡಿಎಂ ಅಧಿಸೂಚನೆಯಲ್ಲಿ ಆದೇಶಿಸಲಾದಂತೆ ನರ್ಮ್ ಯೋಜನೆಯ 18 ಬಸ್ಸುಗಳಿಗೆ ಮಾತ್ರವೇ ಸ್ಟೇಟ್ಬ್ಯಾಂಕ್ ಪ್ರವೇಶಕ್ಕೆ ಕಳೆದ (2015ರ ಆಗಸ್ಟ್ 22ರಂದು ನಡೆದ ಸಭೆ) ಆರ್ಟಿಎ ಸಭೆಯಲ್ಲಿ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈ ರೂಟ್ಗಳಲ್ಲಿ ಈಗಾಗಲೇ ನರ್ಮ್ ಬಸ್ಸುಗಳು ಓಡಾಡುತ್ತಿವೆ. ಉಳಿದ 17 ಬಸ್ಸುಗಳಿಗೆ ಸ್ಟೇಟ್ಬ್ಯಾಂಕ್ ಹೊರತುಪಡಿಸಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ರೂಟ್ಗಳನ್ನು ಅಧ್ಯಯನ ಮಾಡಿ ಪರವಾನಿಗೆಗೆ ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಕೆಎಸ್ಆರ್ಟಿಸಿಗೆ ಸೂಚಿಸಲಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲಿ, ಸ್ಟೇಟ್ಬ್ಯಾಂಕ್ನಿಂದಲೇ ಪರವಾನಿಗೆ ನೀಡಬೇಕೆಂಬ ಕೆಎಸ್ಆರ್ಟಿಸಿಯ ಮುಂದುವರಿದ ಪಟ್ಟು, ಖಾಸಗಿ ಬಸ್ಸು ಮಾಲಕರ ವಿರೋಧ ಹಾಗೂ ಅಗತ್ಯ ರೂಟ್ಗಳಲ್ಲಿ ಬಸ್ಸು ಓಡಿಸಬೇಕೆಂಬ ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ಮತ್ತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಾಕೀತು ಮಾಡಿದರು.
ಈ ಸಂದರ್ಭ ಕೆಎಸ್ಆರ್ಟಿಸಿ ಪರ ವಕೀಲರು ವಾದಿಸುತ್ತಾ, ಈಗಾಗಲೇ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಅವಕಾಶ ಮುಗಿದು ಹೋಗಿದೆ. ಜನರ ಬೇಡಿಕೆಯ ಹಿನ್ನೆಲೆಯಲ್ಲಿಯೇ ಉಳಿದ 17 ಬಸ್ಸುಗಳಿಗೂ ಸ್ಟೇಟ್ಬ್ಯಾಂಕ್ನಿಂದ ಪ್ರವೇಶಕ್ಕೆ ಅವಕಾಶಕ್ಕೆ ಆಗ್ರಹಿಸಲಾಗುತ್ತಿದೆ ಎಂದು ಹೇಳಿದಾಗ, ‘‘ಸಾರ್ವಜನಿಕರಿಗೆ ಅಗತ್ಯವಿರುವ ರೂಟ್ಗಳಿಗೆ ಬೇಡಿಕೆ ಸಲ್ಲಿಸಲು ಇನ್ನೂ ಅವಕಾಶವಿದೆ. ಕಳೆದ ಬಾರಿಯ ಸಾರ್ವಜನಿಕರ ಬೇಡಿಕೆಯನ್ನು ಕೆಎಸ್ಆರ್ಟಿಸಿ ಪಾರದರ್ಶಕವಾಗಿ ಪ್ರಸ್ತುತಪಡಿಸಿಲ್ಲ. ಅರ್ಜಿಗಳು ಜಾಸ್ತಿ ಬಂದಿರುವುದಕ್ಕೆ ಪ್ರಾಮುಖ್ಯತೆ ನೀಡುವ ಬದಲು ಬಸ್ಸುಗಳು ಯಾವ ರೂಟ್ಗಳಿಗೆ ಅಗತ್ಯವಿದೆ ಎಂಬ ಬಗ್ಗೆ ಕೆಎಸ್ಆರ್ಟಿಸಿಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ರೂಟ್ ಅಧ್ಯಯನ ಮಾಡಿ ಪಟ್ಟಿ ಸಿದ್ಧಪಡಿಸಿ’’ ಎಂದು ಹೇಳಿದರು.
ನರ್ಮ್ನಡಿ ಹೊಸ ಬಸ್ಸುಗಳನ್ನೇ ಹಾಕಿ, ಗುಜುರಿ ಬಸ್ಸು ಬೇಡ!
‘‘ಕೆಎಸ್ಆರ್ಟಿಸಿ ಸಾರ್ವಜನಿಕರದ್ದು, ಸಾರ್ವಜನಿಕರು ಕೇಳಿದ ಸ್ಥಳಗಳಿಗೆ ಬಸ್ಸುಗಳನ್ನು ಹಾಕಬೇಕು. ತಮಗೆ ಬೇಕಾದಂತೆ ಅಧಿಕಾರಿಗಳು ಬಸ್ಸು ರೂಟ್ ನಿಗದಿಪಡಿಸುವುದಲ್ಲ. ಸುಲ್ತಾನ್ ಬತ್ತೇರಿಯಿಂದ ಕದ್ರಿ- ಮಂಗಳಾದೇವಿ ರೂಟ್ನಲ್ಲಿ ಬಸ್ಸೇ ಇಲ್ಲ. ಅಂತಹ ರೂಟ್ಗಳಿಗೆ ಆದ್ಯತೆ ನೀಡಬೇಕು. ಮಾತ್ರವಲ್ಲದೆ ನರ್ಮ್ ಯೋಜನೆಯಡಿ ಹೊಸ ಬಸ್ಸುಗಳನೇ ಹಾಕಬೇಕಾಗಿತ್ತು. ಆದರೆ ಪ್ರಸ್ತುತ ಮೈಸೂರಿನಿಂದ ಬಂದ ಗುಜರಿ ಬಸ್ಸುಗಳು ಓಡುತ್ತಿವೆ. ಮುಂದಿನ ರೂಟ್ಗಳಿಗೆ ಹೊಸ ಬಸ್ಸುಗಳನ್ನೇ ಹಾಕಿ. ಜನರು ಬೇಕಾದರೆ ಎರಡು ತಿಂಗಳು ಕಾಯಲು ಸಿದ್ಧ’’ ಎಂದು ಸಾರ್ವಜನಿಕರ ಪರವಾಗಿ ಹನುಮಂತ ಕಾಮತ್ ಪ್ರತಿಕ್ರಿಯಿಸಿದರು.
ಸ್ಪೀಡ್ ಗವರ್ನರ್ ಅಳವಡಿಸುವ ಏಜೆನ್ಸಿಯಿಂದ ಬ್ಲಾಕ್ಮೇಲ್
ನಗರದ ಖಾಸಗಿ ಸಿಟಿ ಬಸ್ಸುಗಳು ಅನಿಯಂತ್ರಿತವಾಗಿ ಸಂಚರಿಸುವ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಅಪಘಾತವನ್ನು ತಪ್ಪಿಸಲು ಬಸ್ಸುಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಕುರಿತಾದ ಪ್ರಸ್ತಾವನೆಯ ವೇಳೆ ಖಾಸಗಿ ಬಸ್ಸು ಮಾಲಕರಿಂದ ಆಕ್ಷೇಪ ವ್ಯಕ್ತವಾಯಿತು.
ರಾಜ್ಯ ಸರಕಾರ ಸೂಚಿಸಿರುವ ಏಜೆನ್ಸಿಯು ಬ್ಲಾಕ್ಮೇಲ್ ಮಾಡುತ್ತಿದ್ದು, ಸುಲಿಗೆ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ 3,500ಕ್ಕೆ ಸಿಗುವ ಸ್ಪೀಡ್ ಗವರ್ನರ್ಗೆ ಏಜೆನ್ಸಿಯು ದುಬಾರಿ ಹಣವನ್ನು ಪಡೆಯುತ್ತಿದೆ. ಬೇರೆ ಸಂಸ್ಥೆಯ ಸ್ಪೀಡ್ ಗವರ್ನರ್ ಅಳವಡಿಸಲು ತಮಗೆ ಅನುಮತಿ ನೀಡಬೇಕೆಂದು ಬಸ್ಸು ಮಾಲಕರು ಆಗ್ರಹಿಸಿದರು.
ಈ ಬಗ್ಗೆ ಮನವಿ ಪತ್ರವೊಂದನ್ನು ನೀಡಿದ್ದಲ್ಲಿ ಅದನ್ನು ಸರಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.
ಸಭೆಯಲ್ಲಿ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ. ಹೆಗಡೆ ಉಪಸ್ಥಿತರಿದ್ದರು.
ಟ್ಯಾಂಕರ್ಗಳ ಹಾವಳಿ: ಸೂಕ್ತ ಕ್ರಮಕ್ಕೆ ಎಸ್ಪಿ ಭರವಸೆ
ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುರತ್ಕಲ್ ಮೊದಲಾದೆಡೆಗಳಲ್ಲಿ ಮತ್ತೆ ಟ್ಯಾಂಕರ್ಗಳ ಅಪಘಾತಕ್ಕೀಡಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಹಿಂದೆ ಪೆರ್ನೆಯಲ್ಲಿ ಟ್ಯಾಂಕರ್ ಅವಘಡ ಸಂಭವಿಸಿ ಪ್ರಾಣ ಹಾನಿಯಾದಾಗ ಜಿಲ್ಲಾಡಳಿತ ಗಂಭೀರ ಕ್ರಮ ಕೈಗೊಂಡು ಟ್ಯಾಂಕರ್ಗಳ ಓಡಾಟಕ್ಕೆ ಕೆಲವೊಂದು ನಿಯಮಗಳನ್ನು ರೂಪಿಸಿತ್ತು. ಇದೀಗ ಆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಇಮ್ತಿಯಾಝ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ಯಾಂಕರ್ಗಳ ಅವಘಡವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಟ್ಯಾಂಕರ್ಗಳ ಮಾಲಕರ ಜತೆ ಮಾತುಕತೆ ನಡೆದಿದೆ. ಮತ್ತೊಮ್ಮೆ ಸಭೆ ಕರೆದು ಸಾರಿಗೆ ನಿಯಮಗಳು, ಮುಂಜಾಗೃತಾ ಕ್ರಮದ ಬಗ್ಗೆ ಸ್ಪಷ್ಟಪಡಿಸಲಾಗುವುದು ಎಂದು ಭರವಸೆ ನೀಡಿದರು.