ಕೊಣಾಜೆ: 8ನೇ ವರ್ಷದ ಕ್ಷೇಮಾ ಹೆಲ್ತ್ ಕಾರ್ಡ್ನ ನೊಂದಣಿ ಪ್ರಾರಂಭ
ಕೊಣಾಜೆ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್. ಹೆಗ್ಡೆಚಾರಿಟೇಬಲ್ ಆಸ್ಪತ್ರೆ ವತಿಯಿಂದ ಮದ್ಯಮ ಹಾಗೂ ಬಡ ಜನರ ಉಚಿತ ವೈದ್ಯಕೀಯ ಸೇವೆಗಾಗಿ ಪ್ರಾರಂಭವಾದ "ಕ್ಷೇಮ ಹೆಲ್ತ್ ಕಾರ್ಡ್" ಆರೋಗ್ಯ ವಿಮಾ ಯೋಜನೆಯು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅದರ ನೊಂದಾವಣೆಯು ಪ್ರಾರಂಭವಾಗಿರುತ್ತದೆ. ಈ ವರ್ಷದಲ್ಲಿ ಈ ಯೋಜನೆಯ ಕಾರ್ಯವ್ಯಾಪ್ತಿಯು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಾತ್ರವಲ್ಲದೆ ಇದರ ಅಂಗಸಂಸ್ಥೆಯಾದ ಕಾರ್ಕಳದ ತೆಲ್ಲಾರ್ ರಸ್ತೆಯಲ್ಲಿರುವ ನಿಟ್ಟೆ ಗಾಜ್ರಿಯಾ ಸ್ಪೆಶ್ಯಾಲಿಟಿ ಆಸ್ಪತ್ರೆಯಲ್ಲಿ ಕೂಡ ನೊಂದಣಿ ಹಾಗೂ ವೈದ್ಯಕೀಯ ಸೇವೆ ಪ್ರಾರಂಭವಾಗಿರುತ್ತದೆ.
ಮುಂದೆ ನಡೆಯುವ ಎಲ್ಲಾ ಉಚಿತ ತಪಾಸಣೆ ಶಿಬಿರಗಳಲ್ಲಿ ಈ ಕಾರ್ಡಿನ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಆಸಕ್ತ ಯುವಕ ಮಂಡಲಗಳು ಅಥವಾ ಇತರ ಯಾವುದೇ ಸಂಘ ಸಂಸ್ಥೆಗಳು ಈ ಎರಡು ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ತಪಾಸಣೆ ಶಿಬಿರಗಳನ್ನು ಮಾಡುವುದರ ಮೂಲಕ ಈ ಹೆಲ್ತ್ ಕಾರ್ಡಿನ ಸವಲತ್ತುಗಳನ್ನು ಸಾರ್ವಜನಿಕರಿಗೆ (ಬಡ ಕುಟುಂಬಗಳಿಗೆ) ಮುಟ್ಟಿಸುವಲ್ಲಿ ಸಹಕರಿಸಬಹುದು. ಕಳೆದ ವರ್ಷ ಈ ಯೋಜನೆಯ ಮುಖಾಂತರ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಸುಮಾರು 12435ರೋಗಿಗಳು ಹೊರರೋಗಿಗಳಾಗಿ ಹಾಗೂ 1175 ರೋಗಿಗಳು ಒಳರೋಗಿಗಳಾಗಿ ಪ್ರಯೋಜನವನ್ನು ಪಡೆದು ಕೊಂಡಿರುತ್ತಾರೆ. ಒಂದು ಕುಟುಂಬದ ಐದು ಸದಸ್ಯರನ್ನೊಳಗೊಂಡ ಬಿ.ಪಿ.ಎಲ್. ಕಾರ್ಡ್ದಾರರಿಗೆ ರೂಪಾಯಿ 100/-ಹಾಗೂ ಇತರರಿಗೆ ರೂಪಾಯಿ 250/-ನ್ನು ಪಾವತಿಸಿ ಈ ಯೋಜನೆಗೆ ಸೇರಬಹುದಾಗಿದೆ. ಈ ಯೋಜನೆಗೆ ಸೇರುವ ಕುಟುಂಬದ ಐದು ಸದಸ್ಯರ ಮತಚೀಟಿ ಹಾಗೂ ರೇಶನ್ ಕಾರ್ಡ್ನ ಪ್ರತಿಗಳನ್ನು ಕೊಡಬೇಕಾಗುತ್ತದೆ. ಸಣ್ಣ ಮಕ್ಕಳಾದಲ್ಲಿ ಜನನ ಪ್ರಮಾಣದ ಪ್ರತಿಗಳನ್ನು ನೀಡುವುದರ ಮೂಲಕ ಸೇರಬಹುದಾಗಿದೆ.
ಈ ಯೋಜನೆಯಲ್ಲಿ ಕುಟುಂಬಕ್ಕೆ ಒಟ್ಟು ರೂಪಾಯಿ 30,000/-ಗಳವರೆಗೆ ಒಳರೋಗಿ ವೈದ್ಯಕೀಯ ಸೇವೆ ಲಭ್ಯವಿದ್ದು, ಒಂದು ಸಲದ ಚಿಕಿತ್ಸೆಗೆ ರೂಪಾಯಿ 9000/-ರವರೆಗೆ ವೆಚ್ಚಾ ಸೌಲಭ್ಯವಿದ್ದು, ವರ್ಷಕ್ಕೆ ಒಬ್ಬರಿಗೆ ರೂಪಾಯಿ 15,000/-ರವರೆಗೆ ವೈದ್ಯಕೀಯ ವೆಚ್ಚದ ಸೌಲಭ್ಯವನ್ನು ಪಡೆದುಕೊಳ್ಳಬಹುದು.3ತಿಂಗಳ ಮಗುವಿನಿಂದ 70ವರ್ಷಗಳ ಹಿರಿಯರವರೆಗೆ ಈ ಯೋಜನೆಯು ಲಭ್ಯವಿದ್ದು, ಪೂರ್ವಪೀಡಿತ ಕಾಯಿಲೆಗಳಿಗೂ ಇದು ಅನ್ವಯಿಸುತ್ತದೆ. ಕುಟುಂಬದ ಯಜಮಾನನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದಲ್ಲಿ ರೂಪಾಯಿ 25,000/-ದವರೆಗೆ ಮರಣವಿಮೆ ಕೂಡ ಲಭ್ಯವಿರುತ್ತದೆ. ಈ ಯೋಜನೆಯಡಿಯಲ್ಲಿ 7 ಜನರು ಇಂತಹ ಮರಣ ವಿಮೆಯನ್ನು ಕೂಡ ಪಡೆದಿರುತ್ತಾರೆ. ಬಡಜನರಿಗೆ ಇದೊಂದು ಒಳ್ಳೆಯ ಆರೋಗ್ಯವಿಮೆಯಾಗಿದ್ದು ಸಾರ್ವಜನಿಕರು ಈ ಯೋಜನೆಗೆ ಸೇರುವ ಮೂಲಕ ಇದರ ಸದುಪಯೋಗವನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೂಲಕ ಪಡೆದುಕೊಳ್ಳಬೇಕಾಗಿ ಕ್ಷೇಮದ ಡೀನ್ಪ್ರೊಫೆಸರ್ ಡಾ॥ ಸತೀಶ್ ಕುಮಾರ್ ಭಂಡಾರಿಯವರು ಪ್ರಕಟಣೆಗೆ ತಿಳಿಸಿದ್ದಾರೆ.