ವಿದ್ಯುತ್ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು, ಎ.5: ರಾಜ್ಯದಲ್ಲಿ ತುಘಲಕ್ ಸರಕಾರ ಆಡಳಿತ ನಡೆಸುತ್ತಿದ್ದು, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು ಅವರಿಗೆ ಕಾಣುತ್ತಿಲ್ಲ. ವಿದ್ಯುತ್ ದರ ಏರಿಕೆ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ ಸರಕಾರದ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ಹಾಲಿನ ದರವನ್ನು ಏರಿಕೆ ಮಾಡಿದ್ದಾಯಿತು. ಇದೀಗ, ನೀರಿನ ದರ ಹಾಗೂ ಬೋರ್ವೆಲ್ ಸಂಪರ್ಕವಿರುವ ಮನೆಗಳಿಂದಲೂ ಹೆಚ್ಚುವರಿ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದರು.
ಡಿ.ಕೆ.ಶಿವಕುಮಾರ್ ಇಂಧನ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಇಂಧನ ಇಲಾಖೆ ಹಾಳಾಗಿ ಹೋಗಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಅವರಿಗೆ ಯಾರಾದರೂ ದೂರವಾಣಿ ಕರೆ ಮಾಡಿದರೆ, ಅಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ವಿದ್ಯುತ್ ದರ ಇಳಿಸುವವರೆಗೆ ಸರಕಾರದ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ನಕಲು ಮಾಡುವುದರಲ್ಲಿ ಎತ್ತಿದ ಕೈ: ಕೇಂದ್ರದ ಎಲ್ಇಡಿ ಬಲ್ಬ್ ವಿತರಣೆ ಯೋಜನೆಯನ್ನು ರಾಜ್ಯ ಸರಕಾರ ತನ್ನದು ಎಂದು ಬಿಂಬಿಸಿಕೊಳ್ಳುತ್ತಿದೆ. ಸದನದೊಳಗೆ ವಿದ್ಯುತ್ ಇಲ್ಲದೆ ಮೊಬೈಲ್ ಟಾರ್ಚ್ ಸಹಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಜೆಟ್ ಭಾಷಣ ಓದಿದ್ದನ್ನು ಇಡೀ ದೇಶವೆ ನೋಡಿದೆ. ಈ ಸರಕಾರವು ರಾಜ್ಯಕ್ಕೆ ಕತ್ತಲೆ ಭಾಗ್ಯವನ್ನು ಕರುಣಿಸಿದೆ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಸರಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಲು ಕಷ್ಟವಾಗುತ್ತಿದೆ. ರೈತರ ಪಂಪ್ಸೆಟ್ಗಳಿಗೂ ವಿದ್ಯುತ್ ಇಲ್ಲ. ಪರಿಸ್ಥಿತಿ ಹೀಗಿರುವಾಗ ಸರಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ ಎಂದರು.
ಸರಕಾರದ ಈ ನಿರ್ಧಾರದಿಂದ ಬಡವರು ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದು ದರಿಂದ, ಸರಕಾರ ಈ ಕೂಡಲೇ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿ ಸಿದರು.
ವಿಧಾನಪರಿಷತ್ ಸದಸ್ಯ ಅಶ್ವಥನಾರಾಯಣ ಮಾತನಾಡಿ, ಎಪ್ರಿಲ್ 1ರಂದೆ ಸರಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಮನೆಯ ಕಂದಾಯವನ್ನು ಹೆಚ್ಚಿಸಿದೆ. ಕೊಳವೆಬಾವಿ(ಬೋರ್ವೆಲ್)ಗಳು ಇರುವ ಮನೆಗಳಿಗೂ ತೆರಿಗೆಯನ್ನು ಹೆಚ್ಚಳ ಮಾಡಿದೆ. ಪ್ರತಿ ಯೂನಿಟ್ ವಿದ್ಯುತ್ಗೆ 48 ಪೈಸೆ ದರ ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ ಎಂದರು.
ಜನರನ್ನು ಯಾಮಾರಿಸುತ್ತಿರುವ ಸರಕಾರ: ಕೇಂದ್ರ ಸರಕಾರದ ‘ಪ್ರಕಾಶ ಪಥ’ ಯೋಜನೆಯನ್ನು ನಕಲು ಮಾಡಿ ರಾಜ್ಯ ಸರಕಾರ ‘ಹೊಸ ಬೆಳಕು’ ಯೋಜನೆ ಜಾರಿಗೆ ತಂದಿದೆ. ನಟಿ ರಮ್ಯಾರನ್ನು ಮುಂದಿಟ್ಟುಕೊಂಡು ಜನರನ್ನು ಯಾಮಾರಿಸಲು ಸರಕಾರ ಯತ್ನಿಸುತ್ತಿದೆ ಎಂದು ಅಶ್ವಥನಾರಾಯಣ ಕಿಡಿಗಾರಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಘಟಕದ ಬಿಜೆಪಿ ಅಧ್ಯಕ್ಷ ಸುಬ್ಬನರಸಿಂಹ, ಬಿಬಿಎಂಪಿ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಜಭವನದಲ್ಲಿ ಶಿಷ್ಟಾಚಾರದಂತೆ ಮರ್ಯಾದೆ ನೀಡಬೇಕಿತ್ತು. ಆದರೆ, ರಾಜಭವನದ ಭದ್ರತಾ ಸಿಬ್ಬಂದಿ ಅವರಿಗೆ ಅವಮಾನವಾಗುವಂತೆ ನಡೆಸಿ ಕೊಂಡಿದ್ದು ಸರಿಯಲ್ಲ. ಈ ಬಗ್ಗೆ ರಾಜ್ಯಪಾಲರ ಬಳಿ ಸಮಜಾಯಿಷಿ ಕೇಳುತ್ತೇವೆ.
-ಆರ್.ಅಶೋಕ್, ಮಾಜಿ ಡಿಸಿಎಂ.





