ಮಂಗಳೂರಿನಲ್ಲಿ ಪಶು ಆಹಾರ ಘಟಕ: ಸಚಿವ ಮಂಜು
ಮಂಗಳೂರು,ಎ.5: ಸುಮಾರು 50 ಕೋ.ರೂ. ವೆಚ್ಚದಲ್ಲಿ 300 ಟನ್ ಪಶು ಆಹಾರ ಉತ್ಪಾದಿಸುವ ಪಶು ಆಹಾರ ಘಟಕವನ್ನು ಮಂಗಳೂರಿನಲ್ಲಿ ಶೀಘ್ರದಲ್ಲೇ ಸ್ಥಾಪಿಸ ಲಾಗುವುದು. ಮುಂದಿನ ಪೂರಕ ಬಜೆಟ್ನಲ್ಲಿ ಇದನ್ನು ಪ್ರಸ್ತಾಪಿಸುವುದರೊಂದಿಗೆ ಇಲ್ಲಿನ ರೈತರ ಪ್ರಮುಖ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಎ. ಮಂಜು ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶು ಸಂಗೋಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗೋ ಶಾಲೆಗಳಿಗೆ ಅನುಕೂಲತೆಯನ್ನು ಕಲ್ಪಿಸಲಾಗುತ್ತಿದೆ. ದ.ಕ. ಜಿಲ್ಲೆಯ 7 ಗೋ ಶಾಲೆಗಳಿಗೆ 83 ಲಕ್ಷ ರೂ. ಹಾಗೂ ಉಡುಪಿಯ ಪೇಜಾವರ ಗೋ ಶಾಲೆಗೆ 34 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಗೋ ಸಂರಕ್ಷಣೆಗಾಗಿ 7 ಕೋಟಿ ರೂ.ನ್ನು ರಾಜ್ಯ ಸರಕಾರವು ಸೋಮವಾರ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ರಾಜ್ಯದ ಕೆಲವು ಕಡೆ ಬರ ಪರಿಸ್ಥಿತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೈನುಗಾರಿಕೆಗೆ ಅನುಕೂಲವಾಗುವಂತೆ 20 ಕೋಟಿ ರೂ. ವೆಚ್ಚದಲ್ಲಿ ರೈತರಿಗೆ ಮೇವಿನ ಬೀಜ ವಿತರಿಸಲಾಗಿದೆ. ಅದರ ಜೊತೆಗೆ ರೂ.3ರ ದರದಲ್ಲಿ ಮೇವನ್ನು ಕೂಡ ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.