ಕೊಲ್ಲೂರು ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ
ಉಡುಪಿ, ಎ.5: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿರುವ ಚಿನ್ನಾಭರಣ ಕಳವು ಪ್ರಕರಣ ವರದಿಯಾಗಿ ಒಂದು ತಿಂಗಳು ಕಳೆದಿ ದ್ದರೂ ಸರಕಾರ ಇದುವರೆಗೆ ಅವ್ಯವಹಾರ ಹಾಗೂ ಅಕ್ರಮಗಳ ಕುರಿತಂತೆ ಸಮಗ್ರ ತನಿಖೆಗೆ ಮುಂದಾಗ ದಿರುವುದು ಭಕ್ತರಿಗೆ ನೋವುಂಟು ಮಾಡಿದೆ ಎಂದು ದೇವಳದ ಮಾಜಿ ಆಡಳಿತ ಮೊಕ್ತೇಸರ ಹಾಗೂ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಗಾಗಿ ಜಿಲ್ಲಾಧಿಕಾರಿಯವರು ನೇಮಕ ಮಾಡಿರುವ ವಿವಿಧ ಇಲಾಖೆಗಳ ಅಧಿಕಾರಿ ಗಳನ್ನೊಳಗೊಂಡ ತನಿಖಾ ತಂಡವನ್ನು ವಜಾ ಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈಗ ತನಿಖೆ ಸಾಗುತ್ತಿರುವ ದಾರಿಯನ್ನು ನೋಡಿ ದರೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿರುವ ಶಂಕೆ ಬಲವಾಗಿ ಕಾಡುತ್ತಿದೆ. ಜಿಲ್ಲಾಧಿಕಾರಿ ನೇಮಿಸಿರುವ ತನಿಖಾ ತಂಡದ ಓರ್ವ ಅಧಿಕಾರಿಯ ಮೇಲೆಯೇ ಪ್ರಕರಣದ ಆರೋಪಗಳಿವೆ. ದೇವಸ್ಥಾನದಲ್ಲಿ ಅವ್ಯವಹಾರ ನಡೆದ ಅವಧಿಯಲ್ಲಿ ಈ ಅಧಿಕಾರಿಯೂ ದೇವ ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂದವರು ಆರೋಪಿಸಿದರು.
ಆದ್ದರಿಂದ ಈಗಿರುವ ತನಿಖಾ ಸಂಸ್ಥೆಯನ್ನು ರದ್ದುಪಡಿಸಿ, ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಸಮಿತಿಯನ್ನು ನೇಮಿಸಬೇಕು. ಇದರಿಂದ ತನಿಖೆಗೆ ವಿಶ್ವಾಸಾರ್ಹತೆ ಬರುತ್ತದೆ ಎಂದರು.
ದೇವಸ್ಥಾನದ ಸಾಮಾನ್ಯ ನೌಕರನೊಬ್ಬನನ್ನು ಪ್ರಕರಣದ ಪ್ರಮುಖ ರೂವಾರಿ ಎಂದು ಹೆಸರಿಸಿ, ಒಟ್ಟಾರೆಯಾಗಿ ಪ್ರಕರಣದ ಹಿಂದಿರುವ ಶಕ್ತಿಗಳನ್ನು ರಕ್ಷಿಸುವ ಉದ್ದೇಶಿತ ಪ್ರಯತ್ನಗಳನ್ನು ಮಾಡಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ದೂರು ಅರ್ಜಿಯಲ್ಲಿ ಹೆಸರಿಸಲಾಗಿರುವ ಪ್ರಮುಖ ಆರೋಪಿ ಶಿವರಾಂ ಮಡಿವಾಳ ಹಾಗೂ ಇತರ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಳಿಕ ಪೊಲೀಸರ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಆದರೆ ಇಡೀ ಪ್ರಕರಣ ನಡೆಯಲು ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಲ್ಲಿ ಇನ್ನೂ ಅನೇಕ ಮಂದಿ ಭಾಗಿಯಾಗಿದ್ದಾರೆ ಎಂಬ ಶಂಕೆಯನ್ನು ಅಣ್ಣಾಮಲೈ ವ್ಯಕ್ತಪಡಿಸಿದ್ದರು. ಕರ್ತವ್ಯ ಲೋಪ ಎಸಗಿದ ಕಾರ್ಯನಿರ್ವಹಣಾ ಧಿಕಾರಿಗಳು, ಸಹಾಯಕ ಕಾರ್ಯ ನಿರ್ವಹಣಾ ಧಿಕಾರಿ, ಅಧೀಕ್ಷಕರು ಸೇರಿದಂತೆ 10 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಪಡೆಯುವುದಾಗಿಯೂ ತಿಳಿಸಿದ್ದರು. ಆದರೆ ಇದುವರೆಗೂ ಈ ಕುರಿತು ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಹೇಳಿದರು. ತನಿಖೆ ಇದೇ ರೀತಿ ಮುಂದುವರಿದರೆ ದೇವ ಸ್ಥಾನದ ಭಕ್ತರು, ಸಾರ್ವಜನಿಕರು, ಗ್ರಾಮಸ್ಥರು, ಸಮಾನಮನಸ್ಕರು ಹಾಗೂ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಬೃಹತ್ ಜನಾಂದೋಲವನ್ನು ಮಾಡಲಾಗುವುದು ಎಂದು ಎಚ್ಚರಿಸಿದ ಅವರು, ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗಲಾ ಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ್ ಗಾಣಿಗ ಹಾಗೂ ಆಲೂರು ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಮೂಲ ಆಭರಣ ಎಲ್ಲಿ; ಲೆಕ್ಕಪರಿಶೋಧನೆ ಯಾಕಿಲ್ಲ?
ಆರೋಪಿ ಶಿವರಾಂ ಮಡಿವಾಳನ ಸಮಕ್ಷಮದಲ್ಲಿ ತೆರೆಯಲಾದ ಚಿನ್ನಾಭರಣಗಳ ಕಪಾಟಿನಲ್ಲಿ ಪತ್ತೆಯಾಗಿರುವ ನಕಲಿ ಆಭರಣಗಳ ಮೂಲವನ್ನು ಪತ್ತೆ ಮಾಡುವ ಪ್ರಯತ್ನ ಈವರೆಗೆ ನಡೆದಿಲ್ಲ. ಈ ನಕಲಿ ಆಭರಣಗಳನ್ನು ತನಿಖೆಗಾಗಿ ಪೊಲೀಸರಿಗೂ ಒಪ್ಪಿಸಿಲ್ಲ. ಬೀಗ ಹಾಕಿರುವ ಕಪಾಟಿನಲ್ಲಿ ನಕಲಿ ಆಭರಣಗಳನ್ನು ಇಡಲಾಗಿದೆ ಎಂದಾದರೆ ಅದೇ ರೀತಿ ಮೂಲ ಆಭರಣಗಳುಎಲ್ಲಿಗೆ ಹೋಗಿವೆ ಎಂಬ ಬಗ್ಗೆ ವಿಸ್ತೃತ ತನಿಖೆಯಾಗಬೇಕು ಎಂದು ಅಪ್ಪಣ್ಣ ಹೆಗ್ಡೆ ಒತ್ತಾಯಿಸಿದರು.
ದೇವಸ್ಥಾನದಲ್ಲಿ ಬಹುಕಾಲದಿಂದ ಇರುವ ಬೆಲೆ ಕಟ್ಟಲಾಗದ ಅಮೂಲ್ಯ ಪೂಜಾ ಸಾಮಗ್ರಿ, ಆಭರಣಗಳು ಎಲ್ಲಿವೆ ಎಂಬ ಬಗ್ಗೆ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ದೇವಸ್ಥಾನದ ಎಲ್ಲಾ ಅರ್ಚಕರ ವಿಚಾರಣೆಯನ್ನೂ ನಡೆಸಬೇಕು ಎಂದವರು ಹೇಳಿದರು.
8 ವರ್ಷಗಳಿಂದ ದೇವಸ್ಥಾನದ ಲೆಕ್ಕ ಪರಿಶೋಧನೆ ನಡೆಯದಿರುವುದು ಆಶ್ಚರ್ಯದ ಸಂಗತಿ ಎಂದ ಅಪ್ಪಣ್ಣ ಹೆಗ್ಡೆ, ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ, ಇಒ ಹಾಗೂ ಆಡಳಿತಾಧಿಕಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಲೆಕ್ಕಪರಿಶೋಧನೆ ಮಾಡದಿರುವುದು ಎಲ್ಲರ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಒಂದು ವೇಳೆ ನಿಯಮಿತವಾಗಿ ಲೆಕ್ಕಪರಿಶೋಧನೆ ನಡೆದಿದ್ದರೆ ಚಿನ್ನಾಭರಣ ಕಳವು ಈ ಹಿಂದೆಯೇ ಪತ್ತೆಯಾಗುತ್ತಿತ್ತು ಎಂದು ಹೇಳಿದರು.
ತನಿಖೆಯಲ್ಲಿ ಪ್ರಭಾವಿ ರಾಜಕಾರಣಿಗಳು ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಸಂಶಯಗಳಿದ್ದು, ಇದರಿಂದ ತನಿಖೆ ವೇಗ ಕುಂಠಿತಗೊಂಡಿದ್ದು, ದಾರಿ ತಪ್ಪುವ ಸಾಧ್ಯತೆ ಇದೆ ಎಂದವರು ಹೇಳಿದರು.