ಚುಟುಕು ಸುದ್ದಿಗಳು
ಕೆಎಸ್ಸಾರ್ಟಿಸಿ ಶಿಶಿಕ್ಷು ತರಬೇತಿ
ಮಂಗಳೂರು, ಎ.6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಶಿಶಿಕ್ಷು ಅಧಿನಿಯಮ 1961ರ ಅನ್ವಯ ವಿವಿಧ ವೃತ್ತಿಗಳಲ್ಲಿ ಪೂರ್ಣ ಅವಧಿಯ ತರಬೇತಿ ಪಡೆಯಲು ಇಚ್ಛಿಸುವ ಎಸೆಸೆಲ್ಸಿ ಅಥವಾ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮೆಕ್ಯಾನಿಕ್ ಡೀಸೆಲ್, ವೆಲ್ಡರ್, ಮೆಕ್ಯಾನಿಕ್ ಆಟೋ ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ಆಟೋಮೊಬೈಲ್, ಇತ್ಯಾದಿ ಶಿಶಿಕ್ಷು ವೃತ್ತಿ ತರಬೇತಿಗಾಗಿ ಅರ್ಜಿ ಆಹಾನಿಸಲಾಗಿದೆ.
ಆಸಕ್ತರು ಬಿಳಿ ಕಾಗದದಲ್ಲಿ ತಮ್ಮ ಸ್ವಂತ ಕೈಬರಹದಲ್ಲಿ ಬರೆದ ಅಥವಾ ಬೆರಳಚ್ಚುಗೊಳಿಸಿದ ಅರ್ಜಿಯೊಂದಿಗೆ ಎ.12ರಂದು ಬೆಳಗ್ಗೆ 10ಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾ ನಿಗಮ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ ಪುತ್ತೂರು ಇವರ ಕಚೇರಿಯಲ್ಲಿ ನೇರ ಸಂದರ್ಶನಕ್ಕಾಗಿ ಹಾಜರಾಗುವಂತೆ ಪ್ರಕಟನೆೆ ತಿಳಿಸಿದೆ.
ಉಚಿತ ಯಕ್ಷಗಾನ ತರಬೇತಿ
ಉಡುಪಿ, ಎ.6: ಮಂದಾರ್ತಿ ಸಮೀಪದ ತಂತ್ರಾಡಿ ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾರಂಗ ಮಕ್ಕಳ ಮೇಳ ಕಲಾ ಸಂಸ್ಥೆ ಎಪ್ರಿಲ್- ಮೇ ತಿಂಗಳಲ್ಲಿ ಯಕ್ಷ ಶಿಕ್ಷಣದಲ್ಲಿ ಬಣ್ಣಗಾರಿಕೆ, ಪೋಷಾಕು ಕಟ್ಟಿಕೊಳ್ಳುವುದು, ನೃತ್ಯ ಕಲಾ ಸಾಹಿತ್ಯ ಶಿಕ್ಷಣವನ್ನು ಉಚಿತವಾಗಿ ನೀಡಲಿದೆ. 6ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ತರಬೇತಿಗೆ ಸೇರಿಕೊಳ್ಳಬಹುದು. ದೂರದ ಊರಿನಿಂದ ಬರುವ ಮಕ್ಕಳಿಗೆ ಊಟ ವಸತಿ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗೆ ಹಿರಿಯಣ್ಣ ಶೆಟ್ಟಿಗಾರ್, ವ್ಯವಸ್ಥಾಪಕರು, ತಂತ್ರಾಡಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾರಂಗ, ಮಂದಾರ್ತಿ, ಉಡುಪಿ (ಮೊ.: 9449388958) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇಂದು ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು, ಎ.6: ನಗರದ ಕರಾವಳಿ ಕಾಲೇಜುಗಳ ಸಮೂಹದ 20ನೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಎ.7ರಂದು ಬೆಳಗ್ಗೆ 10 ಗಂಟೆಗೆ ನೀರುಮಾರ್ಗದಲ್ಲಿರುವ ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್. ಎಜ್ಯುಕೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು. ಕರಾವಳಿ ಕಾಲೇಜುಗಳ ನಿರ್ದೇಶಕಿ ಲತಾ ಜಿ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಅನುಸ್ಮರಣಾ ಸಮ್ಮೇಳನ
ಮಂಗಳೂರು, ಎ. 6: ಕೊಣಾಜೆ ಅಡ್ಕರೆಪಡ್ಪುವಿನ ತಾಜುಲ್ ಇಸ್ಲಾಂ ಆಶ್ರಯದಲ್ಲಿ ಎ.7ರಂದು ರಾತ್ರಿ 8 ಗಂಟೆಗೆ ಅಡ್ಕರೆಪಡ್ಪು ಮಸೀದಿ ವಠಾರದಲ್ಲಿ ಅನುಸ್ಮರಣಾ ಸಮ್ಮೇಳನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಲ್ ಬಾಯಾರ್ ನೇತೃತ್ವದಲ್ಲಿ ಅನುಸ್ಮರಣಾ ಸಮ್ಮೇಳನ ಹಾಗೂ ಅನಸ್ ಅಲ್ ಕಾಮಿಲ್ ಸಖಾಫಿ ಸಿರಿಯಾರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಅಡ್ಕರೆಪಡ್ಪು ಎಚ್.ಎಸ್.ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂದು ಕಿಲ್ಲೂರು ಮಜ್ಲಿಸು ವಸೀಲತುಲ್ಲಾಹ್
ಕಿಲ್ಲೂರು, ಎ.6: ಕಿಲ್ಲೂರು ಮಾಸಿಕ ಸ್ವಲಾತ್ ಮಜ್ಲಿಸು ವಸೀಲ ತುಲ್ಲಾಹ್ ಕಾರ್ಯಕ್ರಮ ಎ.7ರಂದು ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸೈಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸೈಯದ್ ಸಿ.ಟಿ.ಎಂ.ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಉದ್ಘಾಟಿಸುವರು. ದೇವಲ್ಶೋರ ಅಬ್ದುಸ್ಸಲಾಂ ಮುಸ್ಲಿಯಾರ್ ಮುಖ್ಯ ಭಾಷಣಗೈಯುವರು ಎಂದು ಪ್ರಕಟನೆ ತಿಳಿಸಿದೆ.
ನಾಳೆಯಿಂದ ಬುರ್ದಾ ಮಜ್ಲಿಸ್
ಮಂಗಳೂರು, ಎ. 6: ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ಎಪ್ರಿಲ್ 8 ಮತು 9ರಂದು ರಾತ್ರಿ ಇಶಾ ನಮಾಝಿನ ಬಳಿಕ ತುಂಬೆಯ ಬಿ.ಎ.ಮೈದಾನದ ಮರ್ಹೂಂ ಬದ್ರುದ್ದೀನ್ ಮದನಿ ವೇದಿಕೆಯಲ್ಲಿ ನಡೆಯಲಿದೆ.
8ರಂದು ಮುಹಮ್ಮದ್ ಸಅದಿ ವಳವೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ರಿಗೆ ಸನ್ಮಾನ ಬಳಿಕ ನೌಫಲ್ ಸಖಾಫಿ ಕಳಸ ಅವರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ,9ರಂದು ನಡೆಯುವ ಬುರ್ದಾ ಮಜ್ಲಿಸ್ನ ನೇತೃತ್ವವನ್ನು ಅನ್ವರಲಿ ಸಖಾಫಿ ಶಿರಿಯ ವಹಿಸಲಿದ್ದಾರೆ. ಸೈಯದ್ ಮುಶ್ತ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಪದಾಧಿಕಾರಿಗಳ ಆಯ್ಕೆ
ಫರಂಗಿಪೇಟೆ, ಎ.6: ಇಲ್ಲಿನ ನಂ.1 ರಿಕ್ಷಾ ಪಾರ್ಕ್ನ ವಾರ್ಷಿಕ ಮಹಾಸಭೆ ಫರಂಗಿಪೇಟೆಯ ಹೊಳೆಬದಿಯಲ್ಲಿ ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ಸುಲೈಮಾನ್ ಕುಂಜತ್ಕಲ, ಪ್ರಧಾನ ಕಾರ್ಯದರ್ಶಿಯಾಗಿ ನಝಿರ್ ಕರ್ಮಾರ್, ಉಪಾಧ್ಯಕ್ಷರಾಗಿ ಕಿಶೋರ್, ಖಜಾಂಜಿಯಾಗಿ ಜಾಫರ್ರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ಫಾರೂಕ್, ಖಾಲಿದ್, ಎಮ್. ಸುಲೈಮಾನ್, ರಶೀದ್, ಮಲ್ಲಿ ಮೋನು, ನೀಲನ್, ಇನ್ಸಾದ್, ಮತ್ತು ಗೌರವಾಧ್ಯಕ್ಷರಾಗಿ ಜಮಾಲುದ್ದೀನ್ರನ್ನು ಆಯ್ಕೆ ಮಾಡಲಾಯಿತು. ಏಳು ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಲೈಮಾನ್ ಎಂ.ರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ನಾಳೆ ಭರತನಾಟ್ಯ ರಂಗಪ್ರವೇಶ
ಮಂಗಳೂರು, ಎ.6: ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ನ ಕಲಾವಿದೆ ರಾಶಿ ಶೆಟ್ಟಿಯವರ ಭರತನಾಟ್ಯ ರಂಗಪ್ರವೇಶವು ಎ.8ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ನಿರ್ದೇಶಕ ವಿದ್ವಾನ್ ಯು.ಕೆ. ಪ್ರವೀಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಡಿಯೂರು ಗುರುದೇವದತ್ತ ಸಂಸ್ಥಾನಮ್ನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದವರು ತಿಳಿಸಿದರು. ಕಲಾವಿದೆ ರಾಶಿ ಶೆಟ್ಟಿ, ತಂದೆ ರಾಜೇಶ್ ಶೆಟ್ಟಿ, ತಾಯಿ ರೂಪವಾಣಿ ಆರ್.ಶೆಟ್ಟಿ, ಸಂಗೀತ ಗುರು ಉಷಾ ಪ್ರವೀಣ್ ಉಪಸ್ಥಿತರಿದ್ದರು.
ಕುಂಬಳೆ: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಕಾಸರಗೋಡು, ಎ.6: ಕುಂಬಳೆಯ ಕಳತ್ತೂರಿನಲ್ಲಿ ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಳತ್ತೂರು ಸಜಂಕಿಲ ನಿವಾಸಿ ಅಶೋಕ್(26) ಮೃತಪಟ್ಟ ಯುವಕ. ಇವರು ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಮನೆಯಿಂದ ತೆರಳಿದ್ದ ಅಶೋಕ್ ಬಳಿಕ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ನೀಡದೆ ದಲಿತ ಕುಂದು ಕೊರತೆ ಸಭೆ ಆರೋಪ
ಮಂಗಳೂರು, ಎ.6: ದಲಿತ ಕುಂದು ಕೊರತೆ ಸಭೆ ಹಾಗೂ 125ನೆ ಡಾ. ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಜಿಲ್ಲಾ ವಿವಿಧ ಸಂಘಟನೆ ಹಾಗೂ ನಾಯಕರಿಗೆ ಮಾಹಿತಿ ನೀಡದೆ ಸಭೆ ನಡೆಸಿ ಅವಮಾನಿಸಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಮುಖಂಡರು ಹಾಗೂ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ದ.ಕ. ಜಿಲ್ಲೆಯಲ್ಲಿ ಡಾ. ಅಂಬೇಡ್ಕರ್ರವರ 125ನೆ ಜನ್ಮ ದಿನಾಚರಣೆಯ ರೂಪುರೇಷೆ ಮತ್ತು ಸಲಹೆ ಸೂಚನೆಗಳನ್ನು ಪಡೆಯದೆ ಕೇವಲ ನಾಲ್ಕೈದು ಸದಸ್ಯರನ್ನು ಸೇರಿಸಿ ಜಿಲ್ಲಾ ಕುಂದು ಕೊರತೆ ಸಭೆ ನಡೆಸಿ ದಲಿತರ ಸಮಸ್ಯೆ ಹಾಗೂ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದನ್ನು ಮುಚ್ಚಿಹಾಕುವ ಹುನ್ನಾರ ಇದಾಗಿದೆ. ಕಾರ್ಯಕ್ರಮ ಬಗ್ಗೆ ತುರ್ತು ಸಭೆಯನ್ನು ಎಲ್ಲಾ ಮುಖಂಡರು ಹಾಗೂ ಸಂಘಟನೆಗಳನ್ನು ಸೇರಿಸಿ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿರುವ ದಲಿತ ಸಂಘಟನೆಗಳ ಒಕ್ಕೂಟವು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.
ಇಂದು ಮಾಸಿಕ ದ್ಸಿಕ್ರ್ ಹಲ್ಕಾ
ಉಳ್ಳಾಲ, ಎ.6: ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನಲ್ಲಿ ಮಾಸಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮವು ಎ.7ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ನೇತೃತ್ವ ವಹಿಸುವರು ಎಂದು ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೌಡಿಚ್ಚಾರ್: ಸುತ್ತಿಗೆಯಿಂದ ಹಲ್ಲೆ - ಆರೋಪ
ಪುತ್ತೂರು, ಎ.6: ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದೇರ್ಲ ನಿವಾಸಿ ಹೊನ್ನಪ್ಪ(58ವ) ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ‘ನಾನು ಎ.4ರಂದು ಸಂಜೆ ಕೌಡಿಚ್ಚಾರು ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಪರಿಚಯಸ್ಥ ವ್ಯಕ್ತಿಯೋರ್ವರು ನನಗೆ ಸುತ್ತಿಗೆಯಿಂದ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅವರ ಹೆಸರು ಗೊತ್ತಿಲ್ಲವಾದರೂ ಅವರ ಪರಿಚಯವಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಹಲ್ಲೆಯಿಂದಾಗಿ ಹೊನ್ನಪ್ಪರ ತಲೆಗೆ ಗಾಯವಾಗಿ ದೆ. ಸಂಪ್ಯ ಪೊಲೀಸರು ಗಾಯಾಳುವಿನಿಂದ ಮಾಹಿತಿ ಪಡೆದಿದ್ದಾರೆ.
ವಿವಾಹಿತ ಮಹಿಳೆ ನಾಪತ್ತೆ: ಪತಿಯಿಂದ ದೂರು
ಪುತ್ತೂರು, ಎ.6: ಮೂಲತಃ ಗದಗ ಜಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಿಬ್ಬಿ ನಿವಾಸಿಯಾಗಿದ್ದು ಪ್ರಸ್ತುತ ಕೋಡಿಂಬಾಡಿ ವಿವೇಕನಗರದಲ್ಲಿ ವಾಸ್ತವ್ಯವಿದ್ದ ಮಹಿಳೆಯೋರ್ವರು ನಾಪತ್ತೆಯಾಗಿರುವುದಾಗಿ ಆಕೆಯ ಗಂಡ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಮೈಲರಪ್ಪ ಗುತ್ತೆಮ್ಮನವರ್ ಎಂಬವರ ಪತ್ನಿ ಸರಸ್ವತಿ (28) ನಾಪತ್ತೆಯಾದವರು. ಮಾ.20ರಂದು ಸರಸ್ವತಿಯವರು ಊರಿಗೆ ಹೋಗುವುದೆಂದು ಹೇಳಿ ಹೋಗಿದ್ದರು. ಆದರೆ ಊರಿಗೆ ಫೋನ್ ಮಾಡಿದ ವೇಳೆ ಆಕೆ ಊರಿಗೆ ತಲುಪಲಿಲ್ಲ ಎಂಬುದು ತಿಳಿದುಬಂದಿತ್ತು. ಈ ನಡುವೆ ನಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗದಗ ಜಿಲ್ಲೆಯ ಮಾಂತೇಶ್ ಎಂಬವರು ಕೂಡಾ ನಾಪತ್ತೆಯಾಗಿದ್ದಾರೆ ಎಂದು ಸರಸ್ವತಿಯ ಗಂಡ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಸರಸ್ವತಿ ಸುಮಾರು 5.5 ಅಡಿ ಉದ್ದವಿದ್ದು, ಬೂದಿ ಮೈಬಣ್ಣ, ಕೆಂಪು ಬಣ್ಣದ ಸೀರೆ ಮತ್ತು ರವಿಕೆ ತೊಟ್ಟಿದ್ದು, ಈಕೆಯ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಯಲು ರಂಗಮಂದಿರ ಸಾರ್ವಜನಿಕರ ಉಪಯೋಗಕ್ಕೆ
ಉಡುಪಿ, ಎ.6: ಉಡುಪಿ ನಗರಸಭಾ ವ್ಯಾಪ್ತಿಯ ವಳಕಾಡು ವಾರ್ಡಿನ ಬೀಡಿನಗುಡ್ಡೆಯಲ್ಲಿರುವ ‘ಮಹಾತ್ಮ ಗಾಂಧಿ ಬಯಲು ರಂಗಮಂದಿರ’ ಕ್ರೀಡೆ ಮತ್ತು ಸಾಂಸ್ಕೃ ತಿಕ ಚಟುವಟಿಕೆ, ಮದುವೆ ಹಾಗೂ ಇತರ ಸಮಾ ರಂಭಗಳನ್ನು ನಡೆಸುವ ಸಲುವಾಗಿ ಅತ್ಯಾಧುನಿಕವಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಉಪ ಯೋಗಿಸಲು ಬಾಡಿಗೆ ನಿಗದಿ ಮಾಡಲಾಗಿದೆ. ಮಾಹಿ ತಿಗಾಗಿ ನಗರಸಭಾ ಪೌರಾಯುಕ್ತರನ್ನು ಅಥವಾ ದೂ. ಸಂ :0820-2520306ನ್ನು ಸಂಪರ್ಕಿಸುವಂತೆ ನಗರಸಭಾ ಪ್ರಕಟನೆ ತಿಳಿಸಿದೆ.
ಇಂದಿನಿಂದ ದೈವಸ್ಥಾನದ ವಾರ್ಷಿಕ ನೇಮೋತ್ಸವ
ಮಂಗಳೂರು, ಎ. 6: ಬೋಳೂರು ಕುಚ್ಚಿಕಾಡ್ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಪುನರ್ ನಿರ್ಮಾಣಗೊಂಡ ಸಂಕಲೆಗುಳಿಗ, ರಾಹುಗುಳಿಗ ಮತ್ತು ಪರಿವಾರ ದೈವಗಳ ಪುನರ್ಪ್ರತಿಷ್ಠಾಪನೆ ಹಾಗೂ ವಾರ್ಷಿಕ ನೇಮೋತ್ಸವವು ಎ.7ರಿಂದ 12ರವರೆಗೆ ನಡೆಯಲಿದೆ.
ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ಏರಿಕೆಗೆ ಆಗ್ರಹ
ಉಡುಪಿ, ಎ.6: 2016-17ನೆ ಸಾಲಿನ ಗ್ರಾಹಕ ಬೆಲೆ ಏರಿಕೆ ಸೂಚ್ಯಂಕ 332 ಪಾಯಿಂಟ್ ನಿಂದ 425ಕ್ಕೆ ಏರಿಕೆಯಾದ ತುಟ್ಟಿಭತ್ತೆ ರೂ. 9.96 ಹಾಗೂ ಕಳೆದ ಸಾಲಿನ ಬೆಲೆ ಏರಿಕೆ ಪಾಯಿಂಟ್ 425ಕ್ಕೆ ಏರಿಕೆಯಾದ ತುಟ್ಟಿ ಭತ್ತೆ ರೂ. 12.75ನ್ನು ಈಗ ಸಿಗುತ್ತಿರುವ ಸಾವಿರ ಬೀಡಿಗೆ ಮಜೂರಿ 150.28ರೂ.ಗೆ ಸೇರಿಸಿ ಪ್ರತಿ ಸಾವಿರ ಬೀಡಿಗೆ 173.59ನ್ನು ಎಲ್ಲಾ ಬೀಡಿ ಮಾಲಕರು ಎ.1ರಿಂದಲೇ ಎಲ್ಲಾ ಬೀಡಿ ಕಾರ್ಮಿಕರಿಗೂ ಪಾವತಿಸುವಂತೆ ಎಐಟಿಯುಸಿ ಸಂಯೋಜಿತವಾದ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ನ 71ನೆ ವಾರ್ಷಿಕ ಮಹಾಸಭೆ ಒತ್ತಾಯಿಸಿದೆ.
ಕಳೆದ ಸಾಲಿನಲ್ಲಿ (2015) ತುಟ್ಟಿಭತ್ತೆಯನ್ನು ಕಾರ್ಮಿಕರಿಗೆ ಪಾವತಿಸದಂತೆ ರಾಜ್ಯ ಸರಕಾರವೇ ರಿಯಾಯಿತಿ ನೀಡಿರುವ ಕ್ರಮವನ್ನು ಮಹಾ ಸಭೆ ತೀವ್ರವಾಗಿ ಖಂಡಿಸಿದ್ದು, ಕಳೆದ ವರ್ಷದ ಬಾಕಿ ಮೊತ್ತ 12.75 ರೂ. ಸೇರಿಸಿ ಮಜೂರಿ ಪಾವತಿಸುವಂತೆ ಸಂಘದ ಪ್ರಧಾನ ಕಾರ್ಯ ದರ್ಶಿ ಶಶಿಕಲಾ ಗಿರೀಶ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.