ಆಟ ರಂಗಾಟ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
ಬಂಟ್ವಾಳ, ಎ.6: ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಪ್ರೆಸ್ ಕ್ಲಬ್ಬಂಟ್ವಾಳ ಹಾಗೂ ಪತ್ರಕರ್ತರ ರಜತ ವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯಲಿರುವ ಆಟ ರಂಗಾಟ ಮಕ್ಕಳ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ದೊರೆತಿದೆ. ಬಿ.ಸಿ.ರೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ಕರಾಟೆಯ ಅಂತಾ ರಾಷ್ಟ್ರೀಯ ಮಟ್ಟದ ಬಾಲಪ್ರತಿಭೆ ಸಹನಾ ಎಂ.ಶೆಟ್ಟಿ ‘ಗುಳ್ಳೆ’ ಊದುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಟರಂಗಾಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಬಂಟ್ವಾಳ ಕಸಾಪದ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ಮಾತನಾಡಿದರು. ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಮಾತನಾಡಿದರು. ವೇದಿಕೆಯಲ್ಲಿ ಕಲಾವಿದ ಮಂಜುವಿಟ್ಲ, ಬಂಟ್ವಾಳ ಪತ್ರಕರ್ತರ ಸಂಘದ ರಜತ ವರ್ಷಾಚರಣಾ ಸಮಿತಿಯ ಸಂಚಾಲಕ ವೆಂಕಟೇಶ್ ಬಂಟ್ವಾಳ್, ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನದೇವ್ ಪೂಂಜಾಲಕಟ್ಟೆ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಯಾದವ ಅಗ್ರಬೈಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸುಕುಮಾರ್ ಬಂಟ್ವಾಳ್, ಗೋಪಾಲ ಅಂಚನ್, ಹರ್ಷಿತಾ ಸಹಕರಿಸಿದರು. ಬಳಿಕ ಮಕ್ಕಳಿಗೆ ವಿವಿಧ ರಂಗಾಟಗಳು, ಕಥೆ, ಅಭಿನಯ, ಏಕಾಗ್ರತೆಯ ಆಟ ಹಾಗೂ ಪರಿಸರ ಗೀತೆಗಳ ಅಭ್ಯಾಸಗಳು ವಿವಿಧ ಚಟುವಟಿಕೆಗಳು ನಡೆದವು.