ಡಾ.ಬಾಬು ಜಗಜೀವನರಾಂ ಅವರ 109ನೆ ಜನ್ಮ ದಿನಾಚರಣೆ
ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಚಾರಿತ್ರಿಕ ಪ್ರಮಾದ: ಡಾ. ರಾಜೇಂದ್ರ
ಪುತ್ತೂರು, ಎ.6: ದಲಿತ ಸಮಾಜದ ಮೇಲೆ ನಡೆದ ದೌರ್ಜನ್ಯ, ದಬ್ಬಾಳಿಕೆ ಎಂಬುದು ಒಂದು ಚಾರಿತ್ರಿಕ ಪ್ರಮಾದ. ಈ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಇಂದಿನ ಸಮಾಜಕ್ಕಿದೆ. ಧ್ವನಿರಹಿತರಿಗೆ ಸರಕಾರದ ಯೋಜನೆಗಳು ಸಿಗುವಂತಾಗಬೇಕು. ಹಾಗಾಗಿ ಎಲ್ಲ ರೀತಿಯ ಸವಲತ್ತುಗಳು ಆ ಸಮಾಜಕ್ಕೆ ಸಿಗುವ ನಿಟ್ಟಿನಲ್ಲಿ ಸರ್ವರೂ ಕೈ ಜೋಡಿಸಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಪುತ್ತೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರಿನ ವಿವೇಕಾನಂದ ಬಿ.ಎಡ್. ಕಾಲೇಜಿನ ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ ನೀಡಿದರು. ಪುತ್ತೂರು ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಮಾತನಾಡಿದರು.
ಕೊಂಬೆಟ್ಟು ಆಶ್ರಮದ ಸಿಬ್ಬಂದಿ ಕೃಷ್ಣ ಬಿ. ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ಭಟ್ ಕೆ. ವಂದಿಸಿದರು. ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು.