ಮೂಲ ಬದ್ಧತೆ ಉಳಿಸಿಕೊಂಡರೆ ಜೀರ್ಣೋದ್ಧಾರಕ್ಕೆ ಅರ್ಥ: ಮಾಣಿಲ ಶ್ರೀ
ಸುಳ್ಯ : ಆಚಾರ-ವಿಚಾರ ಮೂಲ ಬದ್ದತೆಗಳನ್ನು ಉಳಿಸಿಕೊಂಡು ಭಗವಂತನನ್ನು ಆರಾಧಿಸಿದರೆ, ದೇವಳದ ಜೀರ್ಣೋದ್ಧಾರ ಅರ್ಥಪೂರ್ಣವೆನಿಸುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಳದ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ, ನೂತನ ಧ್ವಜಸ್ತಂಭ ಪ್ರತಿಷ್ಠೆ, ಜಾತ್ರೆಯ ಪ್ರಯುಕ್ತ ನಡೆದ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಜಗತ್ತಿನಲ್ಲಿ ಶ್ರೇಷ್ಠ ಪರಂಪರೆ, ಸಂಸ್ಸತಿಯನ್ನು ಪಸರಿಸಿದ ಸನಾತನ ಧರ್ಮಕ್ಕೆ ತನ್ನದೇ ಆದ ಮಹತ್ವ ಇದೆ. ನಮ್ಮ ನೆಲದ ನಂಬಿಕೆ, ಆಚಾರ, ವಿಚಾರಗಳನ್ನು ಮೂಡನಂಬಿಕೆ ಎಂದು ಪರಿಭಾವಿಸುವ ಕೆಲಸ ಆಗುತ್ತಿದೆ. ಆದರೆ ಅದು ಸಮಾಜಕ್ಕೆ ಪೂರಕವಾದ ಮೂಲನಂಬಿಕೆಯೇ ಹೊರತು ಮೂಢನಂಬಿಕೆ ಅಲ್ಲ ಎಂದು ಅವರು ಹೇಳಿದರು.
ಧಾರ್ಮಿಕ ಉಪನ್ಯಾಸಗೈದ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್, ಜೀವನದಲ್ಲಿ ಪರಿಪಾಲನೆಗೆ ಯೋಗ್ಯವಾದದು ಧರ್ಮ. ಅದರಲ್ಲೂ ಸಂಸ್ಸತಿಯ ಸಾರವುಳ್ಳ, ಹಿಂದೂ ಧರ್ಮದ ವಿಚಾರಧಾರೆಗಳು ಸಶಕ್ತ ಸಮಾಜ ನಿರ್ಮಾಣಕ್ಕೆ ಪೂರಕ ಎಂದರು.
ಸಭಾಧ್ಯಕ್ಷತೆ ವಹಿಸಿದ ಪೆರುವಾಜೆ ಶ್ರೀಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಕೆಎಂಬಿ, ಜೀರ್ಣೋದ್ಧಾರ ಕಾರ್ಯ ಆರಂಭವಾದ ಒಂದು ವರ್ಷದಲ್ಲಿದೊಳಗೆ ಬ್ರಹ್ಮಕಲಶ ಮಾಡುವ ಭಾಗ್ಯ ದೊರೆಯಲು ಜಲದುರ್ಗಾದೇವಿಯ ಶಕ್ತಿಯೇ ಕಾರಣ. ಕರಸೇವೆಯಿಂದ ತೊಡಗಿ ಬೇರೆ-ಬೇರೆ ರೀತಿಯಲ್ಲಿ ಸಾವಿರಾರು ಭಕ್ತರು ದೇವಳದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಭಕ್ತ ಸಮುದಾಯ ಸಂಕಲ್ಪವೇ ಸುಂದರ ದೇವಳ ನಿರ್ಮಾಣಕ್ಕೆ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಳದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಸಂಚಾಲಕ ಸೀತಾರಾಮ ರೈ ಸವಣೂರು, ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ನಾಗೇಶ ತಂತ್ರಿ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಲ, ದೈವಜ್ಞರಾದ ಗಣೇಶ್ ಭಟ್ ಮುಳಿಯ, ಸ್ವಾಮಿನಾಥನ್, ಮೂರ್ತಿಪ ರಾಧಾಕೃಷ್ಣ ಪುತ್ತೂರಾಯ ಆಲಡ್ಕ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಕೋಡಿಬೈಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಪೆರುವಾಜೆ, ಜತೆ ಕಾರ್ಯದರ್ಶಿ ರಾಮಕೃಷ್ಣ ರಾವ್ ಪೆರುವಾಜೆ, ಕೋಶಾಧಿಕಾರಿ ಪಿ.ಮಂಜಪ್ಪ ರೈ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ರೈ ವೈಪಾಲ, ಪಿ.ವೆಂಕಟಕೃಷ್ಣ ರಾವ್, ದಾಮೋದರ ನಾಯ್ಕ, ಭಾಮಿನಿ ಜತ್ತಪ್ಪ ಗೌಡ, ಸುಜಾತ ಪದ್ಮನಾಭ ಶೆಟ್ಟಿ, ಭಾಮಿನಿ ಜತ್ತಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಎನ್ ಮನ್ಮಥ ಸ್ವಾಗತಿಸಿ, ಸ್ಮರಣ ಸಂಚಿಕೆ ಸಮಿತಿ ಸಹಸಂಚಾಲಕ ರಜನೀಶ ಪಿ ಸವಣೂರು ವಂದಿಸಿದರು. ಸ್ಮರಣ ಸಂಚಿಕೆ ಸಮಿತಿ ಸಂಪಾದಕ ರಾಮಕೃಷ್ಣ ಭಟ್ ಚೂಂತಾರು ನಿರೂಪಿಸಿದರು.