‘ಸಾವಯವ ಉತ್ಪನ್ನಗಳ ಮೂಲಕ ಆರೋಗ್ಯ ವೃದ್ಧ್ದಿ’

ಶಿಕಾರಿಪುರ, ಎ.7: ಆಧುನಿಕ ಜೀವನ ಶೈಲಿಯಿಂದಾಗಿ ಹೊಸ ಹೊಸ ಕಾಯಿಲೆಗೆ ತುತ್ತಾಗುತ್ತಿದ್ದು, ಸಾವಯವ ಕೃಷಿ ಪದ್ದತಿಯತ್ತ ರೈತ ಸಮುದಾಯವನ್ನು ಹೆಚ್ಚು ಹೆಚ್ಚು ಆಕರ್ಷಿಸಿ ಸಾವಯವ ಉತ್ವನ್ನಗಳನ್ನು ಹೆಚ್ಚು ಬಳಸುವ ಮೂಲಕ ಆರೋಗ್ಯವನ್ನು ವೃದ್ಧ್ದಿಸಿಕೊಳ್ಳುವಂತೆ ಭದ್ರ ಕಾಡಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ನಗರದ ಮಹಾದೇವಪ್ಪ ಕರೆ ನೀಡಿದರು.
ಗುರುವಾರ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಪಂ, ತಾಲೂಕು ಆಡಳಿತ, ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ಐಪಿವಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಸಾಂಕ್ರಾಮಿಕ ರೋಗದಿಂದ ಗ್ರಾಮಗಳು ಸಂಪೂರ್ಣ ನಾಶವಾಗುವ ಸ್ಥಿತಿ ತಲುಪುತ್ತಿದ್ದು, ಆಧುನಿಕ ಹಾಗೂ ವೈಜ್ಞಾನಿಕ ಇಂದಿನ ದಿನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಹೊಸ ಅವಿಷ್ಕಾರದಿಂದ ಸರ್ವ ರೋಗಗಳಿಗೂ ಚಿಕಿತ್ಸೆ ಲಭ್ಯವಿದೆ ಎಂದ ಅವರು, ಪೋಲಿಯೊ ಮುಕ್ತ ದೇಶದ ಸಂಕಲ್ಪ ತೊಟ್ಟಿರುವ ಸರಕಾರ ಇದೀಗ ಪೋಲಿಯೊ ಹನಿ ಬದಲಿಗೆ ಹೆಚ್ಚು ಶಕ್ತಿಯುತವಾದ ಇನ್ ಆಕ್ಟೀವ್ ಪೋಲಿಯೊ ಇಂಜೆಕ್ಷನ್ ಲಸಿಕೆಯನ್ನು ಕಂಡು ಹಿಡಿದು ಬಳಸುತ್ತಿದೆ ಎಂದರು.
ವಿಷಕಾರಿ ಹಾವುಗಳು ತಂಬಾಕು ಬೆಳೆಯುವ ಹೊಲದಲ್ಲಿ ಸಾವು ನಿಶ್ಚಿತ ಎಂದು ಸುಳಿಯುವುದಿಲ್ಲ, ಮನುಷ್ಯ ಮಾತ್ರ ತಂಬಾಕು ಸೇವನೆ ಪ್ರಾಣಕ್ಕೆ ಹಾನಿಕರ ಎಂಬ ಅರಿವಿದ್ದರೂ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಅಧ್ಯಕ್ಷತೆಯನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದುಷ್ಯಂತ್ ವಹಿಸಿದ್ದರು. ಆಸ್ಪತ್ರೆಯ ಫಿಜಿಶಿಯನ್ ಡಾ. ಈಶ್ವರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ನಾಗಲೀಕರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಕೇತಿಕವಾಗಿ ಇನ್ಆ್ಯಕ್ಟಿವ್ ಪೋಲಿಯೊ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಅಂಗಡಿ ಜಗದೀಶ, ವಸಂತ ಗೌಡ, ಮುಖ್ಯಾಧಿಕಾರಿ ಬಾಲಾಜಿ ರಾವ್, ತಜ್ಞ ವೈದ್ಯ ಡಾ. ಶ್ರೀನಿವಾಸ್, ಡಾ. ಪ್ರಮೋದ್, ಡಾ. ಲಕ್ಷ್ಮೀ, ಡಾ. ಸುರೇಶ್, ಡಾ. ವಿಜಯ ಸಂಗಮದೇವ, ಸಿಡಿಪಿಒ ಲಿಂಗಾ ನಾಯ್ಕ, ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುಜಾತಾ ಪ್ರಾರ್ಥಿಸಿ, ಶಾರದಮ್ಮ ಸ್ವಾಗತಿಸಿ, ಸುರೇಶ್ ನಿರೂಪಿಸಿ, ಸ್ನೇಹಲತಾ ವಂದಿಸಿದರು. ‘ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಭವಿಷ್ಯ ರೂಪಿಸಿಕೊಳ್ಳಿ’ ಕಾರವಾರ, ಎ.7: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾಗಲು ಬಯಸದೆ ಉತ್ತಮ ರ್ಯಾಂಕ್ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕ ಸತೀಶ್ ಸೈಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಈ ಹಂತದಲ್ಲಿ ನಾವು ಏನು ಸಾಧಿಸಲು ಸಾಧ್ಯವಿರುತ್ತದೋ ಅದೆಲ್ಲವನ್ನು ಸಾಧಿಸಿ ತೋರಿಸಬೇಕು. ಕಾಲೇಜುಗಳಲ್ಲಿ ಅಧ್ಯಾಪಕರೊಂದಿಗೆ ಸದಾ ಸಂಪರ್ಕದಲ್ಲಿದ್ದು, ಅರ್ಥವಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.ಕಾಲೇಜು ಯಾವಾಗಲೂ ವಿದ್ಯಾ ಮಂದಿರವಾಗಿರಬೇಕು. ಇಲ್ಲಿ ನಮ್ಮ ವೈಯಕ್ತಿಕ ವಿಚಾರವಾಗಲಿ ಅಥವಾ ರಾಜಕೀಯವಾಗಲಿ ನಡೆಸಬಾರದು. ಇರುವಷ್ಟು ದಿನ ನಾವೆಲ್ಲರೂ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಕೈಗಾ 3 ಮತ್ತು 4ನೆ ಉತ್ಪಾದನಾ ಕೇಂದ್ರದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಬಜಾಜ ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಬೇಕು. ಗುರಿಗೆ ತಕ್ಕ ಅಭ್ಯಾಸ ಮಾಡಿಕೊಂಡು ಹೋದಲ್ಲಿ ಯಶಸ್ಸು ಲಭಿಸುತ್ತದೆ. ನಾವು ನಮ್ಮ ಮುಂದಿನ ಜೀವನದ ಬಗ್ಗೆ ಹಂಬಲಿಸಿ ಸರಿಯಾದ ಮಾರ್ಗದಲ್ಲಿ ನಡೆದಲ್ಲಿ ಇದು ಅಡ್ಡಿಯಾಗಲಾರದು ಎಂದರು.
ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ಇನ್ನಿತರ ಚಟುವಟಿಕೆಗಳಿಗೆ ನಡೆದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಶಾಸಕ ಸತೀಶ್ ಸೈಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಿ.ಎಂ. ಹೆಗಡೆ, ವಿದ್ಯಾರ್ಥಿ ಸಲಹೆಗಾರ ಸಂತೋಷ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.







