ಕ್ಷುಲ್ಲಕ ಕಾರಣಕ್ಕೆ ಘರ್ಷಣೆ: ಐವರು ಆಸ್ಪತ್ರೆಗೆ ದಾಖಲು
ಕಾಸರಗೋಡು, ಎ.7: ದೈವ ನೇಮೋತ್ಸವದ ವೇಳೆ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾದ ಘಟನೆ ಉದುಮದ ಕಪ್ಪಣಕ್ಕಾಲ್ನಲ್ಲಿ ನಡೆದಿದೆ. ಈ ವೇಳೆ ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘರ್ಷಣೆಯಲ್ಲಿ ಸಿಪಿಎಂ ಕಾರ್ಯಕರ್ತರಾದ ಮಹೇಶ್, ಅಭಿಲಾಷ್ ಮತ್ತು ಬಿಜೆಪಿ ಕಾರ್ಯಕರ್ತರಾದ ಚೆಮ್ನಾಡಿನ ಅನಿಲ್ ಕುಮಾರ್ (22), ಕೊಕ್ಕಾಲ್ನ ರಂಜಿತ್ (23) ಮತ್ತು ಅನೂಪ್ (19) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ ಮಹೇಶ್ ನನ್ನು ಮಂಗಳೂರಿನ ಆಸ್ಪತ್ರೆಗೆ ಮತ್ತು ಅಭಿಲಾಷ್ ನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಪಿಎಂ ಕಾರ್ಯಕರ್ತರಾದ ಪ್ರಮೋದ್ ಹಾಗೂ ವಿನೋದ್
ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಪೊಲೀಸರೂ ಗಾಯಗೊಂಡಿದ್ದಾರೆ. ಕಪ್ಪಣಕ್ಕಾಲ್ ನಲ್ಲಿ ವಯನಾಟು ಕುಲವನ್ ದೈವದ ನೇಮೋತ್ಸವ ನಡೆಯುತ್ತಿದ್ದು, ಇಬ್ಬರು ಯುವಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿದೆ. ಇದನ್ನು ಕಂಡು ಕೆಲವು ಸ್ವಯಂ ಸೇವಕರು ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಲೆತ್ನಿಸಿದ್ದು, ಬಳಿಕ ವಿಷಯ ರಾಜಕೀಯ ಸ್ವರೂಪ ಪಡೆದು ಘರ್ಷಣೆಗೆ ಕಾರಣವಾಗಿದೆ. ವಿಷಯ ತಿಳಿದು ಬೇಕಲ ಎಸೈ ಆದಂಖಾನ್ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಆದರೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಅಶ್ರುವಾಯು ಬಳಸಿ ಉದ್ರಿಕ್ತರನ್ನು ಚದುರಿಸಿದರು.