ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲು ಬಿಜೆಪಿ ಹೊಸ ದಾಳ!

ನವದೆಹಲಿ : ಪಕ್ಷದ ಹಲವು ಹಿರಿಯ ನಾಯಕರನ್ನು ಮೂಲೆಗುಂಪು ಮಾಡುವ ತನ್ನ ಪ್ರಯತ್ನವಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ರಾಜ್ಯ ಘಟಕಗಳ ಕೋರ್ ಸಮಿತಿಗಳಲ್ಲಿ 13 ಮಂದಿಗಿಂತ ಹೆಚ್ಚು ಸದಸ್ಯರಿರಬಾರದೆಂಬ ನಿರ್ಧಾರ ಕೈಗೊಂಡಿದ್ದಾರೆ. ಈ ಕ್ರಮದಿಂದ ಬಿಹಾರ, ಉತರ ಪ್ರದೇಶಗಳಿಗೆ ಸೇರಿದ ಕೇಂದ್ರ ಸಚಿವರು,ಉತ್ತರಾಖಂಡ, ಕರ್ನಾಟಕ ಹಾಗೂ ಮಧ್ಯ ಪ್ರದೇಶದ ಮಾಜಿ ಬಿಜೆಪಿ ಮುಖ್ಯಮಂತ್ರಿಗಳಿಗೆ ಪಕ್ಷದ ಆಗುಹೋಗುಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಮಿತಿಗಳಲ್ಲಿ ಯಾವುದೇ ಅಧಿಕಾರವಿರುವುದಿಲ್ಲ.ಈ ಬಗೆಗಿನ ಆದೇಶವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿರುವ ರಾಮ್ ಲಾಲ್ ಸದ್ಯದಲ್ಲಿಯೇ ನೀಡಲಿದ್ದಾರೆ.
ಈ ಹೊಸ ನಿಯಮದ ಪ್ರಕಾರ ಪ್ರತಿಯೊಂದು ರಾಜ್ಯದ ಕೋರ್ ಸಮಿತಿಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಮಾಜಿ ಮುಖ್ಯಮಂತ್ರಿಗಳು ಸದಸ್ಯರಾಗುವ ಹಾಗಿಲ್ಲ. ಉತ್ತರಾಖಂಡದಲ್ಲಿ ಮೂರು ಮಾಜಿ ಬಿಜೆಪಿ ಸಿಎಂಗಳಿದ್ದಾರೆ- ಬಿಸಿ ಖಂಡೂರಿ, ಬಿಎಸ್ ಕೊಶ್ಯಾರಿ ಹಾಗೂ ಆರ್ ಪಿ ನಿಶಾಂಕ್ ಹಾಗೂ ಮುಂದೆ ಮಾಜಿಯಾಗಬಹುದಾದ ವಿಜಯ್ ಬಹುಗುಣ, ಕರ್ನಾಟಕದಲ್ಲಿಯಡ್ಡಿಯೂರಪ್ಪ, ಸದಾನಂದ ಗೌಡ,ಜಗದೀಶ್ ಶೆಟ್ಟರ್ ಹಾಗೂ ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳದ್ದರೆ,ಮಧ್ಯಪ್ರದೇಶದಲ್ಲಿ ಕೈಲಾಶ್ ಜೋಷಿ, ಸುಂದರ್ ಲಾಲ್ ಪಟ್ವ,ಉಮಾ ಭಾರತಿ ಹಾಗೂ ಗೌರ್ ಇದ್ದಾರೆ.
ಅಂತೆಯೇ ಕೇಂದ್ರ ಸಚಿವರಲ್ಲಿ ಮೂವರಿಗಿಂತ ಹೆಚ್ಚಿನ ಮಂದಿ ತಮ್ಮ ಆಯಾಯ ರಾಜ್ಯದ ಕೋರ್ ಸಮಿತಿಗಳಲ್ಲಿರಲು ಸಾಧ್ಯವಿಲ್ಲ. ಮೇಲಾಗಿ ಪಕ್ಷದ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳಲ್ಲಿ 2-3ಮಂದಿಗಿಂತ ಹೆಚ್ಚಿನ ಮಂದಿ ಕೋರ್ ಸಮಿತಿಗಳಲ್ಲಿರಲು ಸಾಧ್ಯವಿಲ್ಲವೆಂಬ ನಿಯಮವನ್ನೂ ಅಮಿತ್ ಶಾ ಜಾರಿಗೆ ತಂದಿದ್ದಾರೆ.







