ಮೂಡುಬಿದರೆ: ಪ್ರೊ.ಕೆ.ಚಿನ್ನಪ್ಪ ಗೌಡ ಅಭಿನಂದನಾ ಸಮಾರಂಭ
ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಪ್ರೊ.ಕೆ.ಚಿನ್ನಪ್ಪ ಗೌಡ ದಂಪತಿಯನ್ನು ಅಭಿನಂಧಿಸಲಾಯಿತು.
ಮೂಡುಬಿದರೆ: ಕರ್ನಾಟಕ ಜಾನಪದ ವಿ.ವಿಯ ನೂತನ ಕುಲಪತಿಯಾಗಿ ಆಯ್ಕೆಯಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರಿಗೆ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿಕಾಸ( ಮಂಗಳೂರು ವಿ.ವಿ ಕನ್ನಡ ಅಧ್ಯಾಪಕರ ಸಂಘ) ಸಹಯೋಗದಲ್ಲಿ ವಿದ್ಯಾಗಿರಿಯ ಡಾ.ವಿಎಸ್ ಆಚಾರ್ಯ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ವಿಶ್ರಾಂತ ಕುಲಪತಿ ಪ್ರೊ.ಬಿ.ವಿವೇಕ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾತಿ ರಾಜಕೀಯ,ಗುಂಪುಗಾರಿಕೆ, ಭ್ರಷ್ಟಾಚಾರ, ಕಾನೂನು ಬದಲಾವಣೆಯಂತಹ ಸವಾಲುಗಳ ನಡುವೆ ವಿ.ವಿ.ಗಳ ಕುಲಪತಿಗಳು ಲೆಕ್ಕಪತ್ರದಲ್ಲಿ ಪಾರದರ್ಶಕತೆ, ಸಿಬ್ಬಂದಿ-ಉಪನ್ಯಾಸಕರ ವಿಶ್ವಾಸ ಗಳಿಸಿ ಮುನ್ನಡೆಯಬೇಕಾಗುವ ಅನಿವಾರ್ಯತೆಯಿದೆ. ಡಾ.ಕೆ.ಚಿನ್ನಪ್ಪ ಗೌಡರಿಗೆ ಅಂತಹ ಸಾಮರ್ಥ್ಯವಿದೆ. ಕಳಂಕರಹಿತವಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸುವ ಶಕ್ತಿಯಿದೆ. ವಿಶ್ವವಿದ್ಯಾಲಯಗಳಲ್ಲಿ ಸಾಂಸ್ಕೃತಿಕ ನೀತಿ ರೂಪಿಸಬಹುದು. ಎಷ್ಟು ಸವಲತ್ತುಗಳಿದೆ ಎನ್ನುವುದಕ್ಕಿಂತ ಇರುವ ಸವಲತ್ತುಗಳನ್ನು ಉಪಯೋಗಿಸಿ, ವಿಶ್ವವಿದ್ಯಾಲಯಗಳನ್ನು ಕಟ್ಟಬಹುದು ಎಂಬುವುದು ಮುಖ್ಯವಾಗುತ್ತದೆ. ನಾವು ಬರಹ, ಭಾಷಣದಲ್ಲಿ ನಮ್ಮ ಶ್ರಮ ತೋರಿಸುವುದಲ್ಲ, ಬದುಕಿನಲ್ಲಿ ಶ್ರಮ ಅಳವಡಿಸಿದಾಗ ಉತ್ತಮ ಅವಕಾಶಗಳು ಬರುತ್ತದೆ. ಚಿನ್ನಪ್ಪ ಗೌಡರು ತನ್ನ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕವಾಗಿ ಶ್ರಮಜೀವಿಯಾಗಿರುವುದರಿಂದಲೇ ಅವರಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದರು. ಪ್ರೊ.ಕೆ.ಚಿನ್ನಪ್ಪ ಗೌಡ-ಡಾ.ಶಾಂತಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೆ.ಚಿನ್ನಪ್ಪ ಗೌಡ, ನನಗೆ ಯಾವುದೇ ವೈಯಕ್ತಿಕ ಕಾರ್ಯಸೂಚಿ ಅಥವಾ ರಹಸ್ಯ ಕಾರ್ಯಸೂಚಿಗಳಿಲ್ಲದ ಕಾರಣ ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಕರ್ನಾಟಕ ಜಾನಪದ ವಿ.ವಿ ಕರ್ನಾಟಕದ ಅಧೀಕೃತ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲು ಶ್ರಮ ವಹಿಸುತ್ತೇನೆ. ಸಂಶೋಧನೆ ಹಾಗೂ ಸಂಪನ್ಮೂಲ ಕೇಂದ್ರವಾಗಿ ವಿ.ವಿಯನ್ನು ಕಟ್ಟುವ ಇರಾದೆಯಿದೆ. ಕಾಯಂ ಉಪನ್ಯಾಸಕರ ನೇಮಕದಂತಹ ವಿಚಾರಗಳನ್ನು ಸರ್ಕಾರದ ಮುಂದಿಟ್ಟು ಪರಿಹರಿಸುವಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಉಜಿರೆ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಬಿ.ಪಿ ಸಂಪತ್ ಕುಮಾರ್ ಅಭಿನಂದನಾ ಭಾಷಣ ಮಾಡುತ್ತಾ, ಜವಾಬ್ದಾರಿ, ಸವಾಲುಗಳನ್ನು ಎದುರಿಸಿ ಅವಕಾಶವಾಗಿಸುವ ಗುಣ ಚಿನ್ನಪ್ಪ ಗೌಡರಲ್ಲಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆ, ಹಾಸ್ಯಪ್ರಜ್ಞೆ, ಕರ್ತವ್ಯದಲ್ಲಿ ಅಚ್ಚುಕಟ್ಟುತನ, ಬದ್ಧತೆ, ಕ್ರೀಯಾಶೀಲತೆ ಚಿನ್ನಪ್ಪರ ಹೆಚ್ಚುಗಾರಿಕೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ವಿಕಾಸದ ಅಧ್ಯಕ್ಷ ಡಾ.ನಾಗಪ್ಪ ಗೌಡ ಆರ್ ಸ್ವಾಗತಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ವಂದಿಸಿದರು. --
20ಕೋಟಿ ರೂ. ವೆಚ್ಚದ ಕಟ್ಟಡ, ಮೂಲಭೂರ್ತ ಸೌಕರ್ಯಗಳೊಂದಿಗೆ ಕರ್ನಾಟಕ ಜಾನಪದ ವಿ.ವಿ. 5ನೇ ವರ್ಷಕ್ಕೆ ಕಾಲಿಡುತ್ತಿದೆ. 10 ಕೋಟಿ ರೂ.ವೆಚ್ಚದ ಶೈಕ್ಷನಿಕ ನೀತಿಯನ್ನು ರೂಪಿಸಲಾಗಿದೆ.
-ಡಾ.ಚಿನ್ನಪ್ಪ ಗೌಡ
ಕುಲಪತಿ, ಕರ್ನಾಟಕ ಜಾನಪದ ವಿ.ವಿ, ಹಾವೇರಿ