‘ಹಿರಿಯರ ಜೀವನಶೈಲಿ ಯುವ ಜನತೆಯ ವ್ಯಕ್ತಿತ್ವ ರೂಪಿಸಬಲ್ಲದು’
ಹಿರಿಯ ನಾಗರಿಕರ ಸೌಲಭ್ಯಗಳು, ಬಾಂಧವ್ಯದ ಕುರಿತು ಕಾರ್ಯಾಗಾರ

ಅಂಕೋಲಾ, ಎ.10 : ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಅವಿಭಕ್ತ ಕುಟುಂಬಗಳ ಶಿಥಿಲತೆ, ಆರ್ಥಿಕ ಜಾಗತೀಕರಣ ಕಾಲಚಕ್ರದಲ್ಲಿ ಕುಟುಂಬದ ಮೌಲ್ಯಗಳು ಜರ್ಜರಿತವಾಗುತ್ತಿರುವುದು ವಿಷಾದನೀಯ. ಜೊತೆಯಲ್ಲಿ ಹಿರಿಯರ ಅನುಭವ, ಜ್ಞಾನದ ನಿರ್ಲಕ್ಷ ಭಾವನೆಗಳಿಂದಾಗಿ ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಪತನಕ್ಕೆ ಕಾರಣವಾಗುತ್ತಿದೆ ಎಂದು ಪ್ರಾಧ್ಯಾಪಕ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚೆಗೆ ಪಟ್ಟಣದ ಲಯನ್ಸ್ ಕ್ಲಬ್ ಕಾರ್ಯಾಲಯದಲ್ಲಿ ಆಯೋಜಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ನಿವೃತ್ತ ನೌಕರರ ಸಂಘ ಮತ್ತು ಲಯನ್ಸ್ ಕ್ಲಬ್ಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಹಿರಿಯ ನಾಗರಿಕರ ಯೋಜನೆಗಳು ಹಾಗೂ ಬಾಂಧವ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆ 2007 ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಹಿರಿಯರ ಆದರ್ಶಗಳು, ಗೌರವ, ವಿಶ್ವಾಸ ನಂಬಿಕೆಗಳೊಂದಿಗೆ ಮಾನವೀಯ ಬೇರುಗಳು ಗಟ್ಟಿಯಾಗಬೇಕು. ಜೀವನದ ಕಾಲಕ್ರಮದಲ್ಲಿ ಬಂದು ಹೋಗುವ ಶೈಶವ, ಬಾಲ್ಯ, ತಾರುಣ್ಯ, ವೃದ್ಧಾಪ್ಯಗಳು ಸಹಜ. ಬಾಲ್ಯ ಹಾಗೂ ತಾರುಣ್ಯದ ಹಂತದಲ್ಲಿ ಹಿರಿಯರ ಸನ್ನಡತೆ, ಪ್ರೀತಿ-ವಿಶ್ವಾಸ ಈ ಹಂತದಲ್ಲಿ ಪ್ರೇರಣೆಯಾಗಿ ಅನುಕರಣೀಯವಾಗಿ ಪ್ರಭಾವಿರಬೇಕು. ವೃದ್ಧಾಪ್ಯದ ಇಳಿವಯಸ್ಸಿನಲ್ಲಿ ಯುವ ಮಕ್ಕಳು ಹಿರಿಯರಿಗೆ ಆಸರೆಯಾಗಿ ಭದ್ರತೆ, ರಕ್ಷಣೆ ಒದಗಿಸುವಲ್ಲಿ ಮುತುವರ್ಜಿವಹಿಸಿ ಎಂದು ವಸ್ತ್ರದ ಹೇಳಿದರು. ನಿವೃತ್ತ ಅಭಿಯಂತರ ಎನ್.ಡಿ. ಅಂಕೋಲೇಕರ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಶಿಶುಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ಎಲ್. ರಾಥೋಡ, ಮುಖ್ಯ ಅತಿಥಿಗಳಾಗಿ ಸರಕಾರದ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ತಲುಪಿಸಲು ಕೈಗೊಂಡ ಕಾರ್ಯ ಸಾಧನೆ ವಿವರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಬೊಮ್ಮಯ್ಯ ನಾಯ್ಕ, ಡಾ. ಕರುಣಾಕರ ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಎನ್. ಎಮ್.ನಾಯ್ಕ ನಿರೂಪಿಸಿದರು. ಮಹಾಂತೇಶ ರೇವಡಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ನ ಸದಸ್ಯರಾದ ಗಣಪತಿ ನಾಯಕ, ರಮೇಶ್ ರಾಯ್ಕರ, ಬೀರಾ ಬೋರ್ಕರ್, ಎಸ್.ಆರ್. ಉಡುಪ, ಗಣಪತಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.





