ತುಂಬೆಯಲ್ಲಿ ನೀರಿನ ಮಾಪಕ ಅಳವಡಿಸಲು ಕ್ರಮ: ಮೇಯರ್ ಹರಿನಾಥ್ ಸಂದರ್ಶನ
ಮಂಗಳೂರು, ಎ.10: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಹರಿನಾಥ್ ಅವರು ನಗರದಲ್ಲಿ ಪ್ರತಿವರ್ಷ ಎದುರಾಗುವ ಕುಡಿಯುವ ನೀರಿನ ಪೂರೈಕೆ ಸಮಸ್ಯೆಯ ಬಗ್ಗೆ, ಮಳೆಗಾಲದ ಆರಂಭದ ದಿನಗಳಲ್ಲಿ ಎದುರಾಗುವ ನಗರದ ಕೆಲವು ಸಮಸ್ಯೆಗಳ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಾ.ಭಾ: ಈ ಬಾರಿಯೂ ಬೇಸಿಗೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ನಿಭಾಯಿಸಲು ಯಾವ ಕ್ರಮ ಕೈಗೊಳ್ಳುತ್ತೀರಿ?
ಹರಿನಾಥ್: ಮಂಗಳೂರಿಗೆ ನೀರು ಸರಬರಾಜಾಗುವ ತುಂಬೆ ಕಿಂಡಿ ಅಣೆಕಟ್ಟಿನ ಪ್ರದೇಶಕ್ಕೆ ನಾವು ಒಂದೆರಡು ದಿನಗಳ ಹಿಂದೆ ಹೋಗಿ ಬಂದಿದ್ದೇವೆ. ಅಲ್ಲಿ ಇನ್ನೂ 50ಕ್ಕೂ ಹೆಚ್ಚು ದಿನಗಳಿಗೆ ಬೇಕಾಗುವಷ್ಟು ನೀರಿದೆ. ಇನ್ನೊಂದು ಎ.ಎಂ.ಆರ್. ಡ್ಯಾಂನಲ್ಲಿಯೂ ನೀರಿದೆ. ಕೆಲವೆಡೆ ಮಳೆಯೂ ಆರಂಭವಾಗಿದೆ. ನೇತ್ರಾವತಿ ನದಿಯ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಿಲ್ಲ. ತುಂಬೆಯಿಂದ ಮಂಗಳೂರಿಗೆ ನೀರು ಸರಬರಾಜಾಗುತ್ತಿರುವ ಕೊಳವೆ ಮಾರ್ಗದ ನಡುವೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಸಾಕಷ್ಟು ಅನಧಿಕೃತ ಸಂಪರ್ಕಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಆದರೂ ನೀರು ಪೂರೈಕೆಯ ಸಂದರ್ಭ ಸೋರಿಕೆ ಉಂಟಾಗುತ್ತಿರುವುದರಿಂದ ಮಂಗಳೂರಿನ ಜಲ ಸಂಗ್ರಹಣಾಗಾರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಇಲ್ಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗದೆ ಇದ್ದರೆ, ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಯಾಗಲು ಸಮಸ್ಯೆಯಾಗುತ್ತದೆ. ‘‘ತುಂಬೆಯಲ್ಲಿ ನೀರಿದೆ ಎಂದು ಪತ್ರಿಕೆಯಲ್ಲಿ ಬಂದಿದೆ, ನಮಗೆ ಕುಡಿಯಲು ಏಕೆ ನೀರು ಬರುತ್ತಿಲ್ಲ’’ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಚನೆ ಇದೆ.
ವಾ.ಭಾ: ಎಷ್ಟು ದಿನಗಳಿಂದ ನೀರು ಪೂರೈಕೆ ಸಮಸ್ಯೆ ಉಂಟಾಗಿದೆ
ಹರಿನಾಥ್: 10-15 ದಿನಗಳ ಹಿಂದಿನಿಂದ ಕೆಲವು ಪ್ರದೇಶಗಳಿಗೆ ನೀರು ತಲುಪದೆ ಇರುವ ಬಗ್ಗೆ ದೂರುಗಳಿವೆ. ಅಲ್ಲದೆ ನಗರದ ಮಂಗಳಾದೇವಿ, ಎಮ್ಮೆಕೆರೆ, ಕುಂಜತ್ತಬೈಲ್, ಕಂದುಕ, ಬೋಳೂರು, ಬಜಾಲ್ ಮೊದಲಾದ ಕಡೆ ಕೆಲವು ದಿನಗಳು ನೀರು ಪೂರೈಕೆಯಲ್ಲಿ ಅಡ ಚಣೆಯಾಗಿದೆ. ನಗರದ ಇನ್ನೂ ಕೆಲವು ವಾರ್ಡ್ಗಳಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ತುರ್ತುಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ವಾ.ಭಾ: ನೀರಿನ ಮೂಲಗಳಾಗಿದ್ದ ತೆರೆದ ಬಾವಿಗಳು ಡ್ರೈನೇಜ್ ನೀರಿನ ಸಮಸ್ಯೆಯಿಂದ ಕಲುಷಿತಗೊಂಡಿದೆ. ಇದರಿಂದ ನಗರದಲ್ಲಿ ಇನ್ನಷ್ಟು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ನಮ್ಮ ಅಭಿಪ್ರಾಯ ?
ಹರಿನಾಥ್:ಬಹಳ ಹಿಂದೆ ನಗರದ ಜನಸಂಖ್ಯೆ ಕಡಿಮೆ ಇದ್ದಾಗ ತೆರೆದ ಬಾವಿಗಳ ಬಳಕೆ ಹೆಚ್ಚುತ್ತಾ ಹೋಯಿತು. ನಂತರ ಫ್ಲಾಟ್ಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಆದರೆ ಬರಬರುತ್ತಾ ತೆರೆದ ಬಾವಿಗಳ ಸಂಖ್ಯೆ ಕಡಿಮೆಯಾಗಿ, ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಿತು. ಡ್ರೈನೇಜ್ ವ್ಯವಸ್ಥೆ ಸರಿಯಾಗದೆ ಇದ್ದ ಕಾರಣ ಈ ರೀತಿಯ ತೊಂದರೆಯಾಗಿರುವುದು ನಿಜ. ಆದರೆ ಈಗ ಎಡಿಬಿ ಯೋಜನೆಯ ಮೂಲಕ ಒಳಚರಂಡಿ ಯೋಜನೆ ಬಹುತೇಕ ಕಡೆ ಅನುಷ್ಠಾನಗೊಂಡಿದೆ. ಇನ್ನೂ ಶೇ.20ರಷ್ಟು ಸರಿ ಮಾಡಬೇಕಾಗಿದೆ.
ವಾ.ಭಾ: ಮಳೆ ನೀರು ಹರಿಯಲು ಸಮಸ್ಯೆಯಾಗಿ ಕೃತಕ ನೆರೆ ಬರುತ್ತದೆಯಲ್ಲಾ ?
ಹರಿನಾಥ್: ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ಸಿಕ್ಕಲ್ಲೆಲ್ಲಾ ಎಸೆದು ಚರಂಡಿ ಬ್ಲಾಕ್ ಆಗಿ ನೀರು ಸರಿಯಾಗಿ ಹೋಗಲು ಸಾಧ್ಯವಾಗದೆ ಕೆಲವೆಡೆ ಸಮಸ್ಯೆ ಉಂಟಾದ ಉದಾಹರಣೆ ಇದೆ. ನಗರದಲ್ಲಿ ಮಳೆ ಚರಂಡಿ ಸ್ವಚ್ಛಗೊಳಿಸುವ ಕೆಲಸಗಳಿಗೆ ಗಮನ ಹರಿಸಲಾಗುತ್ತದೆ. ಎಲ್ಲೆಂದರಲ್ಲಿ ಕಸ ಎಸೆಯದಂತೆ ಕ್ರಮ ಕೈಗೊಳ್ಳುವ ಉದ್ದೇಶ ಇದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಾ.ಭಾ: ನಗರದಲ್ಲಿ ಎಲ್ಲಾ ಕಡೆ ಡಸ್ಟ್ ಬಿನ್ಗಳನ್ನು ತೆರವುಗೊಳಿಸಿದರೆ ಜನರು ಎಲ್ಲೆಂದರಲ್ಲಿ ಕಸ ಎಸೆದು ಹೋಗುವ ಸಾಧ್ಯತೆ ಇದೆಯಲ್ಲಾ?
ಹರಿನಾಥ್: ಅದಕ್ಕಾಗಿ ಮನಪಾ ವ್ಯಾಪ್ತಿಯಲ್ಲಿ ಜನರಿಗೆ ಕಸ ಹಾಕಲು ಒಂದೊಂದು ಪೆಟ್ಟಿಗೆ ನೀಡುತ್ತೇವೆ. ಅದರಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇರುತ್ತದೆ. ಇದಕ್ಕಾಗಿ ಈಗಾಗಲೆ ಒಂದು ಕೋಟಿ ರೂ.ನ ಟೆಂಡರ್ ಕರೆಯಲಾಗಿದೆ. ಆರಂಭದಲ್ಲಿ ಇದನ್ನು ಎರಡರಿಂದ ಮೂರು ವಾರ್ಡ್ಗಳಲ್ಲಿ ಅನುಷ್ಠಾನ ಮಾಡುವ ಉದ್ದೇಶ ಹೊಂದಿದ್ದೇವೆ.
ವಾ.ಭಾ: ಮಳೆಗಾಲದ ಆರಂಭದಲ್ಲಿ ಎದುರಾಗುವ ಕೆಲವು ಸಮಸ್ಯೆ, ಹೆಚ್ಚುತ್ತಿರುವ ಮಲೇರಿಯಾ ಪ್ರಕರಣಗಳ ಬಗ್ಗೆ ಈ ಬಾರಿ ಏನು ಕ್ರಮ ಕೈಗೊಳ್ಳುತ್ತೀರಿ?
ಹರಿನಾಥ್: ಮಳೆಗಾಲದ ಆರಂಭಕ್ಕೆ ಮೊದಲು ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮರಳು ಪೂರೈಕೆಯ ಸಮಸ್ಯೆಯಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಕ್ಕಿದೆ. ಕೆಲವು ಮಾರ್ಕೆಟ್ಗಳ ನಿರ್ಮಾಣ, ಸರ್ವಿಸ್ ಬಸ್ ನಿಲ್ದಾಣ ಕಾಮಗಾರಿ ಆಗಬೇಕಾಗಿದೆ. ಕೆಲವು ದಿನಗಳ ಹಿಂದೆ ಮರಳು ಪೂರೈಕೆಯಿಲ್ಲದೆ ಕಾಮಗಾರಿಗೆ ಸಮಸ್ಯೆಯಾಗಿತ್ತು. ಈಗ ಮರಳು ಪೂರೈಕೆಯಾಗುತ್ತಿದೆ. ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದ ಮಲೇರಿಯಾ ಪ್ರಕರಣ ಈಗ ಹತೋಟಿಯಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ವಾ.ಭಾ: ತುಂಬೆಯಿಂದ ದಿನಕ್ಕೆ ಎಷ್ಟು ಗ್ಯಾಲನ್ ನೀರು ಪೂರೈಕೆಯಾಗುತ್ತದೆ. ಇಲ್ಲಿ ಎಷ್ಟು ಸಂಗ್ರಹವಾಗುತ್ತದೆ ಎನ್ನುವ ಲೆಕ್ಕಾಚಾರಗಳೇನಾದರೂ ಇದೆಯಾ ?
ಹರಿನಾಥ್: ದಿನದಲ್ಲಿ 18 ಎಂಜಿಡಿ ಪೈಪ್ ಮೂಲಕ ನೀರು ಪೂರೈಕೆಯಾಗುತ್ತದೆ. ತುಂಬೆಯ ನೀರೆತ್ತುವ ಕೇಂದ್ರದಿಂದ ದಿನವೊಂದಕ್ಕೆ ಮಂಗಳೂರಿಗೆ ಎಷ್ಟು ನೀರು ಎತ್ತಲಾಗುತ್ತದೆ ಮತ್ತು ಎಷ್ಟು ಪ್ರಮಾಣದ ನೀರು ಮಂಗಳೂರು ನೀರು ಸಂಗ್ರಹಣಾ ಕೇಂದ್ರವನ್ನು ಸೇರುತ್ತದೆ ಎನ್ನುವ ನಿಖರವಾದ ಲೆಕ್ಕ ಈಗ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿ ಶೀಘ್ರದಲ್ಲಿ ಸರಬರಾಜು ಕೇಂದ್ರ ಮತ್ತು ಸಂಗ್ರಹಣಾ ಕೇಂದ್ರದಲ್ಲಿ ಮೀಟರ್ ಅಳವಡಿಕೆಗೆ ಸೂಚನೆ ನೀಡಿದ್ದೇನೆ. ಮೀಟರ್ ಅಳವಡಿಕೆಯ ನಂತರ ಸರಬರಾಜು ಆಗುತ್ತಿರುವ ನೀರು ಎಷ್ಟು?. ತುಂಬೆಯಿಂದ ಮಂಗಳೂರಿಗೆ ತಲುಪುವಾಗ ಎಷ್ಟು ನೀರು ಸೋರಿಕೆಯಾಗುತ್ತದೆ ಎನ್ನುವ ಲೆಕ್ಕ ದೊರೆಯುತ್ತದೆ. ಬಹುತೇಕ ಒಂದು ವಾರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಎಡಿಬಿ ಯೋಜನೆಯ ಪ್ರಕಾರ ಮಂಗಳೂರು ಅಲ್ಲದೆ ಉಳ್ಳಾಲ, ಮುಲ್ಕಿ ಪ್ರದೇಶಗಳಿಗೂ ಕುಡಿಯುವ ನೀರು ಯೋಜನೆಯಿದೆ. ಪ್ರಸಕ್ತ 36 ಮಿಲಿಯ ಗ್ಯಾಲನ್ ನೀರು ಪೂರೈಕೆಯಾಗಬೇಕಾಗಿದೆ.