ಮಂಗಳೂರು : ಕೊಂಕಣಿ ಕಾದಂಬರಿಕಾರ ಹಾಗೂ ನಾಟಕಕಾರ ಲ್ಯಾನ್ಸಿ ಪಿಂಟೊ ನಿಧನ
ಮಂಗಳೂರು, ಎ. 11: ಕೊಂಕಣಿಯ ಪ್ರಸಿದ್ಧ ಕಾದಂಬರಿಕಾರ ಹಾಗೂ ನಾಟಕ ರಚನೆಕಾರ ಕುಲಶೇಖರದ ನಿವಾಸಿ ಲ್ಯಾನ್ಸಿ ಪಿಂಟೊ ನಾಯಕ್ ರವಿವಾರ ರಾತ್ರಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ ಜೆಸಿಂತಾ ಹಾಗೂ ಮಕ್ಕಳಾದ ಡ್ಯಾಫ್ನಿ ಮತ್ತು ಡ್ಯಾಗ್ನಿ ಇವರನ್ನು ಅಗಲಿದ್ದಾರೆ. ರವಿವಾರ ಬೆಳಗ್ಗೆ ಮೆದುಳಿನ ರಕ್ತಸ್ರಾವಕ್ಕೊಳಗಾದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. 1955ರಲ್ಲಿ ಕಿನ್ನಿಗೋಳಿಯಲ್ಲಿ ಜನಿಸಿದ ಲ್ಯಾನ್ಸಿ ಪಿಂಟೊ ಕುವೈತ್ನಲ್ಲಿ ದುಡಿದು ಕೆಲವು ತಿಂಗಳ ಹಿಂದೆ ನಿವೃತ್ತ ಜೀವನ ಕಳೆಯಲು ಊರಿಗೆ ಆಗಮಿಸಿದ್ದರು. ಇದೇ ಎಪ್ರಿಲ್ 7ರಂದು ಕೊಂಕಣಿ ಅಕಾಡೆಮಿ ಮತ್ತು ಕೊಂಕಣಿ ಅಧ್ಯಯನ ಪೀಠದ ವತಿಯಿಂದ ರವೀಂದ್ರ ಕಲಾಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರ ‘ಸುಕಿದಾಡ್’ ಕಾದಂಬರಿ ಬಿಡುಗಡೆಯಾಗಿತ್ತು. ಅಪರಾಹ್ನ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ‘ಕಾದಂಬರಿ ಮತ್ತು ನಾನು’ ಎಂಬ ವಿಷಯದ ಮೇಲೆ ಅವರು ಮಾತನಾಡಿದ್ದರು. ಅವರ ‘ಧವ್’ ಕಾದಂಬರಿಗೆ 1992ರಲ್ಲಿಯೇ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುರಸ್ಕಾರ ದೊರೆತಿತ್ತು. 1995-97ನೆ ಸಾಲಿನ ಕೊಂಕಣಿ ಅಕಾಡಮಿಯ ಪುಸ್ತಕ ಬಹುಮಾನವು ಅವರ ‘ಆಯ್ರಿಕ್ ಸಯ್ರಿಕ್’ ನಾಟಕ ಪುಸ್ತಕಕ್ಕೆ ಲಭಿಸಿತ್ತು. ಇವರು 10 ಕಾದಂಬರಿಗಳನ್ನು, ಹಲವಾರು ನಾಟಕ ಕೃತಿಗಳನ್ನು, ನೂರಾರು ಲೇಖನ, ಕವನ, ಸಣ್ಣಕತೆಗಳನ್ನು ಬರೆದಿದ್ದರು.
ಸಂತಾಪ
ಲ್ಯಾನ್ಸಿ ಪಿಂಟೊ ನಾಯಕ್ ಅವರ ನಿಧನಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ, ಸದಸ್ಯರಾದ ಲಾರೆನ್ಸ್ ಡಿಸೋಜ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.