ಚರಿತ್ರೆ ಬೆಳಕನ್ನು ಹರಡುವ ಸಕಾರಾತ್ಮಕ ಕ್ರಿಯೆಯಾಗಬೇಕು: ಸಚಿವ ಅಭಯ
ಮಂಗಳೂರು, ಎ. 12: ಚರಿತ್ರೆಯನ್ನು ಜನ ತಲೆತಲಾಂತರಗಳಿಂದ ಸತ್ಯವೆಂದು ನಂಬಿಕೊಂಡು ಬಂದಿದ್ದಾರೆ. ಹಾಗಾಗಿ ಚರಿತ್ರೆ ಯಾವತ್ತೂ ಅನುಮಾನದ ಕತ್ತಲನ್ನು ಹರಡದೆ ಬೆಳಕನ್ನು ಹರಡುವ ಸಕಾರಾತ್ಮಕ ಕ್ರಿಯೆಯಾಗಿರಬೇಕು ಎಂದು ರಾಜ್ಯದ ಕ್ರೀಡಾ ಮತ್ತು ಯುವ ಸಬಲೀಕರಣ ಹಾಗೂ ಮೀನುಗಾರಿಕಾ ಸಚಿವರಾದ ಅಭಯಚಂದ್ರಜೈನ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ‘ವಯಸ್ಸಿನ ಮೂಲಕ ಕರ್ನಾಟಕ- ಹೊಸ ಚಾರಿತ್ರಿಕ ದೃಷ್ಟಿಕೋನ’ ಎಂಬ ವಿಷಯದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿಂದಿನ ತಲೆಮಾರಿನ ಸಾಮಾಜಿಕ, ಧಾರ್ಮಿಕ, ಚಾರಿತ್ರಿಕ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳ ಬಗ್ಗೆ ಅರಿಯಲು ಇತಿಹಾಸ ಅತೀ ಅಗತ್ಯ. ಆದರೆ ಈ ಇತಿಹಾಸ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳಿಗೆ ಕಟ್ಟಿಹಾಕುವಂತಿರಬಾರದು. ಸಹಬಾಳ್ವೆಗೆ ಪೂರಕವಾದ ಇತಿಹಾಸ ನಮ್ಮದಾಗಿರಬೇಕು ಎಂದು ಅವರು ಹೇಳಿದರು.
ಕರ್ನಾಟಕದ ಇತಿಹಾಸದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಭಯ, ಉತ್ತರ ಕರ್ನಾಟಕದವರು ಬೇರೆ ರಾಜ್ಯ ಕೇಳುತ್ತಿರುವ ಹಿನ್ನೆಲೆಯಲ್ಲಿ ಸರಕಾರದಿಂದ ಹೆಚ್ಚಿನ ಅನುದಾನದ ಅಲ್ಲಿಗೆ ಹರಿದು ಅಲ್ಲಿನ ಜಿಲ್ಲೆಗಳು ಅಭಿವೃದ್ದಿಯತ್ತ ಸಾಗುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯವರು ಬುದ್ಧಿವಂತರು ಎಂಬ ಲೇಪನದೊಂದಿಗೆ ನಮ್ಮಲ್ಲಿ ಅಭಿವೃದ್ದಿ ಆಗುತ್ತಿಲ್ಲ ಎಂದವರು ವಿಷಾದಿಸಿದರು.
ಇಂದಿನ ದಿನಗಳಲ್ಲಿ ಇತಿಹಾಸವನ್ನು ತಿರುಚುವ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಸತ್ಯವನ್ನು ಮನವರಿಕೆ ಮಾಡುವ ಕಾರ್ಯ ಶಾಲಾ ಕಾಲೇಜುಗಳಿಂದ ಆಗಬೇಕು ಎಂದು ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕೆನಡಾ ಒಟ್ಟಾವಾದ ಸ್ಟಾಟಿಸ್ಟಿಕ್ಸ್ ಕೆನರಾಡ ಸಂಸ್ಥೆಯ ಮಾಜಿ ಹಿರಿಯ ಅಂಕಿಶಾಸ್ತ್ರ ಸಲಹೆಗಾರರಾದ ಡಾ. ಬಿ. ನಂಜಮ್ಮ ಚಿನ್ನಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿಯ ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ. ಉದಯ ಬಿ., ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ಮೀನಾಕ್ಷಿ ಎಂ.ಎಂ. ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಸ್ವಾಗತಿಸಿದರು. ವಿಶ್ವವಿದ್ಯಾಲಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಜೇಶ್ವರಿ ಸಿ. ವಂದಿಸಿದರು.
ಇತಿಹಾಸ ತಜ್ಞರು ಒತ್ತಡದಲ್ಲಿದ್ದಾರೆ!
ಇತಿಹಾಸದ ಬರವಣಿಗೆಗಳು ಇಂದು ಸಮಾಜದಲ್ಲಿ ತಲ್ಲಣಕ್ಕೆ ಕಾರಣವಾಗುತ್ತಿರುವುದರಿಂದ ಇತಿಹಾಸ ತಜ್ಞರು ಅಪಾಯವನ್ನು ಎದುರಿಸುವಂತಾಗಿದೆ. ನಿರ್ಭೀತವಾಗಿ ವಿತಿಹಾಸ ಬರೆಯಲು ಇತಿಹಾಸಕಾರರಿಂದ ಸಾಧ್ಯವಾಗುತ್ತಿಲ್ಲ. ಇತಿಹಾಸ ತಜ್ಞ ಒತ್ತಡದಲ್ಲಿದ್ದಾನೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿವಿಯ ಇತಿಹಾಸ ವಿಭಾಗದ ಪ್ರೊ. ಲೋಕೇಶ್ ಕೆ.ಎಂ. ಆತಂಕ ವ್ಯಕ್ತಪಡಿಸಿದರು.
ಇತಿಹಾಸದ ತಜ್ಞರ ಈ ತಲ್ಲಣಗಳು, ಆತಂಕಗಳ ಕುರಿತಂತೆ ಎರಡು ದಿನಗಳ ಕಾರ್ಯಾಗಾರದಲ್ಲಿ ಚರ್ಚೆಯಾಗುವ ಜತೆಗೆ 23 ಇತಿಹಾಸ ಪ್ರಬಂಧಗಳು ಮಂಡನೆಯಾಗಲಿವೆ ಎಂದು ಅವರು ಹೇಳಿದರು.