ಉಳ್ಳಾಲ : ಸಂಶಯಾಸ್ಪದವಾಗಿ ಮೀನುಗಾರನ ಶವ ಪತ್ತೆ

ಉಳ್ಳಾಲ: ಮೀನುಗಾರಿಕೆಂದು ತೆರಳಿದ್ದ ವ್ಯಕ್ತಿಯ ಶವ ಕೋಟೆಪುರ ಸಮೀಪದ ಬರಾಕಾ ಫಿಶ್ ಆಯಿಲ್ ಮಿಲ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆಪತ್ತೆಯಾಗಿದೆ.
ಉಳ್ಳಾಲದ ಮೊಗವೀರಪಟ್ನ ನಿವಾಸಿ ರಾಜು ಕೋಟ್ಯಾನ್ (41) ಎಂದು ಗುರುತಿಸಲಾಗಿದೆ.
ಮಂಗಳವಾರ ನಸುಕಿನ 2 .00 ಗಂಟೆ ಸುಮಾರಿಗೆ ಮನೆಯಿಂದ ಕೋಟೆಪುರದ ದಕ್ಕೆಗೆ ನಡೆದುಕೊಂಡು ಹೋದವ ಶವವಾಗಿ ಇಂದು ಮಧ್ಯಾಹ್ನ ವೇಳೆ ಪ. ಕೋಟೆಪುರ ಉಳ್ಳಾಲ ರಸ್ತೆ ಬದಿಯ ಪೊದೆಯ ಕೆಳಗಡೆ , ಬರಾಕಾ ಆಯಿಲ್ ಮಿಲ್ ಎದುರುಗಡೆಯೇ ಮೃತದೇಹ ಮುಖಕ್ಕೆ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧ್ಯಾಹ್ನದ ವೇಳೆ ರಸ್ತೆಬದಿಯಲ್ಲಿ ತೆರಳುತ್ತಿದ್ದ ಮಕ್ಕಳಿಗೆ ಮೃತದೇಹ ಕಂಡುಬಂದಿದೆ. ಕೊಲೆಗೈದಿರಬಹುದೆಂಬ ಶಂಕೆ ಕೇಳಿಬಂದಿದೆ.
ಸ್ಥಳಕ್ಕೆ ಡಿಸಿಪಿ, ಎಸಿಪಿ , ಸಿಸಿಬಿ ತಂಡ, ಪಾಂಡೇಶ್ವರ, ಬಜಪೆ, ಮಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸಹಿತ ಕೆಎಸ್ ಆರ್ ಪಿ ಎರಡು ತುಕಡಿಗಳು ಭೇಟಿ ನೀಡಿದೆ . ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಶವ ಪೋಸ್ಟ್ ಮಾರ್ಟಂ ಗಾಗಿ ಕಳುಹಿಸಲಾಗಿದೆ.





