ಅಸೈಗೋಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
ಕೊಣಾಜೆ: ಖಾಸಗಿ ಆಸ್ಪತ್ರೆಗಳು ಸಂಘಸಂಸ್ಥೆಗಳೊಂದಿಗೆ ಸೇರಿ ಅನೇಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುತ್ತಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದೇರಳಕಟ್ಟೆ ಕಣಚೂರು ಆಸ್ಪತ್ರೆಯ ನಿರ್ದೇಶಕ ಯು.ಕೆ ಮೋನು ಅಭಿಪ್ರಾಯ ಪಟ್ಟರು.
ಅವರು ಯು.ಟಿ ಫರೀದ್ ಫೌಂಡೇಶನ್ ಮಂಗಳೂರು,ಸಾಯಿ ಫ್ರೆಂಡ್ಸ್ ಅಸೈಗೋಳಿ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಮತ್ತು ಮಂಗಳೂರು,ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್,ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಉಡುಪಿ ಮತ್ತು ದಕ್ಷಿಣ ಕನ್ನಡ ಅಂಧತ್ವ ನಿವಾರಣಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆದ ಉಚಿತ ನೇತ್ರ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿವಸಗಳಲ್ಲಿ ಯುವಕರು ಆರೋಗ್ಯದ ಬಗ್ಗೆ ತಾತ್ಸಾರ ಮನೋಬಾವ ತೋರುತ್ತಿದ್ದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ನಿರ್ಲಕ್ಷ ವಹಿಸಿ ವೈದ್ಯಕೀಯ ತಪಾಸಣೆ ನಡೆಸದೇ ದೊಡ್ಡ ಕಾಯಿಲೆಗೆ ತುತ್ತಾಗುತ್ತಾರೆ. ಅಂತಹ ಯುವಕರು ಕನಿಷ್ಠ ಪಕ್ಷ ತಮ್ಮೂರಿನಲ್ಲೇ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಾದರೂ ದೈಹಿಕ ತಪಾಸಣೆ ನಡೆಸಿ ಆರೋಗ್ಯ ಕಾಪಾಡುವಂತೆ ಕರೆ ನೀಡಿದರು.
ಮಂಗಳೂರು ವಿದಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ ಮನುಷ್ಯನ ಜೀವನದಲ್ಲಿ ಉತ್ತಮ ಆರೋಗ್ಯ ಅತೀ ಅಗತ್ಯ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಎಂದರು.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ, ಡಾ.ಜೋಯಲ್, ಡಾ.ರಾಜೇಶ್ ಶೆಟ್ಟಿ, ಆನಂದ ಅಸೈಗೋಳಿ, ಸಾಯಿ ಫ್ರೆಂಡ್ಸ್ ಅಧ್ಯಕ್ಷ ಸುನಿಲ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.