ಪಿ.ಎ.ಕಾಲೇಜಿನಲ್ಲಿ ‘ಟೆಕ್ನಾಥಾನ್-2016’ ಅಂತರ್ ಕಾಲೇಜು ಟೆಕ್ನಿಕಲ್ ಫೆಸ್ಟ್ ಉದ್ಘಾಟನೆ
ಕೊಣಾಜೆ: ಕೈರಂಗಳ ಗ್ರಾಮದ ನಡುಪದವಿನಲ್ಲಿರುವ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರ್ ಕಾಲೇಜು ತಾಂತ್ರಿಕ ಉತ್ಸವದ(ಟೆಕ್ನಿಕಲ್ ಫೆಸ್ಟ್) ‘ಟೆಕ್ನಾಥಾನ್-2016’ ಉದ್ಘಾಟನಾ ಸಮಾರಂಭವು ಮಂಗಳವಾರ ಪಿ.ಎ.ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರಿನ ಎಂಎಸ್ಎಂಇ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ನ ಸಹನಿರ್ದೇಶಕ ಕೆ.ಸಾಕ್ರಟಿಸ್, ಇಂದಿನದ್ದು ಪರಿವರ್ತನೆಯ ಯುಗವಾಗಿದ್ದು ಅದರಲ್ಲೂ ಶಿಕ್ಷಣ, ತಂತ್ರಜ್ಞಾನ, ವ್ಯವಹಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ಇಂತಹ ಪರಿವರ್ತನೆಯ ಸಮಾಜದಲ್ಲಿ ನಮ್ಮಲ್ಲಿ ಜ್ಞಾನ, ಕೌಶಲಗಳನ್ನು ವೃದ್ದಿಸಿಕೊಂಡು ಹೊಸತನದ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣದ ಹಂತದಲ್ಲೇ ನಾವು ಉತ್ತಮ ಉದ್ದೇಶದೊಂದಿಗೆ ಮುನ್ನಡೆದು ಮಾನವೀಯ, ಭಾವನಾತ್ಮಕ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ ಇಂತಹ ಟೆಕ್ನಿಕಲ್ ಫೆಸ್ಟ್ ನಂತಹ ಉತ್ಸವಗಳು ನಮ್ಮಲ್ಲಿ ಜ್ಞಾನ, ಕೌಶಲ್ಯಗಳನ್ನು ತುಂಬುವ ಉತ್ಸವವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿ.ಎ.ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಅವರು, ಇಂದು ಸಾಂಸ್ಕೃತಿಕ ಉತ್ಸವಗಳೇ ಹೆಚ್ಚಾಗಿ ನಡೆಯುತ್ತಿದ್ದು ಇದರ ಬದಲು ಇದರೊಂದಿಗೆ ಇಂತಹ ತಾಂತ್ರಿಕ ಉತ್ಸವಗಳು ಕೂಡಾ ಹೆಚ್ಚು ಹೆಚ್ಚು ನಡೆಯಬೇಕು. ಇದು ನಮ್ಮ ತಂತ್ರಜ್ಞಾನ ಕ್ಷೇತ್ರದ ಕೌಶಲ್ಯವನ್ನು ವೃದ್ದಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ., ಆಡಳಿತ ಅಧಿಕಾರಿ ಡಾ.ಆರ್.ಜಿ.ಡಿಸೋಜ, ಆಡಳಿತ ನಿರ್ದೇಶಕ ಡಾ.ಸರ್ಫ್ರಾಝ್ ಹಾಸಿಂ, ಡೀನ್ ಡಾ.ಝಹೀದ್ ಅನ್ಸಾರಿ, ವಿದ್ಯಾರ್ಥಿ ಸಂಯೋಜಕ ಆಸೀಫ್ ಇಸ್ಮಾಯೀಲ್, ಡಾ.ಎ.ಜೆ.ಆಂಥೊನಿ, ಡಾ.ಪ್ರಶಾಂತ್ ಪೈ ಮುಂತಾದವರು ಉಪಸ್ಥಿತರಿದ್ದರು.