ಚುಟಕು ಸುದ್ದಿಗಳು
ಇಂದಿನ ಕಾರ್ಯಕ್ರಮ
ಪ್ರವಚನ ಸಪ್ತಾಹ: ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ಶ್ರೀರಾಮನವಮಿಯ ಪ್ರಯುಕ್ತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ವಿಶೇಷ ಪ್ರವಚನ ಸಪ್ತಾಹ. ಸಮಯ: ಸಂಜೆ 5:45ರಿಂದ 6:45ರವರೆಗೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ. ವಾರ್ಷಿಕೋತ್ಸವ: ಉಡುಪಿ ಯಕ್ಷರಂಗ-ಯಕ್ಷಗಾನ ಕೇಂದ್ರದ 45ನೆ ವಾರ್ಷಿಕೋತ್ಸವದಲ್ಲಿ ಸಭಾ ಕಾರ್ಯಕ್ರಮ ಅಪರಾಹ್ನ 2:30ಕ್ಕೆ. 3ರಿಂದ 5ರವರೆಗೆ ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ಕರ್ಣ’. ಸಂಜೆ 5ರಿಂದ 5:30ರವರೆಗೆ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, 5:30ರಿಂದ 8ರವರೆಗೆ ಯಕ್ಷಗಾನ ಪ್ರದರ್ಶನ ‘ಅಭಿಮನ್ಯು ಕಾಳಗ’. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಉಡುಪಿ. ದ್ವಿತೀಯ ಪಿಯು ಮರುಪರೀಕ್ಷೆ ಸುಸೂತ್ರ
ದ.ಕ. 75, ಉಡುಪಿ 10 ಮಂದಿ ಗೈರು
ಮಂಗಳೂರು/ಉಡುಪಿ, ಎ.12: ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರುಪರೀಕ್ಷೆ ಇಂದು ಸುಸೂತ್ರವಾಗಿ ನಡೆಯಿತು. ಮಂಗಳೂರು ನಗರದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬೆಳಗ್ಗೆ 9 ಗಂಟೆಗೆ ಆರಂಭಗೊಂಡಿದ್ದರೂ, ವಿದ್ಯಾರ್ಥಿಗಳಲ್ಲಿನ ಗೊಂದಲ, ಒತ್ತಡವನ್ನು ನಿವಾರಿಸುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಗೆ 9:30ರವರೆಗೂ ಆಗಮಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಮಾಮೂಲಿನಂತೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿರುವುದು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಕಂಡು ಬಂದಿದೆ. 12,758 ವಿದ್ಯಾರ್ಥಿಗಳು ಹಾಜರಾಗಿದ್ದು, 75 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ. ದ್ವಿತೀಯ ಪಿಯುಸಿಯ ರಸಾಯನಶಾಸ್ತ್ರ ಪರೀಕ್ಷೆ ಉಡುಪಿಯ 29 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಮೂರನೆ ಬಾರಿಗೆ ಸುಗಮವಾಗಿ ನಡೆದಿದೆ. ಜಿಲ್ಲೆಯಲ್ಲಿ 4,256 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಇವರಲ್ಲಿ ಹತ್ತು ಮಂದಿ ಗೈರುಹಾಜರಾಗಿ 4,246 ಮಂದಿ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಎರಡು ಬಾರಿ ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಇಂದು ಬಿಗಿ ಭದ್ರತೆಯ ನಡುವೆ ಪರೀಕ್ಷೆ ನಡೆಯಿತು. ಜಿಲ್ಲೆಯ 29 ಕೇಂದ್ರಗಳ ಪ್ರಶ್ನೆಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಇರಿಸಿದ್ದು, ಇಂದು ಬೆಳಗ್ಗೆ ಎಲ್ಲಾ ಕೇಂದ್ರಗಳಿಗೂ ಇಲ್ಲಿಂದಲೇ ಪ್ರಶ್ನೆಪತ್ರಿಕೆಗಳನ್ನು ಪ್ರತ್ಯೇಕ ವಾಹನಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಕಳುಹಿಸಿಕೊಡಲಾಯಿತು.
ಇಸ್ಲಾಮಿಕ್ ಬೇಸಿಗೆ ಶಿಬಿರ
ಮಂಗಳೂರು, ಎ.12: ಸಲಫಿ ಎಜುಕೇಶನ್ ಬೋರ್ಡ್ ಹಾಗೂ ಸಲಫಿ ಗರ್ಲ್ಸ್ ಆ್ಯಂಡ್ ವಿಮೆನ್ಸ್ ಮೂವ್ಮೆಂಟ್ ವತಿಯಿಂದ ಮೇ 1ರ ತನಕ ಇಸ್ಲಾಮಿಕ್ ಬೇಸಿಗೆ ಶಿಬಿರವು ಮಂಗಳೂರಿನ ಕಲ್ಲಾಪಿನ ಪೀಸ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಲಿದೆ.
ತಫ್ಸೀರ್, ಕುರ್ಆನ್ ಪಠಣ, ಹದೀಸ್, ಅರಬಿಕ್ ವ್ಯಾಕರಣ ಇತ್ಯಾದಿ ವಿಷಯಗಳಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1ರ ತನಕ ತರಗತಿಗಳು ನಡೆಯಲಿವೆೆ. ಶಿಬಿರವು ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ದೂ.ಸಂ.: 0824-2422933, 9141500824 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
17ರಂದು ದಂತ ಚಿಕಿತ್ಸಾ ಶಿಬಿರ
ಉಡುಪಿ, ಎ.12: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಆಶ್ರಯದಲ್ಲಿ ಉಡುಪಿ ನಾಗರಿಕ ಆರೋಗ್ಯ ವೇದಿಕೆ, ಜಯಂಟ್ಸ್ ಗ್ರೂಪ್ನ ಸಹಭಾಗಿತ್ವದಲ್ಲಿ ಮಣಿಪಾಲ ಕೆಎಂಸಿ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ತಜ್ಞ ದಂತ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎ.17ರಂದು ಬೆಳಗ್ಗೆ 9:15ರಿಂದ ಮಧ್ಯಾಹ್ನ 1ರವರೆಗೆ ಕಾಪು ಮಲ್ಲಾರಿನ ಉರ್ದು ಪ್ರೌಢಶಾಲೆಯ ಬಳಿಯ ಎಸ್ಕೆಪಿ ಮೆಡಿಕಲ್ ಸೆಂಟರ್ನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.