ಪಿಲಿಕುಳದ ಗುತ್ತಿನ ಮನೆಯಲ್ಲಿ ಜಾನಪದ ಲೋಕ ಎ.15ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ
ಮಂಗಳೂರು, ಎ.12: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಗುತ್ತಿನಮನೆ ಇದೀಗ ಜಾನಪದ ಲೋಕವಾಗಿ ಪರಿವರ್ತನೆಗೊಳ್ಳುತ್ತಿದೆ. ಈಗಿರುವ ಗುತ್ತಿನ ಮನೆ ತುಳುನಾಡಿನ ವೈಭವಕ್ಕೆ ಪೂರಕವಾಗಿ ಹೊಸ ರೂಪ, ಹೊಸ ಆಕರ್ಷಣೆಯೊಂದಿಗೆ ಪ್ರವಾಸಿಗರನ್ನು ಸೆಳೆಯಲು ಸಿದ್ಧಗೊಳ್ಳುತ್ತಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 498 ಲಕ್ಷ ರೂ. ವೆಚ್ಚದಲ್ಲಿ ಪಿಲಿಕುಳದಲ್ಲಿ ಜಾನಪದ ಲೋಕ ಯೋಜನೆಗೆ ಮುಂದಾಗಿದ್ದು, ‘ತುಳು ಸಂಸ್ಕೃತಿ ಗ್ರಾಮ’ ಯೋಜನೆಯಡಿ ಪ್ರಥಮ ಹಂತವಾಗಿ ಗುತ್ತಿನ ಮನೆ ಒಳಾಂಗಣ ವಸ್ತು ಸಂಗ್ರಹಾಲಯವನ್ನು ರೂಪಿಸಲಾಗಿದೆ. ಎ.15ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಗುತ್ತಿನ ಮನೆ ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ಹಿರಿಯರಿಗೆ 30 ರೂ., ಕಿರಿಯರಿಗೆ 20 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಮಂಜೂರಾದ 498 ಲಕ್ಷ ರೂ. ಪೈಕಿ 2015-16ನೆ ಸಾಲಿಗೆ 149 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಒಳಾಂಗಣ ವಸ್ತು ಸಂಗ್ರಹಾಲಯವನ್ನು ತುಳುನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ತುಳುನಾಡಿನ ವೈಭವವನ್ನು ಸಾರುವ ಯಕ್ಷಗಾನದ ಚೌಕಿಯ ವೇಷ ಭೂಷಣ, ಬಣ್ಣ ಹಚ್ಚುವ ಸನ್ನಿವೇಶದ ಸ್ತಬ್ಧಚಿತ್ರಗಳನ್ನು ರೂಪಿಸಲಾಗಿದೆ. ತುಳುನಾಡಿನ ವೀರರೆಂದೇ ಕರೆಯಲ್ಪಡುವ ಕೋಟಿ ಚೆನ್ನಯರು, ಅಜ್ಜಿ ಹೇಳುವ ಕಥೆಯನ್ನು ಮೊಮ್ಮಕ್ಕಳು ಕೇಳುತ್ತಿರುವ ಸ್ತಬ್ಧಚಿತ್ರಗಳು, ಮೇನೆ, ಗೊರಬು, ಗುತ್ತಿನ ಮನೆಯ ಯಜಮಾನನ ಹಾಸಿಗೆ (ಮಂಚ), ಗೊರಬು, ಅಡುಗೆ ಮನೆಯ ಚಿತ್ರಣ, ದೇವರ ಕೋಣೆ ಮೊದಲಾದವುಗಳು ಗುತ್ತಿನ ಮನೆಯ ಆಕರ್ಷಣೆಯನ್ನು ಹೆಚ್ಚಿಸಿವೆ. ಗುತ್ತಿನ ಮನೆಯನ್ನು ಸಂಪೂರ್ಣ ತುಳುನಾಡಿನ ವಸ್ತುಸಂಗ್ರಹಾಲಯವಾಗಿ ರೂಪಿಸುವ ಪ್ರಕ್ರಿಯೆ ಸದ್ಯ ಹಂತಹಂತವಾಗಿ ನಡೆಯುತ್ತಿದೆ. ಜಾನಪದ ಲೋಕ ಯೋಜನೆಯ ಮುಂದಿನ ಹಂತವಾಗಿ ಹೊರಾಂಗಣ ವಸ್ತು ಸಂಗ್ರಹಾಲಯ, ಕರಾವಳಿ ಜನಪದ ವಸ್ತು ಸಂಗ್ರಹಾಲಯ, ಮೂರು ಕುಟೀರಗಳ ನಿರ್ಮಾಣ, ರಸ್ತೆ, ನೀರು, ಶೌಚಾಲಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದರು.
ತುಳು ಸಂಸ್ಕೃತಿ ಗ್ರಾಮ ಒಂದು ಭಿನ್ನವಾದ ಪ್ರಯತ್ನ. ಇಲ್ಲಿ ಸಂಸ್ಕೃತಿ ರಕ್ಷಣೆಯ ಜತೆಗೆ ಕಲಿಕೆಗೂ ಅವಕಾಶವಿದೆ. ಕೆಲವೊಂದು ಸಂಗತಿಗಳನ್ನು ಸ್ವಯಂ ಆಗಿ ಅನುಭವಿಸುವುದಕ್ಕೆ ಪೂರಕವಾಗಿ ಗುತ್ತಿನ ಮನೆಯೊಳಗೆ ವಸ್ತುಗಳನ್ನು ಜೋಡಿಸಲಾಗಿದೆ ಎಂದು ತುಳು ಸಂಸ್ಕೃತಿ ಗ್ರಾಮ ಯೋಜನೆಯ ಉಪ ಸಮಿತಿ ಅಧ್ಯಕ್ಷ ಪ್ರೊ.ಬಿ.ಎ.ವಿವೇಕ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ, ಎನ್. ಜಿ.ಮೋಹನ್, ಕಲಾವಿದ ಶಶಿಧರ ಅಡಪ, ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀೀಕ್ಷಕ ಜಗದೀಶ ಪೈ ಉಪಸ್ಥಿತರಿದ್ದರು.





