ಕಾರ್ಕಳ : ಕ್ರೈಸ್ಟ್ಕಿಂಗ್ ಹಿನ್ನೋಟ - ಭವಿಷ್ಯದೆಡೆಗಿನ ನೋಟ
ಕಾರ್ಕಳ : ಗರಿಮೂಡಿದ ಹಕ್ಕಿಮರಿಯೊಂದು ಬಾನೆತ್ತರಕ್ಕೆ ಹಾರಿದಾಗ ಅದರ ರೆಕ್ಕೆಗಳು ಸಾರ್ಥಕ್ಯಗೊಳ್ಳುತ್ತವೆ. ಕಾರ್ಮೋಡವು ತಂಪಾಗಿ ಮಳೆಹನಿಯಾಗಿ ಭೂಮಿಗೆ ಇಳಿದಾಗ ಮೇಘಮಾಲೆಯು ಸಾರ್ಥಕ್ಯಗೊಳ್ಳುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ಚಿಗುರೊಡೆಯುವ ಕನಸೊಂದು ನನಸಾದಾಗ ಅವನ ಜೀವನ ಪಾವನವಾಗುತ್ತದೆ. ಮರದಿಂದಲೇ ಬಿದ್ದ ಬೀಜವೊಂದು ಮೊಳಕೆಯೊಡೆದು ಮತ್ತೊಂದು ಮರವಾಗುತ್ತದೆ. ಆ ಮರದ ಹಸಿರೆಲೆಗಳ ನೆರಳಿನ ತಂಪನ್ನು ಆಸ್ವಾದಿಸುವ ಮನಸ್ಸುಗಳು ಅದೆಷ್ಟೋ..., ಅದರ ಹೂವುಗಳಿಂದ ಮಕರಂದ ಹೀರುವ ದುಂಬಿಗಳು ಅದೆಷ್ಟೋ...., ಅದರ ತಣಿವಣ್ಣಿನಿಂದ ಹೊಟ್ಟೆಗೆ ತಂಪೆರೆದುಕೊಳ್ಳುವ ಜೀವಿಗಳು ಅದೆಷ್ಟೋ...., ಹೀಗೆ ಆ ಮರವು ಮಳೆ, ಗಾಳಿ, ಬಿಸಿಲನ್ನು ತಡೆದುಕೊಂಡು ಜೀವ ಸಂಕುಲದ ಏಳಿಗೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತದೆ. ತನ್ನನ್ನು ತಾನು ಸುಟ್ಟುಕೊಂಡು ಬೆಳಕ ಪಸರಿಸುತ್ತಾ ತಮದ ಬಸಿರನ್ನು ಬಗೆಯುತ್ತಾ ಹತ್ತಿ ಬೆಳಕಿನ ಬಿತ್ತವಾಗಿ ತನ್ನನ್ನೇ ಆಹುತಿಕೊಟ್ಟುಕೊಂಡು ತನ್ನ ಅಡಿದಾವರೆಯಲ್ಲಿ ಸಾಗುವವರಿಗೆ ಬೆಳಕನ್ನು ನೀಡುತ್ತದೆ. ಈ ಸಮಾಜದಲ್ಲಿ ಹಲವಾರು ವ್ಯಕ್ತಿಗಳು, ಅವರು ನಿರ್ಮಿಸಿದ ಸಂಸ್ಥೆಗಳು ಇದೇ ರೀತಿ ಪರರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತವೆ. ಕಪ್ಪು ಕಲ್ಲಿನ ಕಾನನ ಕಾರ್ಕಳದ ಮಧ್ಯದಲ್ಲಿ ಇದೇ ರೀತಿಯಲ್ಲಿ ಸದ್ದಿಲ್ಲದೆ, ಆಡಂಬರದ ಅಂಜಿಕೆಯಿಲ್ಲದೆ, ಬಿರುದು ಸಮ್ಮಾನಗಳ ಗೊಡವೆಗಳಿಲ್ಲದೆ ಸುಂದರ ಪುಷ್ಪವಾಗಿ ಅರಳಿ ನಿಂತಿರುವ ಸಂಸ್ಥೆ ಕಾರ್ಕಳದ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆ. ಕ್ರೈಸ್ಟ್ಕಿಂಗ್ ಚಾರಿಟೇಬಲ್ ಟ್ರಸ್ಟ್ನ ಮೂಲಕ ಸ್ಥಾಪನೆಯಾದ ಈ ಸಂಸ್ಥೆಗೆ ಈಗ ಇಪ್ಪತ್ತೈದರ ಹರೆಯ. ಇಂತಹ ನವತಾರುಣ್ಯದಲ್ಲಿರುವ ಈ ಸಂಸ್ಥೆಯ ಗತಕಾಲದ ನೆನಹು ಮತ್ತು ಮುಂದಣ ಹೊಂಗನುಸುಗಳ ಕಡೆಗೆ ಮನವನೆಳಸುವುದು ನಮ್ಮ ಆಶಯ.
ಬೆಳೆದು ಬಂದ ದಾರಿ : ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ಬೆಳೆದು ಬಂದ ದಾರಿ ಒಂದು ಸುಂದರ ಯಶೋಗಾಥೆಯೇ ಸರಿ. ಕಾರ್ಕಳ ಎನ್ನುವುದು ಸರ್ವಧರ್ಮೀಯರ ಸಹಬಾಳ್ವೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸುಂದರ ನಗರಿ. ಸಾಹಿತ್ಯಾಸಕ್ತರ, ಕಲ್ಲಲ್ಲಿ ಕಲೆಯರಳಿಸಿದ ಕಲಾಭಿಮಾನಿಗಳ ಊರಾದ ಕಾರ್ಕಳ ಸರ್ವ ಜನಾಂಗದ ಶಾಂತಿಯ ತೋಟ. ಇಂತಹ ಕಾರ್ಕಳದ ಕೇಂದ್ರ ಭಾಗದಲ್ಲಿರುವ ಕ್ರೈಸ್ಟ್ಕಿಂಗ್ ಚರ್ಚ್ಗೆ ಧರ್ಮಗುರುಗಳಾಗಿ ಬಂದವರು ಫಾ. ದಿ. ಎ್.ಪಿ.ಎಸ್ ಮೋನಿಸ್. ಎತ್ತಣ ಭೂಮಿಯ ಬಂಗಾರ, ಎತ್ತಣ ಮುತ್ತದು ಕಡಲೂರ, ಸೇರಿಸಿ ಪೋಣಿಸೊ ಮಣಿಹಾರ, ಸೃಷ್ಟಿಯ ಸುಂದರ ಹುನ್ನಾರ ಎಂಬ ಕವಿವಾಣಿಯಂತೆ ದೂರದೂರಿನಿಂದ ಬಂದ ಫಾ. ಮೋನಿಸ್ ಅವರು ಈ ಊರಿನ ಸಮಾನ ಮನಸ್ಕರನ್ನು ಸೇರಿಸಿ ಕ್ರೈಸ್ಟ್ಕಿಂಗ್ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪಿಸಿದರು. ಈ ಟ್ರಸ್ಟ್ನ ಮೂಲಕ ಕಟ್ಟಿದ ಸುಂದರ ಶಿಕ್ಷಣ ದೇಗುಲ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆ. ಆಂಗ್ಲ ಶಿಕ್ಷಣದ ಮಡಿವಂತಿಕೆಯನ್ನು ಬಿಟ್ಟಿರದ ಕಾಲಘಟ್ಟವಾದ ಎಂಬತ್ತರ ದಶಕದಲ್ಲಿ ಕಾರ್ಕಳದಲ್ಲಿ ಆಂಗ್ಲಮಾಧ್ಯಮಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದ ಕೀರ್ತಿ ಫಾ. ಮೋನಿಸ್ ಅವರಿಗೆ ಸಲ್ಲುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಸಂದರ್ಭದಲ್ಲಿ ಹಲವರು ವಿರೋಧಿಸಿದರೂ ಅವರೆಲ್ಲರ ಮನವೊಲಿಸಿ ಸಂಸ್ಥೆಯನ್ನು ಆರಂಭಿಸುವಲ್ಲಿ ಯಶಸ್ವಿಯಾದವರು ಫಾ. ಮೋನಿಸ್ ಅವರು. ಅಂದಿನ ಶಿಕ್ಷಣ ಸಚಿವರಾದ ಹೆಚ್. ಜಿ. ಗೋವಿಂದೇ ಗೌಡ ಅವರ ಸಹಕಾರದಿಂದ ಶಾಲೆ ಆರಂಭಿಸಲು ಬೇಕಾದ ಅನುಮತಿಯು ದೊರೆಯಿತು. ಈ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತವರು ಕಾರ್ಕಳದ ಅಂದಿನ ಶಾಸಕರಾಗಿದ್ದ ವೀರಪ್ಪ ಮೊಯ್ಲಿ ಅವರು. ಅಂತೆಯೇ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಇನ್ನಿಬ್ಬರು ಮಹನೀಯರೆಂದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರಿನ ಅಂದಿನ ಜಿಲ್ಲಾ ಉಪನಿರ್ದೇಶಕರಾಗಿದ್ದ ತಿರುಮಲೇಶ್ವರ ರಾವ್ ಹಾಗೂ ಅಂದಿನ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ಜಗನ್ನಾಥ ರೈ ಅವರು. ಈ ಇಬ್ಬರು ಮಹನೀಯರು ಶಿಕ್ಷಣ ಇಲಾಖೆಯ ವತಿಯಿಂದ ಆಗಬೇಕಾದ ಕಾರ್ಯಗಳ ಬಗ್ಗೆ ಮುತುವರ್ಜಿ ವಹಿಸಿ ಸಂಸ್ಥೆ ನಿಗದಿತ ಸಂದರ್ಭದಲ್ಲಿ ಆರಂಭಗೊಳ್ಳಲು ಸಹಕರಿಸಿದರು. ಈ ಎಲ್ಲಾ ಮಹನೀಯರ ಪ್ರೋತ್ಸಾಹ ಹಾಗೂ ತುಂಬು ಸಹಕಾರದಿಂದಾಗಿ ಕ್ರೈಸ್ಟ್ಕಿಂಗ್ ಚರ್ಚ್ನ ವಠಾರದ ಈಗಿನ ರಂಗಮಂದಿರದ ಪಕ್ಕದಲ್ಲಿ ಇದ್ದ ಹಳೆಯ ಹೆಂಚಿನ ಛಾವಣಿಯ ಕಟ್ಟಡದಲ್ಲಿ ಕ್ರಿ.ಶ 1989-90ರಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ವಿಭಾಗದಿಂದ ಈ ಸಂಸ್ಥೆಯ ಬೀಜ ಮೊಳಕೆಯೊಡೆಯಿತು. ಅಲ್ಲಿಂದ ಈ ಸಂಸ್ಥೆಯ ನಿರಂತರವಾದ ಜೈತ್ರಯಾತ್ರೆ ಆರಂಭವಾಯಿತು. ಕ್ರೈಸ್ಟ್ಕಿಂಗ್ ಚರ್ಚ್ನ ವಠಾರದಲ್ಲಿ ದಿನಾಂಕ 8 ಅಕ್ಟೋಬರ್ 1989ರಲ್ಲಿ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಬಿಷಪ್ ಡಾ. ಬೇಸಿಲ್ ಸಾಲ್ವಡೋರ್ ಡಿಸೋಜ ಅವರ ಅಮೃತ ಹಸ್ತದಲ್ಲಿ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಯಿತು. ಹಳೆಯ ಕಟ್ಟಡದ ಪಕ್ಕದಲ್ಲಿರುವ ಕ್ರೈಸ್ಟ್ಕಿಂಗ್ ಚರ್ಚ್ನ ಜಾಗದಲ್ಲಿ ಇದ್ದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮೇಲಿನ ಭಾಗದಲ್ಲಿ ಮೂರು ಅಂತಸ್ತಿನ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. 1991ರಲ್ಲಿ ಮೇ.16ರಂದು ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡು ಅಲ್ಲಿ ಪೂರ್ವ ಪ್ರಾಥಮಿಕ(ಎಲ್.ಕೆ.ಜಿ)ದಿಂದ ಏಳನೇ ತರಗತಿಯವರೆಗಿನ ತರಗತಿಗಳು ನಡೆಯುತ್ತಿದ್ದವು. ಈ ವಿದ್ಯಾದಾಸೋಹದ ಕಾರ್ಯದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಫಾ. ಮೋನಿಸ್ ಅವರಿಗೆ ಬೆನ್ನೆಲುಬಾಗಿ ನಿಂತವರು ಗ್ಯಾಸ್ಪರ್ ಲೂಯಿಸ್, ಎ.ಸಿ. ಪಿರೇರಾ, ಎಡ್ವಿನ್ ಸೋನ್ಸ್, ಸಿಸ್ಟರ್ ಆ್ಯಲಿಟ್ ಕ್ಲೆಮೆಂಟಿನ್, ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಈಗಿನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಸದಸ್ಯರಾದ ಡಾ ಪೀಟರ್ ಫೆರ್ನಾಂಡಿಸ್, ಕು. ಲೂಸಿ ಡಿಲಿಮಾ, ವಾಲ್ಟರ್ ಡಿಸೋಜರವರು. ಈ ಸಂಸ್ಥೆಯ ಆರಂಭದಲ್ಲಿ ಕಾರ್ಕಳದ ಮೇರಿ ಕ್ವೀನ್ ಕಾನ್ವೆಂಟ್ನ ಧರ್ಮ ಭಗಿನಿಯರು ಮತ್ತು ಬೆಳುವಾಯಿ ಮರಿಯಾ ನಿಕೇತನ್ ಕಾನ್ವೆಂಟಿನ ಧರ್ಮಭಗಿನಿಯರ ತುಂಬು ಮನಸ್ಸಿನ ಸಹಕಾರ ಅತ್ಯಮೂಲ್ಯವಾದುದು. ಸಂಸ್ಥೆಯ ಸ್ಥಾಪಕರಾದ ಫಾ. ಮೋನಿಸ್ ಅವರ ನಂತರ ಬಂದ ಕ್ರೈಸ್ಟ್ಕಿಂಗ್ ಚರ್ಚ್ನ ಎಲ್ಲಾ ಧರ್ಮಗುರುಗಳು ಈ ಸಂಸ್ಥೆಯ ಬೆಳವಣಿಗೆಗೆ ನಿರಂತರವಾದ ಸಹಕಾರವನ್ನು ನೀಡಿದ್ದಾರೆ.
ಕ್ರೈಸ್ಟ್ಕಿಂಗ್ ಚರ್ಚ್ನ ಧರ್ಮ ಗುರುಗಳು ಕ್ರೈಸ್ಟ್ಕಿಂಗ್ ಚಾರಿಟೇಬಲ್ ಟ್ರಸ್ಟ್ನ ಪದನಿಮಿತ್ತ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಾರೆ. ಸಿಸ್ಟರ್ ಜೊವಿಟಾ ಅವರು ಪ್ರಥಮ ಮುಖ್ಯೋಪಾಧ್ಯಾಯಿನಿಯಾಗಿ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಪ್ರಾಥಮಿಕ ವಿಭಾಗದ ಯಶಸ್ಸಿನ ನಂತರ ಗಾಂಧಿ ಮೈದಾನದ ಪಕ್ಕದಲ್ಲಿ ಪ್ರೌಢಶಾಲೆ ಆರಂಭಿಸಲು ಸ್ಥಳ ಖರೀದಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅವರು ಪ್ರೌಢಶಾಲಾ ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹೀಗೆ ಮುಂದೆ 1996-97ರಲ್ಲಿ ಪ್ರೌಢ ಶಾಲಾ ವಿಭಾಗ ಆರಂಭವಾಯಿತು. 2000 ನೇ ಇಸವಿಯಲ್ಲಿ ಮೊದಲ ಎಸ್.ಎಸ್.ಎಲ್.ಸಿ ತಂಡ ಈ ಸಂಸ್ಥೆಯಿಂದ ಪರೀಕ್ಷೆ ಬರೆಯಿತು. ಮುಂದೆ ಪದವಿಪೂರ್ವ ವಿಭಾಗವನ್ನು ಆರಂಭಿಸುವ ಯೋಚನೆಯಿಂದಾಗಿ ಕಟ್ಟಡವನ್ನು ಮತ್ತಷ್ಟು ವಿಸ್ತರಿಸಲಾಯಿತು. ಅದರ ಮುಂದುವರಿದ ಭಾಗವಾಗಿ 2000
ನೇ ಸಾಲಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಪದವಿಪೂರ್ವ ವಿಭಾಗವು ಆರಂಭಗೊಂಡಿತು. ಹೀಗೆ ಒಟ್ಟು ನಾಲ್ಕು ಅಂತಸ್ತಿನ ಭವ್ಯ ಕಟ್ಟಡ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗಗಳ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿ, ಸರ್ವಸಜ್ಜಿತವಾಗಿ ನಿರ್ಮಾಣಗೊಂಡಿತು. ಉದ್ಘಾಟನೆಗೆ ಸಿದ್ದ : ಪ್ರಸ್ತುತ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ಹೊಂದಿಕೊಂಡು ಪ್ರಾಥಮಿಕ ವಿಭಾಗದ ನೂತನ ಕಟ್ಟಡ ರಜತ ಮಹೋತ್ಸವದ ಕೊಡುಗೆಯಾಗಿ ಉದ್ಘಾಟನೆಗೆ ಸಜ್ಜುಗೊಂಡಿದೆ.
ಸಾಧನೆಗಳು : ಉತ್ತಮ ಗುಣಮಟ್ಟದ, ಸರ್ವ ಸೌಲಭ್ಯಗಳ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಶಕ್ತಿ ತುಂಬಿಸುತ್ತಿವೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಗ್ರಂಥಾಲಯ ಜ್ಞಾನಜ್ಯೋತಿಯನ್ನು ಬೆಳಗುತ್ತಿದೆ. ಅಂದಿನಿಂದ ಇಂದಿನವರೆಗೆ ಎಲ್ಲಾ ವಿಭಾಗಗಳಲ್ಲಿಯೂ ಗುಣಮಟ್ಟದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. 2014-15ರಲ್ಲಿ ಈ ಸಂಸ್ಥೆಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಐ.ಎಸ್.ಒ 9001-2008 ಪ್ರಮಾಣ ಪತ್ರವು ದೊರೆಯಿತು. ಕಾರ್ಕಳದಲ್ಲಿಯೆ ಮೊದಲ ಬಾರಿಗೆ ಸುಧಾರಿತ ಆಧುನಿಕ ಬೋಧನಾ ವಿಧಾನವಾದ "ಸ್ಮಾರ್ಟ್ ಕ್ಲಾಸ್ ತಂತ್ರಾಂಶ"ವನ್ನು ಅಳವಡಿಸಿದ ಹೆಗ್ಗಳಿಕೆ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯದ್ದು. ಈಗ ಇವುಗಳಿಗೆಲ್ಲ ಕಲಶ ಪ್ರಾಯವಾಗಿ ರಜತಮಹೋತ್ಸವದ ಸಂಭ್ರಮವನ್ನು ನೂರ್ಮಡಿಗೊಳಿಸುವಂತೆ ಈ ಸಂಸ್ಥೆಯ ಶಿಕ್ಷಣ ಕ್ಷೇತ್ರದ ಸಾಧನೆಗೆ ವರ್ಲ್ಡ್ ವೈಡ್ ಎಚೀವರ್ಸ್ ಸಂಸ್ಥೆ ಕೊಡಮಾಡಿದ "ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ಸಂಸ್ಥೆ" ಎಂಬ ಪ್ರಶಸ್ತಿಯ ಗರಿ ಲಭಿಸಿದೆ. ಸಂಸ್ಥೆಯ ಈ ಎಲ್ಲಾ ಸಾಧನೆ, ಪುರಸ್ಕಾರಗಳಿಗೆ ಸಂಸ್ಥೆಯ ಮುಖ್ಯಸ್ಥರು, ಬೋಧಕರು, ಬೋಧಕೇತರರ ಪರಿಶ್ರಮವು ಕಾರಣೀಭೂತವಾಗಿದೆ. ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ನಿಸ್ವಾರ್ಥ ಸೇವೆಯು ಸಂಸ್ಥೆಯ ಉನ್ನತ ಸಾಧನೆಗೆ ಪ್ರೇರಣೆಯಾಗಿದೆ. ಶಿಕ್ಷಣ ಇಲಾಖೆ ಹಾಗೂ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಹಕಾರವು ಕ್ರೈಸ್ಟ್ಕಿಂಗ್ ಶಿಕ್ಷಣಾ ಸಂಸ್ಥೆಗಳ ಪುರೋಗಾಮಿ ಅಭಿವೃದ್ಧಿಗೆ ಶಕ್ತಿದಾಯಕವಾಗಿದೆ. ಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗು ಪರಿಸರದ ವಿಧ್ಯಾಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಸ್ಥೆಯು ಇನ್ನಷ್ಟು ಸಾಧನೆಗೈಯಲು ಸ್ಪೂರ್ತಿದಾಯಕವಾಗಿದೆ. ಈ ಎಲ್ಲಾ ಸಾಧನೆಗಳಿಗೆ ಪ್ರೇರಣೆಯಾದ ಸಂಸ್ಥೆಯ ಚೈತನ್ಯ ಫಾ. ಎಫ್.ಫಿ.ಎಸ್ ಮೋನಿಸ್ ಅವರು 2013
ರಲ್ಲಿ ದಿವಂಗತರಾಗಿದ್ದಾರೆ. ಇನ್ನಿತರ ಚಟುವಟಿಕೆಗಳು: ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ಇತಿಹಾಸವನ್ನು ಅವಲೋಕಿಸುತ್ತಾ ಒಳಹೊಕ್ಕು ನೋಡಿದರೆ ವಿವಿಧ ಚಟುವಟಿಕೆಗಳ ವಿನೂತನ ಲೋಕವೇ ಅನಾವರಣಗೊಳ್ಳುತ್ತದೆ. ಕೇವಲ ಕಲಿಕೆಗೆ ಮಾತ್ರ ಒತ್ತು ನೀಡದೆ ಮಕ್ಕಳಲ್ಲಿರುವ ವೈವಿಧ್ಯಮಯ ಕನಸುಗಳಿಗೆ ನಿಜರೂಪವನ್ನು ನೀಡುವ ರಚನಾತ್ಮಕ ಕಾರ್ಯಚಟುವಟಿಕೆಗಳಿಗೆ ವೇದಿಕೆಯನ್ನೊದಗಿಸಲಾಗುತ್ತದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಮನೋಭಾವನೆ, ಕಲಾಭಿರುಚಿ ಮತ್ತು ಸೃಜನಶೀಲತೆಯನ್ನು ಬೆಳೆಸಲು ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ಹದಿನೈದು ದಿವಸಗಳಿಗೊಮ್ಮೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಮಾನಸಿಕ ಮತ್ತು ಜ್ಞಾನಾಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಡಳಿತ ಮಂಡಳಿಯವರು, ಶಿಕ್ಷಕ ವರ್ಗದವರು ಮತ್ತು ಶಿಕ್ಷಕ- ರಕ್ಷಕ ಸಂಘದವರು ಒಟ್ಟಾಗಿ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಅತ್ಯಂತ ಅರ್ಥಬದ್ಧ, ವೈವಿಧ್ಯತೆ ಮತ್ತು ಕ್ರೀಡಾ ಮನೋಭಾವವನ್ನು ಉದ್ದೀಪನಗೊಳಿಸುವ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಹೆತ್ತವರು ಮತ್ತು ಪೋಷಕರು ಸೇರಿಕೊಂಡು ಮಕ್ಕಳ ದಿನಾಚರಣೆಯಂದು ಆಚರಿಸುವ "ಮಕ್ಕಳ ಹಬ್ಬ" ಅತ್ಯಂತ ವರ್ಣರಂಜಿತವಾಗಿ ಮೂಡಿಬರುತ್ತದೆ. ಹಾಗೆಯೇ ಶಿಕ್ಷಕ-ರಕ್ಷಕ ಸಂಘದವರು ಅತ್ಯಂತ ವೈಭವದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಆ ಮೂಲಕ ಶಿಕ್ಷಕರ ಸಮುದಾಯಕ್ಕೆ ಗೌರವ ಸಲ್ಲಿಸುವುದು ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅತ್ಯಂತ ವಿಶಿಷ್ಟವಾಗಿದೆ. ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಎರಡು ದಿನಗಳ ಕಾಲ ನಡೆಯುವ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಶಿಕ್ಷಕ-ರಕ್ಷಕ ಸಂಘ ಮತ್ತು ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ನಡೆಯುತಿದ್ದು ಸರ್ವರಿಗೂ ಮಾದರಿಯಾಗುವ ನಿಟ್ಟಿನಲ್ಲಿ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ನಡೆಯುತಿದ್ದು ಸರ್ವರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಆಚರಿಸಲ್ಪಡುತ್ತಾ ಬರುತ್ತಿದೆ.
ಹೀಗೆ....ಸಾಧನೆಯ ಹಾದಿಯಲ್ಲಿ ಸಾಗಿದ ಈ ಸಂಸ್ಥೆಯಲ್ಲಿ ಜ್ಞಾನರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಾರ್ಥಕ್ಯ ಜೀವನ ಸಾಗಿಸುತ್ತಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಚಾರ. ಇಂತಹ ಹಿರಿಯ ವಿದ್ಯಾರ್ಥಿಗಳು ಸಮಯ ಸಿಕ್ಕಾಗಲೆಲ್ಲಾ ಸಂಸ್ಥೆಗೆ ಭೇಟಿ ನೀಡಿ ಸಲಹೆ ಸಹಕಾರವನ್ನು ನೀಡುತ್ತಾ ಸಂಸ್ಥೆಯ ಬೆಳವಣಿಗೆಗೆ ಸಹಕರಿಸುತ್ತಿರುವುದು ಸಂತಸದ ವಿಷಯ. ರಜತ ಮಹೋತ್ಸವವನ್ನು ಅವಿಸ್ಮರಣೀಯವನ್ನಾಗಿ ಮಾಡಲು ಈ ಸಂಸ್ಥೆಯಲ್ಲಿ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಂಸ್ಥೆಯ ಪ್ರಾಥಮಿಕ ವಿಭಾಗಕ್ಕೆ ಅತ್ಯುತ್ತಮ ದರ್ಜೆಯ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಕಿಂಡರ್ ಗಾರ್ಟನ್ ಮಕ್ಕಳಿಗೆ ಸುಸಜ್ಜಿತವಾದ ಆಟದ ಉದ್ಯಾನವನ ಹಾಗೂ ಆಟದ ಮನೆಯನ್ನು ನಿರ್ಮಿಸಲಾಗಿದೆ. ವಿಧ್ಯಾರ್ಥಿಗಳಿಗಾಗಿ ಸುಸಜ್ಜಿತವಾದ ಕ್ಯಾಂಟೀನ್ ನಿರ್ಮಾಣವಾಗಿದೆ. ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳಿಗಾಗಿ ವಿನೂತನ ಶೈಲಿಯ ಸಭಾಂಗಣ ಸಜ್ಜುಗೊಂಡಿದೆ. ಸಂಸ್ಥೆಗೆ ಭದ್ರವಾದ ಆವರಣ ಗೋಡೆ ಮತ್ತು ಸುಂದರವಾದ ಸ್ವಾಗತ ಗೋಪುರವನ್ನು ನಿರ್ಮಿಸಲಾಗಿದೆ. ಸಾಧನೆ ಎನ್ನುವುದು ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯುವ ಜೀವವಾಹಿನಿ. ಹಾಗೆಯೇ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳು ಸದಾ ಹೊಸತನವನ್ನು ಮೈಗೂಡಿಸಿಕೊಂಡು ಆಧುನಿಕತೆಯ ಸ್ಪರ್ಶಕ್ಕೆ ಮೈಯೊಡ್ಡಿಕೊಂಡು ನಿರಂತರ ಚಲನಶೀಲವಾಗಿವೆ. ಕ್ರೈಸ್ಟ್ಕಿಂಗ್ ಚಾರಿಟೇಬಲ್ ಟ್ರಸ್ಟ್ನ ಈಗಿನ ಕಾರ್ಯದರ್ಶಿಗಳಾದ ಆವೆಲಿನ್ ಲೂಯಿಸ್, ಸದಸ್ಯರಾದ ಡಾ.ಪೀಟರ್ ಫರ್ನಾಂಡೀಸ್, ವಾಲ್ಟರ್ ಡಿಸೋಜ, ಕು.ಲೂಸಿ ಡಿಲಿಮಾ ಇವರುಗಳ ನೇತೃತ್ವದ ಆಡಳಿತ ಮಂಡಳಿಯ ಮೂಲಕ ಸಾಧನೆಯ ಉತ್ತುಂಗದ ಕಡೆಗೆ ಸಾಗುತ್ತಿದೆ. ಸಂಸ್ಥೆಯ ಆಡಳಿತ ಮಂಡಳಿಯವರು ಇನ್ನು ಹಲವಾರು ಭವಿಷ್ಯದ ಯೋಜನೆಗಳ ಕನಸ್ಸನ್ನು ಕಟ್ಟಿಕೊಂಡು ಅದನ್ನು ನನಸಾಗಿಸಿಕೊಳ್ಳುವತ್ತಾ ಭವಿಷ್ಯದ ದೃಷ್ಟಿಯನ್ನು ನೆಟ್ಟಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಈ ಸಂಸ್ಥೆ ನಿರಂತರ ಜ್ಯೋತಿಯಾಗಿ ಬೆಳಗುತ್ತಿರಲಿ, ವಿದ್ಯಾ ದಾಸೋಹದ ದಾರಿಯಲ್ಲಿ ಜೀವ ನದಿಯಾಗಿ ನಿರಂತರವಾಗಿ ಪ್ರವಹಿಸುತ್ತಿರಲಿ ಎಂಬುದೇ ಎಲ್ಲರ ಹಾರೈಕೆ. ವೈಶಿಷ್ಟ್ಯಗಳು
* ಆಧುನಿಕ ತಂತ್ರಜ್ಞಾನವಾದ ಸ್ಮಾರ್ಟ್ಬೋರ್ಡ್ ಬೋಧನಾ ವಿಧಾನ
* ನಿಧಾನಗತಿಯ ಕಲಿಕೆಯ ಮಕ್ಕಳಿಗೆ ಉಚಿತ ವಿಶೇಷ ತರಗತಿಗಳು
* ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿಗಳು
* ಕ್ರೀಡಾ ಪ್ರತಿಭೆಗಳಿಗೆ ವಿಶೇಷ ತರಬೇತಿ
* ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ನೃತ್ಯ ತರಬೇತಿಗಳು
* ಕರಾಟೆ ಮತ್ತು ಟೆಕ್ವಾಂಡೊ ತರಬೇತಿ
* ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು * ಕಿಂಡರ್ ಗಾರ್ಟನ್ ಮಕ್ಕಳಿಗೆ ವಿಶೇಷ ಆಟದ ಉದ್ಯಾನವನ * ಶಾಲಾ ಬಸ್ ವ್ಯವಸ್ಥೆ
* ಬೇಸಿಗೆ ರಜೆಯಲ್ಲಿ ವಿವಿಧ ತರಬೇತಿಗಳು * 10ನೇ ತರಗತಿಯಲ್ಲಿ ಉನ್ನತ ಅಂಕ ಗಳಿಸಿದ ಮಕ್ಕಳಿಗೆ ಪದವಿಪೂರ್ವ ವಿಭಾಗಕ್ಕೆ ಉಚಿತ ಪ್ರವೇಶ
* ಕಾಲೇಜು ಕ್ಯಾಂಟೀನ್
* 10ನೇ ತರಗತಿಯಲ್ಲಿ ನಿರಂತರ ಶೇ.100 ಫಲಿತಾಂಶ
* ಬೇಸಿಗೆ ರಜೆಯಲ್ಲಿ 9ರಿಂದ 10ನೇ ತರಗತಿಗೆ ಮತ್ತು ಪ್ರಥಮದಿಂದ ದ್ವಿತೀಯ ಪಿಯುಸಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 20ಕ್ಕೂ ಅಧಿಕ ವರ್ಷ ಅನುಭವವಿರುವ ನುರಿತ ಅಧ್ಯಾಪಕರಿಂದ ವಿಶೇಷ ತರಗತಿಗಳು
* ಕೇವಲ ಅಂಕಗಳಿಗೆ ಒತ್ತು ನೀಡದೆ ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರಾಶಸ್ತ್ಯ.