ಕಾಂತಾವರ: ‘ಕಾವ್ಯದ ಹೊಸ ಓದು’ ಕಾರ್ಯಕ್ರಮ
ಮೂಡುಬಿದಿರೆ, ಎ.13: ನವ್ಯೋತ್ತರದ ಮುಖ್ಯ ಕವಿಗಳಲ್ಲಿ ಪ್ರಮುಖರಾದ ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ಕಾವ್ಯದಲ್ಲಿ ಗರಿಷ್ಠ ಪ್ರಮಾಣದ ನೆಲದ ನಿಷ್ಠೆಯನ್ನು ಬೆಳೆಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇದರ ಜೊತೆಗೆ ಅವರು ಸ್ವದೇಶೀಕರಣದ ಪ್ರಜ್ಞೆಯನ್ನೂ ಬೆಳೆಸಿಕೊಂಡು ಬಂದಿದ್ದಾರೆ ಎಂದು ಕಥೆಗಾರ ರಾಘವೇಂದ್ರ ಪಾಟೀಲ ನುಡಿದರು.
ಕಾಂತಾವರ ಕನ್ನಡ ಸಂಘದ ನುಡಿನಮನ ಕಾರ್ಯಕ್ರಮ ದಲ್ಲಿ ಅವರು ಡಾ. ಎಚ್.ಎಸ್.ವೆಂಕಟೇಶ ಮೂರ್ತಿಯವರ ‘ಕಾವ್ಯದ ಹೊಸ ಓದು’ ಎಂಬ ಬಗ್ಗೆ ಮಾತನಾಡಿದರು.
ಭಾರತೀಯ ನೆಲ, ಪರಿಸರ, ಅನುಭವಗಳೇ ಅವರ ಕಾವ್ಯಗಳಾಗಿ ರೂಪುಗೊಳ್ಳುವುದರಿಂದ ಅದರಲ್ಲಿ ವಿಶಿಷ್ಟವಾದ ಪ್ರಾದೇಶಿಕ ಪರಿಮಳವೂ ಬೆಸೆದುಕೊಂಡಿರುತ್ತದೆ. ಭಾರತೀಯ ಪುರಾಣದ ಕಥಾನಕಗಳನ್ನು ತನ್ನೊಡಲಿನಲ್ಲಿ ಧರಿಸಿಕೊಂಡೇ ಬರುವ ಅವರ ಅನುಭವಗಳು ಸಂಪೂರ್ಣ ಸ್ವದೇಶೀ ವಸ್ತು ವಾಗಿಯೇ ಕಾವ್ಯದ ಅಂಗಳಕ್ಕೆ ಬಂದು ವಿಶಿಷ್ಟ ರೂಪು ತಳೆಯುತ್ತದೆ. ಇದರಿಂದಾಗಿಯೇ ಅವರು ಭಾರತೀಯ ಕಾವ್ಯ ಪರಂಪರೆಯನ್ನು ಅತ್ಯಂತ ಸಾರ್ಥಕವಾಗಿ ಬಳಸಿಕೊಂಡ ಜನ ಪ್ರಿಯ ಕವಿಯಾಗಿ ಪ್ರಸಿದ್ಧರಾಗಿದ್ದಾರೆ ಎಂದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಅರುಣಕುಮಾರ್ರ ‘ಉಡುಪಿ ಜಿಲ್ಲೆಯ ಸಿರಿ ಆಲಡೆಗಳು ’ ಎಂಬ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರೂಪಿಸಿದರು.