ಮಂಗಳೂರು: ಕಬಡ್ಡಿ ಪಂದ್ಯಾಟದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ - 20ಕ್ಕೂ ಅಧಿಕ ಮಂದಿಗೆ ಗಾಯ

ಮಂಗಳೂರು, ಎ. 15: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ದ.ಕ. ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಆಶ್ರಯದಲ್ಲಿ ಪಣಂಬೂರು ಬೀಚ್ನಲ್ಲಿ ಇಂದು ಸಂಜೆ ಆರಂಭಗೊಂಡ ರಾಷ್ಟ್ರಮಟ್ಟದ ಆಹ್ವಾನಿತರ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯ ಬಳಿಕ ಇಂದು ನಡೆಯಬೇಕಾಗಿದ್ದ ಪಂದ್ಯಾಟವನ್ನು ಸ್ಥಗಿತಗೊಳಿಸಲಾಗಿದೆ.
ಪಣಂಬೂರು ಅಖಿಲ ಭಾರತ ಆಹ್ವಾನಿತ ಬೀಚ್ ಮ್ಯಾಟ್ ಪುರುಷರ ಹೊನಲು ಬೆಳಕಿನ ಪಂದ್ಯಾಟವು ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಸಂಜೆ ಸುಮಾರು 5 ಗಂಟೆಯ ಬಳಿಕ ಕಬಡ್ಡಿ ಕೋರ್ಟ್ನ ಉದ್ಘಾಟನೆಯ ಬಳಿಕ ಸುಮಾರು 8 ಗಂಟೆಗೆ ಸಚಿವರು, ಶಾಸಕರ ಸಹಿತ ಜಿಲ್ಲಾಧಿಕಾರಿಗಳನ್ನೊಳಗೊಂಡು ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ನಡೆದ ಕೆಲವೇ ಹೊತ್ತಿನಲ್ಲಿ ಪಂದ್ಯಾಟವನ್ನು ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ಯಾಲರಿಯು ಹಠಾತ್ ಕುಸಿದು ಬಿದ್ದ ಪರಿಣಾಮ ಸುಮಾರು 20ಕ್ಕೂ ಅಧಿಕ ಪ್ರೇಕ್ಷಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆಯಿಂದ ತಬ್ಬಿಬ್ಬಾದ ಆಯೋಜಕರು ಇಂದಿನ ಪಂದ್ಯಾಟವನ್ನು ಸ್ಥಗಿತಗೊಳಿಸಿದ್ದಾರೆ. ಗಾಯಾಳು ಪ್ರೇಕ್ಷಕರ ನೆರವಿಗೆ ಧಾವಿಸಿದ ಆಯೋಜಕರು ಅವರನ್ನು ಆಸ್ಪತ್ರೆಗೆ ಕಳುಹಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಲಾಗಿದೆ.





