ನೆಟ್ಲಮುಡ್ನೂರು: ಸರಣಿ ಕಳ್ಳತನ
ವಿಟ್ಲ, ಎ.15: ವಿಟ್ಲ ಠಾಣಾ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿರುವ ಪ್ರಕರಣ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ನೇರಳಕಟ್ಟೆಯ ಗಣೇಶನಗರ ನಿವಾಸಿ ಉಮ್ಮರ್ ಎಂಬವರ ಮನೆಯ ಕಿಟಕಿ ರಾಡನ್ನು ಬಗ್ಗಿಸಿ ಒಳ ನುಗ್ಗಿದ ಕಳ್ಳರು ಕೋಣೆಯೊಳಗಿದ್ದ 2 ಕಪಾಟುಗಳನ್ನು ಮುರಿದು, ಕಪಾಟಿನಲ್ಲಿದ್ದ 35 ಸಾವಿರ ರೂ., ಒಂದೂವರೆ ಪವನ್ ತೂಕದ ಚಿನ್ನದ ಬೆಂಡೋಲೆ, 1 ಟಾರ್ಚ್ ಲೈಟ್, ಒಂದು ಹೊಸ ಪ್ಯಾಂಟ್ ಮತ್ತು ಶರ್ಟ್ ಹಾಗೂ ಸುಗಂಧ ದ್ರವ್ಯಗಳನ್ನು ಕಳವುಗೈದಿರುವುದಾಗಿ ಮನೆಯ ಮಾಲಕ ಉಮ್ಮರ್ ತಿಳಿಸಿದ್ದಾರೆ.
ಕೊಡಾಜೆಯ ಪಂತಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿ ಹುಡುಕಾಟ ನಡೆಸಿದ್ದು, 1,500 ರೂ.ನ್ನು ಕಳವುಗೈದಿದ್ದಾರೆ.
ಶಾಲೆ ಹಾಗೂ ಮದ್ರಸಗಳಿಗೆ ರಜೆಯ ಹಿನ್ನೆಲೆಯಲ್ಲಿ ಮನೆಮಂದಿ ನೆಂಟರ ಮನೆಗೆ ತೆರಳಿದ್ದ ಹಿನ್ನೆಲೆಯಲ್ಲಿ ಎರಡೂ ಮನೆಗಳಲ್ಲಿ ಯಾರೂ ಇರಲಿಲ್ಲ. ಶುಕ್ರವಾರ ಮನೆಗೆ ಬಂದಾಗ ಕಳವಾಗಿರುವ ಬಗ್ಗೆ ತಿಳಿದು ಬಂದಿದೆ. ಎರಡೂ ಮನೆಗಳಲ್ಲೂ ಕಿಟಕಿಯ ರಾಡ್ಗಳನ್ನು ಬಗ್ಗಿಸಿ ಕಳ್ಳರು ಒಳನುಗ್ಗಿರುವುದು ಕಂಡು ಬಂದಿದ್ದು ಈ ಎರಡು ಕೃತ್ಯಗಳನ್ನು ಒಂದೇ ತಂಡದವರು ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.