ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಸಚಿವ ದೇಶಪಾಂಡೆ
ಮಂಗಳೂರು, ಎ. 17: ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರವಾಸಿ ಸೌಲಭ್ಯದ ವಿವಿಧ ಕಾಮಗಾರಿಗಳ ಹಾಗೂ ಕೆಎಸ್ಟಿಡಿಸಿ ಪ್ರವಾಸಿ ಬಸ್ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪ್ರವಾಸಿಗರನ್ನು ಆಕರ್ಷಿಸುವ ನಿಟ್ನಿಟಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜನೆಗಳ ಕಾಮಗಾರಿಗೆ 5 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯಲು ಸಾಕಷ್ಟು ಅವಕಾಶಗಳಿದ್ದರೂ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇದಕ್ಕೆ ಜನರ ಸಹಕಾರ ಬೇಕು. ಪಿಲಿಕುಳ ನಿಸರ್ಗಧಾಮವು ರಾಜ್ಯಕ್ಕೆ ಮಾತ್ರವಲ್ಲ ಇಡೀ ವಿಶ್ವವನ್ನು ಆಕರ್ಷಿಸುವ ಕೆಲಸ ಆಗಬೇಕು ಎಂದು ಅವರು ನುಡಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಶುಚಿತ್ವ, ಭದ್ರತೆ ಮತ್ತು ಕೆಲವು ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಗೃಹ ಇಲಾಖೆಯ ವತಿಯಿಂದ 175 ಹೋಂಗಾರ್ಡ್ಗಳಿಗೆ ತರಬೇತಿ ಸಹಿತ ಹಲವು ಕ್ರಮಗನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವಜನಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಇಲಾಖೆಯ ಸಚಿವ ಕೆ.ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊದಿನ್ ಬಾವ, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎ.ಹುಸೇನ್, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ಅಸಗೋಡು ಜಯಸಿಂಹ ಮೊದಲಾದವರು ಉಪಸ್ಥಿತರಿದ್ದರು.
ಕೆಎಸ್ಟಿಡಿಸಿ ಸೌಲಭ್ಯ
ಪ್ರವಾಸಿಗರ ಈ ಕೆಎಸ್ಟಿಡಿಸಿ ಬಸ್ಸು ಬೆಳಗ್ಗೆ 8ಗಂಟೆಯಿಂದ ಲಾಲ್ಬಾಗ್ನಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ, 9:15ಕ್ಕೆ ಕದ್ರಿಯ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, 10:15ಕ್ಕೆ ಮಂಗಳಾದೇವಿ ದೇವಸ್ಥಾನ, 11:15ಕ್ಕೆ ಸೈಂಟ್ ಅಲೋಶಿಯಸ್ ಚಾಪೆಲ್ಗೆ ತಲುಪಲಿದೆ. ಅಲ್ಲಿ ಮಧ್ಯಾಹ್ನ 12:30ರಿಂದ 1:30ರವರೆಗೆ ಊಟೋಪಚಾರಕ್ಕೆ ವಿರಾಮ ನೀಡಲಿದೆ. ಬಳಿಕ 2 ಗಂಟೆಗೆ ಹೊರಟು ಪಿಲಿಕುಳ ನಿಸರ್ಗಧಾಮದ ಬಯಾಲಾಜಿಕಲ್ ಪಾರ್ಕ್, ಝೂ, ಸ್ನೇಕ್ ಪಾರ್ಕ್ಗೆ ಸಂಜೆ 5 ಗಂಟೆಯಿಂದ 6:30ರವರೆಗೆ ತಣ್ಣೀರು ಬಾವಿ ಟ್ರೀ ಪಾರ್ಕ್ಗೆ ಭೇಟಿ ನೀಡಿ ಸಂಜೆ 7 ಗಂಟೆಗೆ ವಾಪಸ್ ಲಾಲ್ಬಾಗ್ ತಲುಪಲಿದೆ.
ಈ ಹವಾನಿಯಂತ್ರಿತ ಕೆಎಸ್ಟಿಡಿಸಿ ಬಸ್ಸು ಪ್ರವಾಸಿಗರ ನಿತ್ಯ ಲಭ್ಯವಿದೆಯಾದರೂ ಕನಿಷ್ಠ 10 ಮಂದಿ ಪ್ರವಾಸಿಗರು ಇಲ್ಲದಿದ್ದರೆ ಹೊರಡುವಂತಿಲ್ಲ. ಪ್ರತಿಯೋರ್ವ ಸದಸ್ಯನಿಗೆ 190 ರೂ. ಪ್ರಯಾಣ ದರ ವಿಧಿಸಲಾಗಿದೆ. ಉಟೋಪಚಾರ ಸಹಿತ ಇತರ ಖರ್ಚುಗಳು ಪ್ರವಾಸಿಗರೇ ಭರಿಸಬೇಕು. ಈ ಪ್ರಯಾಣ ದರದಲ್ಲಿ ಶಾಲಾ ಮಕ್ಕಳಿಗೆ ಶೇ. 10 ರಿಯಾಯತಿಯನ್ನು ನೀಡಲಾಗಿದೆ.