ಉಪ್ಪಿನಂಗಡಿಯಲ್ಲಿ ಅಡುಗೆ ಸ್ಪರ್ಧೆ-2016
ಆರೋಗ್ಯದಾಯಕ ಬದುಕಿಗೆ ಅಡುಗೆ, ಆಹಾರದ ಪಾತ್ರವೂ ಮುಖ್ಯ-ಸಮೀರಾ ಜಹಾನ್
ಉಪ್ಪಿನಂಗಡಿ: ಪರಿಪೂರ್ಣವಾದ ಆರೋಗ್ಯವಂತ ಬದುಕಿಗೆ ಶುಚಿ, ರುಚಿಯಾದ ಅಡುಗೆ, ಆಹಾರದ ಪಾತ್ರವೂ ಮುಖ್ಯವಾಗಿದ್ದು, ಅದರಲ್ಲೂ ಮಹಿಳೆಯರ ಆರೋಗ್ಯ ಮಹಿಳೆಯರ ಕೈಯಲ್ಲೇ ಇದೆ ಎಂದು ದ.ಕ. ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸಮೀರಾ ಜಹಾನ್ ಹೇಳಿದರು.
ಅವರು ಉಪ್ಪಿನಂಗಡಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ವತಿಯಿಂದ ಭಾನುವಾರ ಉಪ್ಪಿನಂಗಡಿಯಲ್ಲಿ ಹಮ್ಮಿಕೊಳ್ಳಲಾದ ‘ಅಡುಗೆ ಸ್ಪರ್ದೆ-2016’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಡುಗೆ ಮತ್ತು ಆಹಾರ ಅತ್ಯಂತ ಪ್ರಿಯವಾದ ವಿಚಾರವಾಗಿದ್ದು, ಈ ಮೂಲಕ ಪರಸ್ಪರ ಸೌಹಾರ್ದತೆಯನ್ನು ಮೆರೆಯಲು ಸಾಧ್ಯ ಎಂದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಲಕ್ಷ್ಮೀ ಪ್ರಭ ಮಾತನಾಡಿ ಆಧುನಿಕ ಯುಗದಲ್ಲಿ ಮಾರುಕಟ್ಟೆಯಲ್ಲಿ ದೊರಕುವ ಸಿದ್ಧ ಆಹಾರಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳೇ ಅಧಿಕ ಇರುತ್ತದೆ ಇದನ್ನು ಮಕ್ಕಳಿಗೆ ಕೊಡುವ ಮುನ್ನ ಅರಿತುಕೊಳ್ಳಬೇಕು ಎಂದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಆಯಿಶಾ ಬಸ್ತಿಕ್ಕಾರ್ ಮಾತನಾಡಿ ಆಹಾರ ತಯಾರಿಕೆ ಸಂದರ್ಭಗಳಲ್ಲಿ ಸ್ವಾಧದೊಂದಿಗೆ ಮಿತಿಯನ್ನು ಪರಿಗಣಿಸಿಕೊಂಡು ಅನಗತ್ಯವಾಗಿ ಚೆಲ್ಲುವಂತಾಗಬಾರದು ಎಂದರು.
ವಿಜೇತರು:
ಮನೆಯಲ್ಲೇ ಅಡುಗೆ ತಯಾರಿಸಿ ತರಲಾಗಿದ್ದು, ಸಸ್ಯಹಾರಿ ಅಡುಗೆಗೆ ಸೀಮಿತವಾಗಿದ್ದ ಸ್ಪರ್ಧೆಯಲ್ಲಿ ಒಟ್ಟು 45 ಮಂದಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ
ಪ್ರಥಮ- ಸೌದ ಉಪ್ಪಿನಂಗಡಿ, ದ್ವಿತೀಯ- ಸಾಜಿದಾ ಉಪ್ಪಿನಂಗಡಿ, -ದೇವಿಕಾ ಉಪ್ಪಿನಂಗಡಿ ವಿಜೇತರಾದರು.
ಉಪ್ಪಿನಂಗಡಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಸಮೀನಾ ಪರ್ವೀನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುತ್ತೂರು ಘಟಕದ ಸಂಚಾಲಕಿ ಸಮೀನಾ ನೂರು ವಂದಿಸಿದರು. ತಶ್ರಿಫಾಜಾನ್ ಕಾರ್ಯಕ್ರಮ ನಿರೂಪಿಸಿದರು.