ಬಿಜೆಪಿ ಕಾರ್ಯಕರ್ತರೊಂದಿಗೆ ಘರ್ಷಣೆ ನಾಲ್ವರು ಸಿಪಿಎಂ ಕಾರ್ಯಕರ್ತರಿಗೆ ಗಾಯ
ಕಣ್ಣೂರು,ಎ.17: ಇಲ್ಲಿಯ ವಣ್ಣಾದಿಮೂಲದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಸಿಪಿಎಂ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಗಂಭೀರ ಗಾಯಾಳುವನ್ನು ಕರ್ನಾಟಕದ ಮಣಿಪಾಲ ಆಸ್ಪತ್ರೆಗೆ ಮತ್ತು ಇತರ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ರಾಜ್ಯದಲ್ಲಿ ಮೇ.16ರಂದು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧಡೆಗಳಲ್ಲಿ ಪ್ರತಿಸ್ಪರ್ಧಿ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ.
ಮಾ.15ರಂದು ಅಲಪುಝಾದ ಎವೂರಿನಲ್ಲಿ ಡಿವೈಎಫ್ಐ ಕಾರ್ಯಕರ್ತರು ಯುವ ಕಾಂಗ್ರೆಸಿಗನೋರ್ವನನ್ನು ಹತ್ಯೆಗೈದಿದ್ದರೆ,ಮಾ.14ರಂದು ತಿರುವನಂತಪುರ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ವಿ.ಮುರಳೀಧರನ್ ಸೇರಿದಂತೆ ಕನಿಷ್ಠ 30 ಜನರು ಗಾಯಗೊಂಡಿದ್ದರು.
ಮಾರ್ಚ್ನಲ್ಲೇ ಸಿಪಿಎಂ ಕಾರ್ಯಕರ್ತರ ದಾಳಿಯಲ್ಲಿ ಕಣ್ಣೂರು ಜಿಲ್ಲೆಯ ಪಾಪಿನೆಶ್ಶೇರಿಯಲ್ಲಿ ಓರ್ವ ಆರೆಸ್ಸೆಸ್ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದರೆ, ಪಾನೂರಿನಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿದ್ದ.







