ಅಂಜುಮನ್ ಮಹಾವಿದ್ಯಾಲಯದ 48ನೆ ವಾರ್ಷಿಕೋತ್ಸವ
ಭಟ್ಕಳ,ಎ.17: ಅಂಜುಮನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದೇಶ,ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ರಾಜ್ಯಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ಅವರು ಇಲ್ಲಿನ ಅಂಜುಮನ್ ಪದವಿ ಕಾಲೇಜು ಮತ್ತು ಪಿಜಿ ಸೆಂರ್ನಲ್ಲಿ ರವಿವಾರ ನಡೆದ 48ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಇಲ್ಲಿನ ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲಷ್ಟೇ ಅಲ್ಲದೇ ದೈಹಿಕ,ಮಾನಸಿಕವಾಗಿಯೂ ಸದೃಢರಾಗಿದ್ದಾರೆ. ಈ ಸಂಸ್ಥೆಯ ಬೆಳವಣಿಗೆಯಲ್ಲಿ ದಿ.ಅಬ್ದುಲ್ ಘನಿ, ಎಸ್.ಎಂ ಯಾಹ್ಯಾ ಅವರ ಕೊಡುಗೆ ಅಪಾರವಾದುದು ಎಂದರು.
ಅಂಜುಮನ್ ಸಂಸ್ಥೆ ಕೇವಲ ಭಟ್ಕಳದವರಿಗಷ್ಟೇ ಅಲ್ಲದೇ ರಾಜ್ಯಕ್ಕೆ ಶಿಕ್ಷಣ ನೀಡುವ ಸಂಸ್ಥೆಯಾಗಿದೆ.ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ವಿಶ್ವವಿದ್ಯಾನಿಲಯ ಆಗಿ ರೂಪುಗೊಳ್ಳಲಿ ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದರು. ಒಂದು ಸಂಸ್ಥೆ ನೂರು ವರ್ಷ ಕಳೆಯುವುದು ಸಣ್ಣ ವಿಷಯವಲ್ಲ.ಮನುಷ್ಯನ ಜೀವನದಲ್ಲಿ ಆ ನೂರು ವರ್ಷ ಒಂದು ಪರ್ವ ಇದ್ದ ಹಾಗೆ ಎಂದು ಹೇಳಿದ ಅವರು,ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಬ್ದುಲ್ ರೆಹ್ಮಾನ್ಬಾತಿನ್ ಎಸ್.ಎಂ ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ ನಾಯ್ಕ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಶೀಮಜಿ ಮುಹಮ್ಮದ್ ಅನ್ಸಾರ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯೀಲ್, ಪಿಯು.ಕಾಲೇಜ್ ಕಾರ್ಯದರ್ಶಿ ಜಾವಿದ್ ಹುಸೇನ್ ಅರ್ಮಾರ್, ಉಪಪ್ರಾಂಶುಪಾಲ ಪ್ರೊ.ಎಂ.ಕೆ ಶೇಖ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ನಿವೃತ್ತರಾದ ಡಾ.ಕೆ.ಸಿ ನಝೀರ್ ಅಹ್ಮದ್, ಶೇಖ್ ಅಲಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪರಸ್ಕರಿಸಲಾಯಿತು. ಇಬ್ರಾಹೀಂ ಕುರಾನ್ ಪಠಿಸಿದರು. ಪ್ರೊ..ಆರ್.ಎಸ್ ನಾಯಕ ಸ್ವಾಗತಿಸಿದರು. ಮುಸಾಬ್ ಅಬಿದ ಪರಿಚಯಿಸಿದರು. ಪ್ರಾಂಶುಪಾಲ ಪ್ರೊ.ಎ.ಎಂ ಮುಲ್ಲಾ ವರದಿ ವಾಚಿಸಿದರು.







