ಮೋದಿ - ಮುಸ್ಲಿಮರ ಭೇಟಿ ಕುರಿತ ಸರಕಾರದ ಹೇಳಿಕೆ ನಿರಾಕರಿಸಿದ ನಿಯೋಗದ ಸದಸ್ಯರು
ನಮ್ಮನ್ನು ಕರೆದಿದ್ದು ಸರಕಾರ ಹಾಗೂ ಮುಸ್ಲಿಮರ ನಡುವೆ ವಿಶ್ವಾಸಾರ್ಹತೆ ಕುಸಿಯುತ್ತಿರುವ ಬಗ್ಗೆ ಚರ್ಚಿಸಲು
.jpg)
ಹೊಸದಿಲ್ಲಿ, ಎ.16: ಮುಸ್ಲಿಂ ಗಣ್ಯರ ತಂಡವೊಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಅವರ ಇತ್ತೀಚಿನ ಸೌದಿ ಆರೇಬಿಯ ಪ್ರವಾಸದ ಯಶಸ್ಸಿಗಾಗಿ ಅಭಿನಂದಿಸಿತೆಂದು ಕೇಂದ್ರ ಸರಕಾರ ನೀಡಿದ್ದ ಎಪ್ರಿಲ್ 13ರ ಪತ್ರಿಕಾ ಪ್ರಕಟನೆಯ ಬಗ್ಗೆ ನಿಯೋಗದ ಕೆಲವು ಸದಸ್ಯರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯ ಹಾಗೂ ಕೇಂದ್ರ ಸರಕಾರದ ನಡುವೆ ಉದ್ಭವಿಸಿರುವ ವಿಶ್ವಾಸದ ಕೊರತೆ ಹಾಗೂ ಅದನ್ನು ಯಾವ ರೀತಿ ಕೊನೆಗೊಳಿಸಬಹುದೆಂಬ ಬಗ್ಗೆ ಚರ್ಚಿಸಲು ತಮ್ಮನ್ನು ಆಹ್ವಾನಿಸಲಾಗಿತ್ತು. ಆದರೆ ಸರಕಾರದ ಪತ್ರಿಕಾ ಮಾಹಿತಿ ಬ್ಯೂರೋ ಬೇರೆಯೇ ಟಿಪ್ಪಣಿಯನ್ನು ಪ್ರಕಟಿಸಿದೆಯೆಂದು, ನಿಯೋಗದಲ್ಲಿದ್ದ ಪತ್ರಕರ್ತ ಖುರ್ಬಾನ್ ಅಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯೋಗದಲ್ಲಿದ್ದ ‘ನಯೀ ದುನಿಯಾ’ ಪತ್ರಿಕೆಯ ಸಂಪಾದಕ ಶಹೀದ್ ಸಿದ್ದೀಕಿ ಕೂಡಾ ಇದನ್ನು ದೃಢಪಡಿಸಿದ್ದಾರೆ. ‘‘ಮುಸ್ಲಿಮರ ಆರ್ಥಿಕ ಹಾಗೂ ಶೈಕ್ಷಣಿಕ ಹಿಂದುಳಿಯುವಿಕೆಯ ಬಗ್ಗೆ ಚರ್ಚಿಸಲಾಗುವುದೆಂದು ನನಗೆ ತಿಳಿಸಲಾಗಿತ್ತು. ಸಭೆಯಲ್ಲಿ ನಾನು ಮುಸ್ಲಿಂ ಸಮುದಾಯದ ಏಳಿಗೆಗೆ ಸಂಬಂಧಿಸಿ ಕೆಲವು ಸಮರ್ಥವಾದ ಸಲಹೆಗಳನ್ನು ನೀಡಿದ್ದೆ ಹಾಗೂ ಸರಕಾರವು ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ಹಲವು ಕಾರ್ಯಕ್ರಮಗಳು ಅವರಿಗೆ ತಲುಪದಿರುವ ಬಗ್ಗೆ ಗಮನಸೆಳೆದಿದ್ದೆ’’ ಎಂದು ಅವರು ತಿಳಿಸಿದ್ದಾರೆ.
ನಿಯೋಗದ ನೇತೃತ್ವ ವಹಿಸಿದ್ದ ಡಾ. ಎಂ.ಜೆ. ಖಾನ್ ಹಾಗೂ ಶಿಯಾ ಪಂಗಡದ ವಿದ್ವಾಂಸ ಕಲ್ಬೆ ಜಾವೀದ್ ಸೇರಿದಂತೆ ಕೆಲವು ಸದಸ್ಯರು ಮಾತ್ರ ಮುಸ್ಲಿಂ ಜಗತ್ತಿನ ಜೊತೆ ಬಾಂಧವ್ಯಗಳನ್ನು ಸುಧಾರಿಸಲು ಮೋದಿ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರೆಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.
ನರೇಂದ್ರ ಮೋದಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ಪಶ್ಚಿಮ ಏಶ್ಯಾ, ಮಧ್ಯ ಏಶ್ಯ ಹಾಗೂ ಉತ್ತರ ಆಫ್ರಿಕದ ಜನತೆ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ ಹಾಗೂ ಅವರು ಭಾರತದ ಜೊತೆ ಉತ್ತಮ ಬಾಂಧವ್ಯಗಳನ್ನು ಹೊಂದಲು ಬಯಸಿದ್ದಾರೆಂದು ನಿಯೋಗದ ಸದಸ್ಯರು ಸಭೆಯಲ್ಲಿ ಪ್ರಶಂಸಿಸಿರುವುದಾಗಿ ಪತ್ರಿಕಾ ಮಾಹಿತಿ ಬ್ಯೂರೋದ ಪ್ರಕಟನೆ ತಿಳಿಸಿದೆ.
ಪ್ರಧಾನಿಯ ಪಶ್ಚಿಮ ಏಶ್ಯ ನೀತಿಯಿಂದಾಗಿ ಉಂಟಾಗಿರುವ ಧನಾತ್ಮಕ ಪರಿಣಾಮದ ಬಗ್ಗೆ ಪಶ್ಚಿಮ ಏಶ್ಯ ತಜ್ಞ ಖಮರ್ ಆಗಾ ಸಭೆಯಲ್ಲಿ ಮಾತನಾಡಿದ್ದರು. ಮುಸ್ಲಿವರು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು, ಅದರಲ್ಲಿ ಎಲ್ಲಾ ಸಮುದಾಯಗಳ ಮಕ್ಕಳಿಗೂ ಕಲಿಯಲು ವ್ಯವಸ್ಥೆ ಮಾಡುವ ಅಗತ್ಯವಿದೆಯೆಂದು ಅವರು ಹೇಳಿದ್ದರು.
ನಿಯೋಗದ ನೇತೃತ್ವದ ವಹಿಸಿದ್ದ ಡಾ.ಎಂ.ಜೆ. ಖಾನ್ ಈ ಮೊದಲು ಉತ್ತರಪ್ರದೇಶದ ಮೂಲದ ಪೀಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, 2013ರ ಕೊನೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಭಾರತೀಯ ಮುಸ್ಲಿಂ ಸಂಶೋಧನಾ ಹಾಗೂ ಸಮನ್ವಯ ಕೇಂದ್ರದ ರಾಷ್ಟ್ರೀಯ ಸಂಚಾಲಕರಾಗಿರುವ ಅವರು ‘ಕೇಂದ್ರಗೃಹ ಸಚಿವರ ರಾಜ್ನಾಥ್ಸಿಂಗ್ರ ನಿಕಟವರ್ತಿಯಾಗಿದ್ದಾರೆ. ಮುಸ್ಲಿಂ ರಾಷ್ಟ್ರಗಳೊಂದಿಗೆ ಬಾಂಧವ್ಯಗಳನ್ನು ಬಲಪಡಿಸುವುದರಿಂದ ತಾಯ್ನಿಡಿನಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯಗಳು ಸುಧಾರಣೆಯಾಗಲಿದೆ ಎಂದು ತಾನು ಪ್ರಧಾನಿ ಜೊತೆಗಿನ ಮಾತುಕತೆಯ ವೇಳೆ ತಾನು ಸಲಹೆ ನೀಡಿದ್ದಾಗಿ ಖಾನ್ ತಿಳಿಸಿದ್ದಾರೆ. ಅಲಿಗಡ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ವರೂಪವನ್ನು ಉಳಿಸಿಕೊಳ್ಳುವ ಕುರಿತಾದ ವಿವಾದ ಹಾಗೂ ಸುಳ್ಳು ಆರೋಪಗಳಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಂ ಯುವಜನರ ವಿರುದ್ಧದ ಪ್ರಕರಣಗಳ ಇತ್ಯರ್ಥಕ್ಕೆ ಪರಾಮರ್ಶನಾ ಸಮಿತಿಯ ಸ್ಥಾಪನೆಯ ಅಗತ್ಯದ ಬಗ್ಗೆಯೂ ಚರ್ಚಿಸಲಾಯಿತೆಂದು ಖಾನ್ ಹೇಳಿದ್ದಾರೆ.





