ಪ್ರಧಾನಿ ಮೋದಿಯವರೆ ಎಲ್ಲಿವೆ ಉದ್ಯೋಗಗಳು?

ಮೋದಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನೆಲ್ಲ, ವಿದೇಶಿ ಕಂಪೆನಿಗಳಿಗೆ ತೆರೆದುಕೊಟ್ಟರು. ಚಿಲ್ಲರೆ ಅಂಗಡಿಗಳಿಂದ ಹಿಡಿದು, ಈ ದೇಶದ ರಕ್ಷಣಾ ವ್ಯವಸ್ಥೆಯ ಹೊಣೆಗಾರಿಕೆಗಳನ್ನೂ ವಿದೇಶಿ ಕಂಪೆನಿಗಳಿಗೆ ಕರೆ ಕರೆದು ನೀಡಿದರು. ಇದಕ್ಕೆಲ್ಲ ಅವರು ನೀಡಿದ ಕಾರಣ, ಬಂಡವಾಳ ಹೂಡಿಕೆ ಮತ್ತು ಉದ್ಯೋಗ ನಿರ್ಮಾಣ. ಆದರೆ ನರೇಂದ್ರ ಮೋದಿಯವರ ಉದ್ಯೋಗ ಭರವಸೆ ಸದ್ಯಕ್ಕಂತೂ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ ಅಂಕಿಅಂಶಗಳು ಮೋದಿ ಸರಕಾರದಲ್ಲಿ ಉದ್ಯೋಗ ಸೃಷ್ಟಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂಬ ಅಂಶವನ್ನು ಹೇಳುತ್ತಿದೆ. ಈಗ ಈ ವರದಿ ಕೇಳುತ್ತಿರುವ ಪ್ರಶ್ನೆಯೆಂದರೆ, ನರೇಂದ್ರ ಮೋದಿಯವರ ಉದ್ಯೋಗ ರಹಿತ ಅಭಿವೃದ್ಧಿ ಈ ದೇಶದ ಜನರ ಜೀವನ ಮಟ್ಟವನ್ನು ಮೇಲೆತ್ತೀತೇ?
ವರದಿಗಳ ಪ್ರಕಾರ 2015ರ ಡಿಸೆಂಬರ್ ಅಂತ್ಯದ ವೇಳೆಗೆ ಯಾವುದೇ ಹೊಸ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಅದಕ್ಕಿಂತ ಆತಂಕಕಾರಿ ವಿಷಯವೆಂದರೆ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಎಂಟು ಕ್ಷೇತ್ರಗಳಲ್ಲಿ 20,000 ಉದ್ಯೋಗಗಳು ಕ್ಷೀಣಿಸಿವೆ. ನೆನಪಿರಲಿ, ಅದೇ ವರ್ಷದ ಸೆಪ್ಟಂಬರ್ ಅಂಕಿಅಂಶಗಳ ಪ್ರಕಾರ ಅದೇ ಎಂಟು ಕ್ಷೇತ್ರಗಳಲ್ಲಿ 1.34 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. ಆದರೂ ಕಳೆದ ಆರು ವರ್ಷಗಳಲ್ಲೇ ಇದು ಅತ್ಯಂತ ನಿಧಾನವಾದ ವರ್ಷಾಂತ್ಯವಾಗಿತ್ತು. ಈಗ ಡಿಸೆಂಬರ್ ವರ್ಷಾಂತ್ಯದ ವರದಿ ಹೊರಬಂದಿದ್ದು ಈ ಎಂಟು ಕ್ಷೇತ್ರಗಳಲ್ಲಿ 2015ರ ಜನವರಿಯಿಂದ ಡಿಸೆಂಬರ್ ವರೆಗೆ ಕೇವಲ 1.35 ಲಕ್ಷ ಉದ್ಯೋಗಗಳನ್ನು ಮಾತ್ರ ಸೃಷ್ಟಿಸಲಾಗಿದೆ. 2009ರಿಂದೀಚೆಗೆ ದಾಖಲಾದ ಅತ್ಯಂತ ಕಡಿಮೆ ಉದ್ಯೋಗ ಸೃಷ್ಟಿಯ ದಿನಗಳು ಇದಾಗಿವೆ.
ಎನ್ಡಿಎ ಸರಕಾರದ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಉಂಟಾಗಿರುವ ನಿಧಾನವನ್ನು ಲೆಕ್ಕ ಹಾಕುವ ಸರಳ ಲೆಕ್ಕಾಚಾರ ಇಲ್ಲಿದೆ: ಮೋದಿ ಸರಕಾರ 2014ರ ಮಧ್ಯದಲ್ಲಿ ಅಧಿಕಾರಕ್ಕೆ ಬಂದು ಆ ವರ್ಷವಿಡೀ ಈ ಎಂಟು ಕ್ಷೇತ್ರಗಳಲ್ಲಿ 4.93 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಯಿತು. ಹಾಗಾಗಿ ಈ ಸರಕಾರದ ಒಂದು ವರ್ಷದ ಅವಧಿಯಲ್ಲಿ ಸೃಷ್ಟಿಯಾದ ಉದ್ಯೋಗವು 2014ರ ಕೇವಲ ಕಾಲು ಭಾಗಕ್ಕೆ ಸಮವಾಗಿದೆ ಮತ್ತು ಯುಪಿಎ ಸರಕಾರ ಅಧಿಕಾರದಲ್ಲಿದ್ದ 2009ರಲ್ಲಿ ಕಂಡ ಬೆಳವಣಿಗೆಯ ಕೇವಲ ಹತ್ತನೆ ಭಾಗ ಮಾತ್ರ ಆಗಿತ್ತು. ಇದಕ್ಕೂ ಕಾರಣಗಳಿವೆ. ಸರಕಾರ, ಹೊಸ ಕಂಪೆನಿಗಳನ್ನು ದೇಶಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಉದ್ಯೋಗ ನೀತಿಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಸರಕಾರ ಸಾಧ್ಯವಾದಷ್ಟು ವಿದೇಶಿ ಕಂಪೆನಿಗಳನ್ನು ಆಕರ್ಷಿಸಲು ಯತ್ನಿಸುತ್ತಿದೆ. ಮತ್ತು ಜನಸಾಮಾನ್ಯರ ಉದ್ಯೋಗ ಸಮಸ್ಯೆಗಳಿಗೆ ಕಿವುಡಾಗಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಒಂದು ರಾಷ್ಟ್ರೀಯ ಉದ್ಯೋಗ ನೀತಿಯನ್ನು ರೂಪಿಸಲು ಹಲವು ಬಾರಿ ಮನವಿ ಮಾಡಿಕೊಂಡು ಬಂದಿವೆಯಾದರೂ, ಸರಕಾರಕ್ಕೆ ಮಾತ್ರ ಅದರ ಅಗತ್ಯ ಕಂಡು ಬಂದಿಲ್ಲ. ಕಾರ್ಮಿಕ ಧ್ವನಿಗಳನ್ನು ಮಟ್ಟ ಹಾಕುವ ದಾರಿಗಳನ್ನು ಹುಡುಕುವುದರಲ್ಲಷ್ಟೇ ಅದು ಆಸಕ್ತವಾಗಿದೆ.
ಉದ್ಯೋಗ ನಾಶದ ಇತ್ತೀಚಿನ ಉದಾಹರಣೆಯೆಂದರೆ, ಬೀಡಿ ಉತ್ಪಾದನಾ ಘಟಕಗಳ ಮುಚ್ಚುಗಡೆ. ಬೀಡಿ ಪ್ಯಾಕ್ ಮೇಲಿನ ಎಚ್ಚರಿಕೆಯ ಚಿತ್ರದ ಬಗ್ಗೆ ಉಂಟಾದ ಸಮಸ್ಯೆಯಿಂದ 24 ಲಕ್ಷ ಕಾರ್ಮಿಕರು ಪರದಾಡುವಂತಾಗಿದೆ. ಸ್ವತಃ ಬಿಜೆಪಿ ಪ್ರಾಯೋಜಿತ ಕಾರ್ಮಿಕ ಸಂಘಟನೆಗಳೂ ಮೋದಿ ಸರಕಾರದ ಉದ್ಯೋಗ ಸೃಷ್ಟಿಯ ನೀತಿಯ ಬಗ್ಗೆ ಕೂಡಾ ಅಸಮಾಧಾನ ಹೊಂದಿದೆ. 2011-12ರ ಎನ್ಎಸ್ಎಸ್ಒ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ಅರ್ಧಭಾಗ (ಶೇ.49) ಕೃಷಿಯಲ್ಲಿ ತೊಡಗಿದೆ ಮತ್ತು ಪನಗರಿಯಾ ಪ್ರಕಾರ ಕೃಷಿ ಕ್ಷೇತ್ರದಲ್ಲೂ ಸ್ವಲ್ಪ ಮಟ್ಟಿನ ನಿರುದ್ಯೋಗವಿದೆ. ಕೈಗಾರಿಕೆಗಳ ವಿಷಯಕ್ಕೆ ಬಂದರೂ, 20ಕ್ಕಿಂತ ಕಡಿಮೆ ಕಾರ್ಮಿಕರಿರುವ ಅಸಂಘಟಿತ ಕ್ಷೇತ್ರಗಳ ಸಂಸ್ಥೆಗಳು ಉತ್ಪಾದನಾ ಕ್ಷೇತ್ರದ ಮುಕ್ಕಾಲು ಭಾಗ (ಶೇ.73) ಉದ್ಯೋಗವನ್ನು ಒದಗಿಸುತ್ತವೆ ಆದರೆ ಈ ಸಂಸ್ಥೆಗಳು ಕೇವಲ ಶೇ.12 ಮಾತ್ರ ಒಟ್ಟಾರೆ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.
ಸರಕಾರದ ಉದ್ಯೋಗ ಅಂಕಿಅಂಶಗಳು ಏನೇ ಹೇಳಿದರೂ ಇಂಜಿನಿಯರಿಂಗ್, ಅಟೊಮೊಬೈಲ್ ಮತ್ತು ಜವುಳಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಗಂಭೀರವಾಗಿ ಕ್ಷೀಣಿಸುತ್ತಿವೆ. ಜವಳಿ ಕ್ಷೇತ್ರದಲ್ಲಿ ಉದ್ಯೋಗ ಕಡಿಮೆಯಾಗುತ್ತದೆ ಎಂಬುದನ್ನು ತಿಳಿಸಲು ಅವರು ತ್ರಿಪುರಾ ಮತ್ತು ಬೆಂಗಳೂರಿನ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಇಲ್ಲಿ ಜವಳಿ ಉದ್ಯೋಗ ಹಲವು ತಿಂಗಳುಗಳಿಂದ ನಿಂತಲ್ಲೇ ನಿಂತಿದೆ ಎಂದು ವಿವಿಧ ಕಾರ್ಮಿಕ ಮುಖಂಡರು ಅಭಿಪ್ರಾಯ ಪಡುತ್ತಾರೆ.
ಸಮೀಕ್ಷೆ ತಿಳಿಸುವಂತೆ ಯುಪಿಎ ಸರಕಾರದ ಎರಡನೆ ಅವಧಿಯಲ್ಲಿ ಪ್ರತೀ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಎಂಟು ಕ್ಷೇತ್ರಗಳಲ್ಲಿ ಅತೀಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿತ್ತು. 2010ರ ಮೊದಲ ಒಂಬತ್ತು ತಿಂಗಳಲ್ಲಿ 6.58 ಲಕ್ಷ ಉದ್ಯೋಗಗಳು ಸೇರಿದ್ದವು; 2011ರಲ್ಲಿ 7.04 ಲಕ್ಷ, 2012ರ ವರ್ಷ ಪೂರ್ತಿ 3.22 ಲಕ್ಷ ಮತ್ತು 2013ರ ಒಂಬತ್ತು ತಿಂಗಳಲ್ಲಿ 3.36 ಲಕ್ಷ. 2014ರ ಒಂಬತ್ತು ತಿಂಗಳಲ್ಲಿ 3.76 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿತ್ತು. ಆದರೆ ಅತೀ ಹೆಚ್ಚು ಉದ್ಯೋಗ ಎಪ್ರಿಲ್ ಮತ್ತು ಜೂನ್ ಮಧ್ಯದಲ್ಲಿ ಅಂದರೆ 1.82 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು ಮತ್ತು ಆನಂತರ ಜುಲೈ-ಸೆಪ್ಟಂಬರ್ ಹೊತ್ತಿಗೆ 1.58 ಲಕ್ಷಕ್ಕಿಳಿದು ಮುಂದೆ ವರ್ಷದ ಅಂತ್ಯದಲ್ಲಿ 1.17 ಲಕ್ಷಕ್ಕೆ ಕುಸಿಯಿತು. ಮೇಕ್ ಇನ್ ಇಂಡಿಯಾ ಎಂದರೆ, ಈ ದೇಶದ ಸಕಲ ಸವಲತ್ತುಗಳನ್ನು ನೀಡಿ ವಿದೇಶಿ ಕಂಪೆನಿಗಳನ್ನು ಆಕರ್ಷಿಸುವುದಷ್ಟೇ ಅಲ್ಲ. ಆ ಆಕರ್ಷಣೆ ಭಾರತೀಯ ಜನಜೀವನದ ಸುಧಾರಣೆಯ ಕಾರಣಕ್ಕಾಗಿ ಇರಬೇಕು. ಮೇಲ್ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ, ತಳಮಟ್ಟವನ್ನು ನಾಶ ಪಡಿಸುತ್ತಾ ಹೋದರೆ, ಅದು ಶಾಶ್ವತ, ಸಮಗ್ರ ಅಭಿವೃದ್ಧಿಯಾಗಲಾರದು. ಮೇಲ್ನೋಟಕ್ಕೆ ಅಭಿವೃದ್ಧಿಯಂತೆ ಕಂಡರೂ, ಕಂಡ ಕನಸು ನಮ್ಮ ದೇಶದ ಪಾಲಿಗೆ ದುಃಸ್ವಪ್ನವಾಗುವ ಸಾಧ್ಯತೆಗಳಿವೆ. ಆದುದರಿಂದ, ಜನಾಕ್ರೋಶಕ್ಕೆ ಮುನ್ನಾ ನಮ್ಮ ಪ್ರಧಾನಿ, ಆಕಾಶದಿಂದ ಇಳಿದು ದೇಶದ ನೆಲದ ಜನರ ಕಡೆಗೊಮ್ಮೆ ದೃಷ್ಟಿ ಹಾಯಿಸುವುದು ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.







