ಸಮಾನ ಶಿಕ್ಷಣ ಜಾರಿಯಿಂದ ಅಂಬೇಡ್ಕರ್ಗೆ ಗೌರವ: ವೆಂಕಟ ಗಿರಿಯಯ್ಯ
ಮಂಗಳೂರು, ಎ. 18: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರ ಸಂವಿಧಾನವನ್ನು ಗೌರವಿಸುವುದಾಗಿ ಹೇಳುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಾನ ಶಿಕ್ಷಣವನ್ನು ಜಾರಿಗೊಳಿಸುವ ಕಾರ್ಯ ಮಾಡಬೇಕು ಎಂದು ದಸಸಂಸ ರಾಜ್ಯ ಸಂಚಾಲಕ ವೆಂಕಟ ಗಿರಿಯಯ್ಯ ಸವಾಲು ಹಾಕಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ರವರ 125ನೆ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪುರಭವನದಲ್ಲಿ ಆಯೋಜಿಸಲಾದ ಶೋಷಿತರ ಚಿಂತನಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಂಬೇಡ್ಕರ್ವರ ಸಂವಿಧಾನದ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಆದರೆ ಇಂದು ದುಬಾರಿ ಶುಲ್ಕದಿಂದಾದಿಗ ದಲಿತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣದ ಮೆಟ್ಟಲು ಹತ್ತಲು ಸಾಧ್ಯವಾಗುತ್ತಿಲ್ಲ. ಶಿಕ್ಷಣದ ವ್ಯಾಪಾರೀಕರಣದ ಜತೆಯಲ್ಲಿ ಕೋಮುವಾದೀಕರಣ ಶೋಷಿತರನ್ನು ಶಿಕ್ಷಣದಿಂದ ದೂರವಿರಿಸಿದೆ. ಭೂಮಿ, ವಿದ್ಯೆ ಹಾಗೂ ಕೈಗಾರಿಕೆಗಳು ರಾಷ್ಟ್ರೀಕರಣಗೊಳ್ಳಬೇಕೆಂಬುದು ಅಂಬೇಡ್ಕರ್ ಬಯಕೆ. ಆದ್ದರಿಂದ ಯಾವುದೇ ಜಾತಿ, ಧರ್ಮ, ಮತಗಳ ಸೋಂಕಿಲ್ಲದ ಸಮಾನ ಶಿಕ್ಷಣ ಜಾರಿಗೆ ಕೇಂದ್ರ ಸರಕಾರ ಮುಂದಾದಾಗ ಮಾತ್ರವೇ ಅಂಬೇಡ್ಕರ್ರವರಿಗೆ ಗೌರವ ನೀಡಿದಂಾಗುವುದು ಎಂದವರು ಹೇಳಿದರು.
ಜಾತಿ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಆರ್ಎಸ್ಎಸ್, ಬಿಜೆಪಿ ಇಂದು ಅದನ್ನು ಒಪ್ಪಿಕೊಳ್ಳುವುದಾಗಿ ಹೇಳುವ ಮೂಲಕ ಅಂಬೇಡ್ಕರ್ರವರ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಇದೀಗ ಜ್ಞಾನೋದಯವಾಗಿರುವ ಕಾರಣ ಅಂಬೇಡ್ಕರ್ ಜಯಂತಿಯನ್ನು ಜ್ಞಾನೋದಯ ದಿನವನ್ನಾಗಿ ಆಚರಿಸಬೇಕು. ಕೇಂದ್ರ ಸರಕಾರದಿಂದ ದೇಶದಲ್ಲಿ ಶಿಕ್ಷಣ ಹಾಗೂ ಅಧಿಕಾರವನ್ನು ಸರ್ವರಿಗೂ ಸಮಾನವಾಗಿ ಹಂಚುವ ದಿನವಾಗಿ ಆಚರಿಸಬೇಕು. ಅದರ ಹೊರತು ದೇಶವನ್ನು ಸ್ವಚ್ಛತೆಯಿಂದ ಕಾಪಾಡುವ ಜನರಿಗೆ ಒಂದು ಹೊತ್ತಿನ ಊಟವನ್ನು ನೀಡಲಾಗದ ಸರಕಾರ ಬಾಬಾ ಸಾಹೇಬ್ ಅಂಬೇಡ್ಕರ್ರವರ ಸ್ಮಾರಕ ಕಟ್ಟುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ ಎಂದು ಅರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಜಾತಿ, ವರ್ಗ, ಲಿಂಗ, ಬೇಧ ರಹಿತ ಸಾಮಾಜಿಕ ಆರ್ಥಿಕ ಸಮಾನತೆಯ ಪ್ರಬುದ್ಧ ಭಾರತ ನಿರ್ಮಾಣದ ಕನಸು ಅಂಬೇಡ್ಕರ್ರವರದ್ದಾಗಿತ್ತುತ. ಆದರೆ ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರಕಾರ ಮಾಡುವ ರಾಜಕೀಯ ಪಕ್ಷಗಳು ಆ ಆಶಯಗಳನ್ನು ಬುಡಬೇಲು ಮಾಡಿ ಮೋಸ, ವಂಚನೆಯ ಮೂಲಕ ಹಣಚೆಲ್ಲಿ ಮತದಾರರನ್ನು ಭ್ರಷ್ಟರನ್ನಾಗಿಸುವ ಕಾರ್ಯ ನಡೆಸುತ್ತಿವೆ. ಮನುವಾದಿ ರಾಜಕೀಯ ಪಕ್ಷಗಲು ಅಕ್ರಮ ಚುನಾವಣಾ ವ್ಯವಸ್ಥೆಯನ್ನು ನಡೆಸುತ್ತಿರುವುದು ಅಂಬೇಡ್ಕರ್ರವರ ಆಶಯಕ್ಕೆ ಮಾಡುತ್ತಿರುವ ಕಳಂಕ. ಜಾತಿ ಹೆಸರಿನಲ್ಲಿ ಮರ್ಯಾದೆ ಹತ್ಯೆ, ಹಿಂದೂ- ಮುಸ್ಲಿಮರು ಒಟ್ಟಿಗೆ ಜೀವಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾನವೀಯ ಹಾಗೂ ವಿಶ್ವಶ್ರೇಷ್ಠವಾದ ಅಂಬೇಡ್ಕರ್ ಸಂವಿಧಾನದ ವಿರೋಧಿ ಎಂದವರು ಹೇಳಿದರು.
ರಾಜ್ಯ ಸರಕಾರವನ್ನು ಕೂಡಾ ತರಾಟೆಗೈದ ಅವರು, ಅಹಿಂದ ನಾಯಕನಾಗಿ ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರದಲ್ಲೂ ಪೌರ ಕಾರ್ಮಿಕರನ್ನು ಹೊರಗುತ್ತಿಗೆಗೆ ದುಡಿಸುತ್ತಿರುವುದು ಶೋಚನೀಯ ಎಂದರು.
ಪೌರ ಕಾರ್ಮಿಕರನ್ನು ಹೊರಗುತ್ತಿಗೆ ನೇಮಿಸುವವರು, ಐಎಎಸ್, ಐಪಿಎಸ್ನಂತಹ ಸ್ಥಾನಗಳನ್ನು ಹೊರಗುತ್ತಿಗೆಗೆ ಯಾಕೆ ನೇಮಕ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ವೆಂಕಟ ಗಿರಿಯಯ್ಯ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಬೀದರ್ನ ಬುದ್ಧವಿಹಾರದ ಆನಂದ ಬೋಧಿಯ ಸಂಗಪಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಸಂಸ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಎಂ. ದೇವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಮಾಜ ಸೇವಕ ಆರ್ಥರ್ ಪಿರರಾ, ವಿವಿ ಸಹಾಯಕ ಪ್ರಾಧ್ಯಾಪಕಿ ಸಬಿತಾ, ಚಂದ್ರಹಾಸ, ರಾಜ್ಯ ಸಂಘಟನಾ ಸಂಚಾಲಕ ಸೋಮಶೇಖರ್, ಬೆಳ್ತಂಗಡಿ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಕೆ. ರಾಜು, ಎಂ. ಕೂಸಪ್ಪ ಪುತ್ತೂರು, ಪ್ರೊ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ದಲಿತ ಕಲಾ ಮಂಡಳಿಯ ಎಂ. ಸಂಕಪ್ಪ ಕಾಂಚನ್ ಮತ್ತು ಬಳಗದವರು ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ಬಾವುಟಗುಡ್ಡೆಯಿಂದ ಪುರಭವನದವರೆಗೆ ಜನ ಕಲಾಮೇಳ ಜಾಥಾ ನಡೆಯಿತು. ದಸಂಸ ಜಿಲ್ಲಾ ಪದಾಧಿಾರಿ ಕೃಷ್ಣಾನಂದ ಡಿ. ಸ್ವಾಗತಿಸಿದರು.
ಬಿಜೆಪಿಯ ಹಿಂದುತ್ವಕ್ಕೆ ಪರ್ಯಾಯ ರಾಷ್ಟ್ರೀಯತೆ: ದಿನೇಶ್ ಅಮೀನ್ಮಟ್ಟು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಹಿಂದುತ್ವ ರಾಜಕಾರಣದ ಗುಪ್ತ ಅಜೆಂಡಾವನ್ನು ಸಾಕಾರಗೊಳಿಸಲು ಸಾಧ್ಯವಾಗದ ವೇಳೆ ಮನುವಾದಿಗಳು ಕಂಡುಕೊಂಡ ಪರ್ಯಾಯ ಮಾರ್ಗವೇ ರಾಷ್ಟ್ರೀಯತೆಯ ಮುಖವಾಡ. ಇಂತಹ ವ್ಯವಸ್ಥೆಯಲ್ಲಿ ಡಾ. ಅಂಬೇಡ್ಕರ್ ಜತೆಗೆ ಬುದ್ಧ, ನಾರಾಯಣಗುರು, ಅಂಬೇಡ್ಕರ್ರವರ ಆಶಯಗಳ ಅಪಹರಣ ನಡೆಸಲಾಗುತ್ತಿದೆ. ಈ ಬಗೆ್ಗ ಎಚ್ಚೆತ್ತುಕೊಳ್ಳಬೇಕು ಎಂದರು.
ಹಿಂದುತ್ವದ ಹೆಸರಿನಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಬಿಜೆಪಿ ಸರಕಾರ ರಚಿಸಿದ್ದರೂ ರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನವನ್ನು ಹಿಂದಕ್ಕೆ ಪಡೆಯುವುದು ಮೊದಲಾದ ತನ್ನ ಗುಪ್ತ ಅಜೆಂಡಾಗಳನ್ನು ನೆರವೇರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಹಿಂದುತ್ವಕ್ಕೆ ಪರ್ಯಾಯವಾಗಿ ರಾಷ್ಟ್ರೀಯತೆಯ ಮಾತುಗಳನ್ನಾಡುವವರ ರಾಷ್ಟ್ರಭಕ್ತಿ, ದೇಶಪ್ರೇಮ ಏನೆಂಬುದನ್ನು ಅರಿಯುವುದು ಅಗತ್ಯವಾಗಿದೆ. ದೇಶದಲ್ಲಿ ಪ್ರತಿದಿನ 16 ದಲಿತರು ಸವರ್ಣೀಯರ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. 4 ಮಂದಿ ಹೆಣ್ಣು ಮಕ್ಕಳು ಮಾನಭಂಗಕ್ಕೀಡಾಗುತ್ತಿದ್ದಾರೆ. 4 ಮಂದಿ ದಲಿತರ ಕಗ್ಗೊಲೆ ನಡೆಯುತ್ತಿದೆ. ಜನಸಂಖ್ಯೆಯ ಶೇ. 20ರಷ್ಟಿರುವ ದಲಿತರಲ್ಲಿ ಶೇ. 70 ರಷ್ಟು ಮಂದಿ ಭೂಮಿ ಇಲ್ಲದವರಾಗಿದ್ದಾರೆ. ಈ ಬಗ್ಗೆ ಗಮನ ಹರಿಸುವುದು ಅತೀ ಅಗತ್ಯ ಎಂದವರು ಹೇಳಿದರು.