ಹಿಂದೂ ಮಹಾಸಭಾ, ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಇರಲೇ ಇಲ್ಲ
ಇತಿಹಾಸ ತಜ್ಞೆ ಮೃದುಲಾ ಮುಖರ್ಜಿ

ಅಲಿಘಡ,ಎ.18: ಎಲ್ಲ ತೃತೀಯ ವಿಶ್ವ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ರಾಷ್ಟ್ರೀಯವಾದದ ಪರಿಕಲ್ಪನೆಯು ‘ಸಾಮ್ರಾಜ್ಯಶಾಹಿ ವಿರೋಧಿ ಮತ್ತು ವಸಾಹತುಶಾಹಿ’ ವಿರೋಧಿ ವಾದಗಳಿಂದಲೇ ಮೂಡಿ ಬಂದಿದೆ ಮತ್ತು ಹಿಂದುತ್ವ ಸಿದ್ಧಾಂತ ಪ್ರತಿಪಾದಕರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖ್ಯಾತ ಇತಿಹಾಸತಜ್ಞೆ ಮೃದುಲಾ ಮುಖರ್ಜಿ ಅವರು ಹೇಳಿದ್ದಾರೆ.
ಪ್ರಸಕ್ತ ಭಾರತೀಯ ರಾಷ್ಟ್ರೀಯವಾದದ ಗುತ್ತಿಗೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯವಾದದ ಹಿಂದುತ್ವ ಬ್ರಾಂಡಿನ ಪ್ರತಿಪಾದಕರಿಗೆ ವಸಾಹತು ಶಾಹಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ವಾದಗಳ ಪರಿಕಲ್ಪನೆಗಳೊಂದಿಗೆ ಸಂಬಂಧವೇ ಇರಲಿಲ್ಲ ಎನ್ನುವುದು ದೊಡ್ಡ ವ್ಯಂಗ್ಯವಾಗಿದೆ. ಯಾವುದೇ ರಾಷ್ಟ್ರೀಯವಾದದ ಇತರ ಮೂರು ಅಗತ್ಯ ಅಂಶಗಳಾಗಿರುವ ಸಮಾನತೆ,ನಾಗರಿಕ ಸ್ವಾತಂತ್ರಗಳು ಮತ್ತು ಪ್ರಜಾಪ್ರಭುತ್ವ ಇವುಗಳಿಗೆ ಹಿಂದುತ್ವ ಬ್ರಾಂಡಿನ ರಾಷ್ಟ್ರೀಯವಾದದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಮಾಜಿ ನಿರ್ದೇಶಕಿಯಾಗಿರುವ ಮುಖರ್ಜಿ ಆರೋಪಿಸಿದರು. ಅವರು ರವಿವಾರ ಸಂಜೆ ಅಲಿಘಡ ಮುಸ್ಲಿಮ್ ವಿವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದರು.
1942ರಲ್ಲಿ ದೇಶಕ್ಕೆ ಸ್ವಾತಂತ್ರ ದೊರೆಯಲು ಕೆಲವೇ ವರ್ಷಗಳು ಬಾಕಿ ಇದ್ದಾಗಲೂ ಹಿಂದು ಮಹಾಸಭಾ ಮತ್ತು ಆರೆಸ್ಸೆಸ್ನಂತಹ ಸಂಘಟನೆಗಳು ಸ್ವಾತಂತ್ರ ಹೋರಾಟ ಚಳವಳಿಯಿಂದ ಉದ್ದೇಶಪೂರ್ವಕವಾಗಿ ದೂರವಿದ್ದವು. ‘ಚಲೇಜಾವ್’ಚಳವಳಿಯಲ್ಲಿ ಈ ಸಂಘಟನೆಗಳ ಪಾತ್ರ ಏನೂ ಇರಲಿಲ್ಲ ಎಂದು ಅವರು ಬೆಟ್ಟು ಮಾಡಿದರು.





