ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಬೆಂಗಳೂರಿನಲ್ಲಿ ನಾಲ್ವರ ಬಂಧನ
ಶಿವಮೊಗ್ಗ, ಎ. 18: ರೈಲ್ವೆಯಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ನಿರುದ್ಯೋಗಿಗಳಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ಲೋಕೇಶ್ (50), ಮೀನಾಕ್ಷಮ್ಮ (51), ಪ್ರಕಾಶ್ (40) ಹಾಗೂ ಯಶವಂತಪ್ಪ (45) ಬಂಧಿತ ಆರೋಪಿ ಗಳೆಂದು ಗುರುತಿಸಲಾಗಿದೆ. ಇತ್ತೀಚೆಗೆ ಇದೇ ಜಾಲದ ಓರ್ವ ಆರೋಪಿ ಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಒಟ್ಟಾರೆ ಇಲ್ಲಿಯವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದಂತಾಗಿದೆ. ಸಬ್ ಇನ್ಸ್ಪೆಕ್ಟರ್ ಉಮೇಶ್ಕುಮಾರ್ ನೇತೃತ್ವದ ಪೊಲೀಸ್ ತಂಡ ಈ ಎಲ್ಲ ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿ ಯಾಗಿದೆ. ಈ ವಂಚನಾ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಕೆಲವರು ತಲೆಮರೆಸಿ ಕೊಂಡಿ ದ್ದಾರೆನ್ನಲಾಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಜಾಲ ಬೀಸಿದ್ದಾರೆ. ಹಲವೆಡೆ ವಂಚನೆ:
<ರೈಲ್ವೆ ಇಲಾಖೆ ಯಲ್ಲಿ ‘ಸಿ’ ಹಾಗೂ ‘ಡಿ’ ಗ್ರೂಪ್ ಹುದ್ದೆ ಕೊಡಿಸುವುದಾಗಿ ನಿರುದ್ಯೋಗಿಗಳು ಹಾಗೂ ಅವರ ಪೋಷಕರಿಗೆ ಆಮಿಷವೊಡ್ಡುತ್ತಿದ್ದ ವಂಚಕರು, ಲಕ್ಷಾಂತರ ರೂ. ಪಡೆದು ಕೊಳ್ಳು ತ್ತಿದ್ದರು. ಹಣ ಪಡೆದುಕೊಂಡ ನಂತರ ಕೆಲಸ ಕೊಡಿಸದೆ ವಂಚಿಸಿ ಪರಾರಿಯಾಗುತ್ತಿದ್ದರು. ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ಹಲವೆಡೆ ವಂಚನಾ ಜಾಲದವರು ನಾಗರಿಕರಿಗೆ ಮೋಸ ಮಾಡಿರುವ ಮಾಹಿತಿಯಿದ್ದು, ವಂಚನಾ ಮೊತ್ತ ನಾಲ್ಕೈದು ಕೋಟಿ ರೂ. ಮೀರಿರುವ ಸಾಧ್ಯತೆ ಯಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತಿದ್ದು, ಉನ್ನತ ಮಟ್ಟದ ತನಿಖೆಯ ನಂತರವಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ. ಕೇಸ್ ದಾಖಲು: ಪ್ರಸ್ತುತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಂಚನಾ ಜಾಲದ ವಿರುದ್ಧ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ವಂಚನಾ ಮೊತ್ತ 45 ಲಕ್ಷ ರೂ.ಗಳಿಗೂ ಅಧಿಕ ಎನ್ನಲಾಗಿದೆ. ಉಳಿದಂತೆ ನಗರದ ದೊಡ್ಡಪೇಟೆ, ಜಯನಗರ, ಕೋಟೆ ಪೊಲೀಸ್ ಠಾಣೆಗಳಲ್ಲಿಯೂ ವಂಚನಾ ಜಾಲದ ವಿರುದ್ಧ ದೂರುಗಳು ದಾಖಲಾಗಿವೆ.
ಈ ನಡುವೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ, ಚೆನ್ನಗಿರಿ ಪೊಲೀಸ್ ಠಾಣೆ ಗಳ ಲ್ಲಿಯೂ ವಂಚನಾ ಜಾಲದ ವಿರುದ್ಧ ಕೇಸ್ಗಳು ದಾಖಲಾಗಿವೆ ಎಂದು ಸ್ಥಳೀಯ ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. ಪ್ರಸ್ತುತ ವಂಚನೆಗೊಳಗಾದ ಹಲವು ವ್ಯಕ್ತಿಗಳು ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಾರೆ.







