ಪ್ರಗತಿಪರ ಚಿಂತಕರು, ಕಲಾವಿದರ ಒಕ್ಕೂಟದಿಂದ ಪ್ರತಿಭಟನೆ
ಉಪನ್ಯಾಸಕನ ವಿರುದ್ಧ ಬಿಜೆಪಿಯಿಂದ ದೇಶದ್ರೋಹದ ದೂರು
ಶಿವಮೊಗ್ಗ, ಎ. 18: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಇತ್ತೀಚೆಗೆ ತಾಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ. ್ಢಆರ್.ಅಂಬೇಡ್ಕರ್ ಜನ್ಮದಿನೋತ್ಸವ ಕಾರ್ಯ ಕ್ರಮದಲ್ಲಿ, ಉಪನ್ಯಾಸ ಭಾಷಣ ಮಾಡಿದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನ ಪೊ. ಮೇಟಿ ಮಲ್ಲಿಕಾರ್ಜುನ್ರವರು ದೇಶದ್ರೋಹದ ಭಾಷಣ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿರುವ ಬಿಜೆಪಿ ಯುವ ಮೋರ್ಚಾ ಕ್ರಮವನ್ನು ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ. ಈ ಸಂಬಂಧ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರಗತಿಪರ ಚಿಂತಕರು ಹಾಗೂ ಕಲಾವಿದರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು. ಬಿಜೆಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೇಟಿ ಮಲ್ಲಿಕಾರ್ಜುನರವರು ತಮ್ಮ ಭಾಷಣದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾದ ದಿಲ್ಲಿ ಜವಾಹರಲಾಲ್ ವಿವಿಯ ಕನ್ಹಯಾ ಕುಮಾರ್ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಇದನ್ನೇ ಅಪರಾಧ ಎಂಬಂತೆ, ದೇಶದ್ರೋಹದ ಭಾಷಣ ಎಂಬಂತೆ ಬಿಂಬಿಸಲಾಗಿದೆ. ಅಂಬೇಡ್ಕರ್ ವಿಚಾರಧಾರೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇರುವವರು ಸಹ ಈ ರೀತಿಯ ಆರೋಪವನ್ನು ಮಾಡಲಾರರು ಎಂದು ಮನವಿಯಲ್ಲಿ ದೂರಲಾಗಿದೆ. ಮತೀಯ ಶಕ್ತಿಗಳು ಭಾರತ ಮಾತೆ, ದೇಶದ್ರೋಹ, ದೇಶಭಕ್ತಿ, ಧಾರ್ಮಿಕ ಅಸಹಿಷ್ಣುತೆ ಮೊದಲಾದ ವಿಚಾರಗಳನ್ನು ಕೈಗೆತ್ತಿಕೊಂಡು ಸಾಮರಸ್ಯ ಕದಡಲು ಯತ್ನಿಸುತ್ತಿವೆ. ಈ ಮೂಲಕ ಸಂವಿಧಾನ ಪ್ರತಿಪಾದಿಸಿರುವ ಸಮಾನತೆ, ಸಹೋದರತೆ, ಭಾವೈ ಕ್ಯತೆಯ ಆದರ್ಶಗಳಿಗೆ ಕೊಡಲಿ ಪೆಟ್ಟು ಕೊಟ್ಟು ದೇಶದ ಬಹುಸಂಸ್ಕೃತಿಯನ್ನು ನಾಶ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಉಪನ್ಯಾಸಕರು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಕಾರಣಗಳೊಂದಿಗೆ ಭಿನ್ನಾಭಿಪ್ರಾಯ ದಾಖಲಿಸುವ ಸ್ವಾತಂತ್ರ್ಯವಿದೆ. ವಾದವನ್ನು ಪ್ರತಿವಾ ದದಿಂದ ಎದುರಿಸಬೇಕೇ ಹೊರತು ವಿವಾದ ಮಾಡು ವುದರಿಂದಲ್ಲ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿ.ಆರ್.ಲವ, ಎಂ. ಸಂತೋಷ್, ವಾಸು ನಾಯ್ಕ, ಡಿ.ಮಂಜುನಾಥ್, ಪ್ರೇಮಾ, ಎಚ್.ಎಂ.ರಾಧಾ, ಲಕ್ಷ್ಮೀನಾರಾಯಣ, ಕೊಟ್ರಪ್ಪ ಹಿರೇಮಾಗಡಿ, ರಾಜೇಂದ್ರ ಬುರಡಿಕಟ್ಟಿ, ಎಂ.ಉಮೇಶ್, ಎಚ್.ಟಿ.ನವೀನ, ಟಿ.ಪಿ.ಭಾಸ್ಕರ್ ಉಪಸ್ಥಿತರಿದ್ದರು.





